ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ: ಚುನಾವಣಾ ಹಿಂಸೆಗೆ 8 ಜನರು ಬಲಿ

ಶೇಕಡ 6.5 ರಷ್ಟು ಮತದಾನ
Last Updated 9 ಏಪ್ರಿಲ್ 2017, 20:14 IST
ಅಕ್ಷರ ಗಾತ್ರ

ಶ್ರೀನಗರ: ಶ್ರೀನಗರ ಲೋಕಸಭಾ ಉಪಚುನಾವಣೆಯ ಮತದಾನದ ವೇಳೆ ನಡೆದ ಹಿಂಸಾಚಾರವನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಹಾರಿಸಿದ ಗುಂಡಿಗೆ 8 ನಾಗರಿಕರು ಬಲಿಯಾಗಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.

ಚುನಾವಣೆ ಬಹಿಷ್ಕರಿಸಿದ್ದ ಪ್ರತ್ಯೇಕತಾವಾದಿಗಳು ನಡೆಸಿದ ಕಲ್ಲು ತೂರಾಟದಲ್ಲಿ 100 ಜನ ಭದ್ರತಾ ಸಿಬ್ಬಂದಿ ಮತ್ತು 17 ನಾಗರಿಕರು ಗಾಯಗೊಂಡಿದ್ದಾರೆ.

‘ಬೆಳಿಗ್ಗೆ ಮತದಾನ ಆರಂಭವಾದ ಸಮಯದಲ್ಲೇ ಪ್ರತ್ಯೇಕತಾವಾದಿಗಳು ಬಡಗಾಮ್‌ ಮತ್ತು ಗಾಂಧರಬಲ್  ಜಿಲ್ಲೆಗಳ ಹಲವೆಡೆ, ಮತಗಟ್ಟೆಗಳ ಮೇಲೆ ಕಲ್ಲು ತೂರಿದ್ದಾರೆ. ನಂತರ 20 ಮತಗಟ್ಟೆಗಳಿಗೆ ಹಾಗೂ ಅವುಗಳ ಬಳಿ ನಿಂತಿದ್ದ 12 ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. 100 ಮತಗಟ್ಟೆಗಳಲ್ಲಿ ಇದ್ದ ಭದ್ರತಾ ಸಿಬ್ಬಂದಿ ಮತ್ತು ಚುನಾವಣಾ ಸಿಬ್ಬಂದಿ ಮತಗಟ್ಟೆಗಳನ್ನು ಬಿಟ್ಟು ಓಡಿಹೋಗಿದ್ದಾರೆ. ಹೀಗಾಗಿ ಚುನಾವಣಾ ಕರ್ತವ್ಯದಲ್ಲಿದ್ದ ಗಡಿ ಭದ್ರತಾ ಪಡೆ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ ಸಿಬ್ಬಂದಿ ನೆರವಿಗೆ ಸೇನೆಯನ್ನು ಕರೆಸಲಾಯಿತು’ ಎಂದು ಮೂಲಗಳು ತಿಳಿಸಿವೆ.

‘ಬಡಗಾಮ್‌ನ ಹಲವೆಡೆ ಕಲ್ಲು ತೂರಾಟ ನಡೆಸುತ್ತಿದ್ದವರ ಮೇಲೆ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದಾರೆ.  ಗುಂಡಿಗೆ ಬಲಿಯಾದ ಎಂಟೂ ಮಂದಿ 20 ವರ್ಷಕ್ಕಿಂತ ಕಡಿಮೆ ವಯಸ್ಸಿನವರು’ ಎಂದು ಮೂಲಗಳು ತಿಳಿಸಿವೆ.

‘ಗುಂಡಿಗೆ ಬಲಿಯಾದವರಲ್ಲಿ ಒಬ್ಬ ಆರನೇ ತರಗತಿ ವಿದ್ಯಾರ್ಥಿ. ಬಡಗಾಮ್‌ ಮತಗಟ್ಟೆಗಳಲ್ಲಿ ಸೇವೆಯಲ್ಲಿದ್ದ  ಹಲವು ಭದ್ರತಾ ಸಿಬ್ಬಂದಿಗೆ ಪೆಲೆಟ್‌ ಬಂದೂಕುಗಳನ್ನು ನೀಡಿರಲಿಲ್ಲ. ಕಲ್ಲು ತೂರಾಟದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಅವರು ಅನಿವಾರ್ಯವಾಗಿ ಗುಂಡು ಹಾರಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.

ಮಧ್ಯಪ್ರದೇಶದಲ್ಲೂ ಗಲಾಟೆ: ಮಧ್ಯಪ್ರದೇಶದ ಅಟೆರ್ ಮತ್ತು ಬಾಂಧವಗಡ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನದ ವೇಳೆ ಕಲ್ಲು ತೂರಾಟ ನಡೆದಿದೆ. ಅದನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇವುಗಳ ನಡುವೆಯೂ ಅಟೆರ್‌ನಲ್ಲಿ ಶೇ 60 ಮತ್ತು  ಬಾಂಧವಗಡದಲ್ಲಿ ಶೇ 65ರಷ್ಟು ಮತದಾನ ನಡೆದಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

* * *

ಶೇ 6.5ರಷ್ಟು ಮತದಾನ
‘ಸಂಜೆ ಐದರ ವೇಳೆಗೆ ಶೇ 6.5ರಷ್ಟು ಮತದಾನ ಮಾತ್ರ ನಡೆದಿದೆ. ಇದು ಮೂರು ದಶಕಗಳಲ್ಲೇ ಅತ್ಯಂತ ಕಡಿಮೆ ಪ್ರಮಾಣದ ಮತದಾನ ಎಂದು ಚುನಾವಣಾ ಆಯೋಗ ತಿಳಿಸಿದೆ. ಹಲವೆಡೆ ಜನರೇ ಮತದಾನಕ್ಕೆ ಮುಂದಾಗಲಿಲ್ಲ.  ಕಲ್ಲು ತೂರಾಟ ಆರಂಭ
ಆಗುತ್ತಿದ್ದಂತೆಯೇ ಮತದಾನ ಬಹುತೇಕ ಸ್ಥಗಿತಗೊಂಡಿತ್ತು. ಹೀಗಿದ್ದೂ, ಮತದಾನಕ್ಕೆ ಮುಂದಾದವರ ಮೇಲೆ ಪ್ರತ್ಯೇಕತಾವಾದಿಗಳು ಹಲ್ಲೆ ನಡೆಸಿದ್ದಾರೆ. 20 ಮತಗಟ್ಟೆಗಳಲ್ಲಿ ಒಂದೂ ಮತ ಚಲಾವಣೆ ಆಗಿಲ್ಲ. ಹೀಗಾಗಿ ಒಟ್ಟಾರೆ ಮತದಾನದ ಪ್ರಮಾಣ ಕುಸಿದಿದೆ’ ಎಂದು ಮೂಲಗಳು ಮಾಹಿತಿ ನೀಡಿವೆ.
* * *

ಈಗಿನ ಗಲಭೆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿರುವುದನ್ನು ತೋರಿಸುತ್ತದೆ. ಚುನಾವಣೆ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ.
ಒಮರ್‌ ಅಬ್ದುಲ್ಲಾ
ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT