ಬೆಂಗಳೂರು: ಕೆ.ಆರ್.ಪುರ ಸಮೀಪದ ಅವಲಹಳ್ಳಿ ಬಳಿ ಭಾನುವಾರ ರಾತ್ರಿ ಲಾರಿಗೆ ಕಾರು ಡಿಕ್ಕಿ ಹೊಡೆದಿದ್ದರಿಂದ ಚಾಲಕ ಮಧು (28) ಎಂಬುವರು ತೀವ್ರವಾಗಿ ಗಾಯಗೊಂಡಿದ್ದಾರೆ.
‘ಹೊಸಕೋಟೆಯಿಂದ ನಗರಕ್ಕೆ ಬರುತ್ತಿದ್ದ ಲಾರಿಗೆ ಚೀಮಸಂದ್ರದ ಬಳಿ ಕೈ ಮಾಡಿದ್ದ ಸಂಚಾರ ಕಾನ್ಸ್ಟೆಬಲ್, ನಿಲ್ಲಿಸುವಂತೆ ಸೂಚಿಸಿದ್ದರು. ಆಗ ಚಾಲಕ ವಸಂತರಾವ್, ಲಾರಿಯನ್ನು ರಸ್ತೆ ಮಧ್ಯೆಯೇ ನಿಲ್ಲಿಸಿದ್ದರು.’
‘ಅದೇ ವೇಳೆ ಹಿಂದಿನಿಂದ ವೇಗವಾಗಿ ಬಂದ ಕಾರು ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಚಾಲಕ ಮಧು ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ಅವರನ್ನು ಸ್ಥಳೀಯರೇ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.
ರಸ್ತೆ ಮಧ್ಯೆಯೇ ವಾಹನ ತಪಾಸಣೆ: ‘ಚೀಮಸಂದ್ರದ ಬಳಿ ರಸ್ತೆ ಮಧ್ಯೆಯೇ ನಿಂತು ಸಂಚಾರ ಪೊಲೀಸರು, ವಾಹನಗಳ ತಪಾಸಣೆ ನಡೆಸುತ್ತಾರೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ’ ಎಂದು ಸ್ಥಳೀಯರು ದೂರಿದರು.
‘ಪ್ರತಿದಿನವೂ ಸಾವಿರಾರೂ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ವೇಗವಾಗಿ ಹೋಗುವ ವಾಹನಗಳನ್ನು ಏಕಾಏಕಿ ನಿಲ್ಲಿಸಿದರೆ, ಹಿಂದಿನಿಂದ ಬರುವ ವಾಹನಗಳಿಗೆ ತೊಂದರೆಯಾಗುತ್ತಿದೆ’ ಎಂದು ಅವರು ಹೇಳಿದರು.