ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಓಲೈಕೆಗೆ ಹೊಸ ವಿಧಾನ

ಚುನಾವಣಾ ಸುಧಾರಣೆ ಹೇಗೆ?
Last Updated 14 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಅಕ್ರಮಗಳನ್ನು ತಡೆಗಟ್ಟಲು ಸಂಸತ್ತಿನಲ್ಲಿ ಹೊಸ ಕಾನೂನುಗಳನ್ನು ಮಾಡಲಾಗುತ್ತದೆ. ಅದನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುತ್ತದೆ. ಆದರೆ, ಚುನಾವಣೆಗಳ ಸಂದರ್ಭದಲ್ಲಿ ಈ ಕಾನೂನುಗಳ ಕಣ್ಣಿಗೆ ಮಣ್ಣೆರಚುವಂತೆ ಹೊಸ ಬಗೆಯ ಅಕ್ರಮಗಳನ್ನು ನಡೆಸಲಾಗುತ್ತಿದೆ.
ಕೇಂದ್ರ ಚುನಾವಣಾ ಆಯೋಗವು ಕಾಲಕಾಲಕ್ಕೆ ಚುನಾವಣಾ ಅಕ್ರಮಗಳನ್ನು ತಡೆಯಲು ಮಾರ್ಗಸೂಚಿಗಳು ಮತ್ತು ನಿರ್ದೇಶನಗಳನ್ನು ನೀಡುತ್ತದೆ. ರಾಜ್ಯಗಳಲ್ಲಿ  ನಾವು ಚಾಚೂ ತಪ್ಪದೆ ಅನುಸರಿಸುತ್ತೇವೆ.

ಇತ್ತೀಚೆಗೆ ತಮಿಳುನಾಡಿನ ಡಾ. ರಾಧಾಕೃಷ್ಣನಗರ ಉಪಚುನಾವಣೆ ಮುಂದೂಡಿಕೆಗೆ  ಚುನಾವಣಾ ಆಯೋಗ ನೀಡಿರುವ ಕಾರಣಗಳಲ್ಲಿ, ಮತದಾರರನ್ನು ಸೆಳೆಯಲು  ಪರ್ಯಾಯ ವಿಧಾನಗಳನ್ನು ಅನುಸರಿಸುತ್ತಿರುವುದನ್ನು ಪತ್ತೆಹಚ್ಚಿದೆ. ಅಂತಹ ಅಕ್ರಮಗಳನ್ನು ತಡೆಯಲು  ಕಠಿಣ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ  ನಿರ್ಧಾರವನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ.

ಹೊಸ ವಿಧಾನ: ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಕಂಡುಕೊಂಡಿರುವ ಅಕ್ರಮಗಳ ಹೊಸ ವಿಧಾನಗಳು ಹೀಗಿವೆ–
ಮತದಾರರಿಗೆ ನೇರವಾಗಿ ಹಣವನ್ನು ನೀಡುವ ಬದಲಿಗೆ ಟೋಕನ್‌ಗಳನ್ನು ನೀಡುವುದು, ಪ್ರಿಪೇಯ್ಡ್‌  ಫೋನ್‌ ರಿಚಾರ್ಜ್‌  ಕೂಪನ್‌ಗಳು, ದಿನಪತ್ರಿಕೆಗಳ ಚಂದಾ ಹಣ, ಹಾಲಿನ ಟೋಕನ್‌, ಮತದಾರರ ಬ್ಯಾಂಕ್‌ ಖಾತೆಗಳಿಗೆ ಹಣ ಜಮೆ, ಮೊಬೈಲ್‌ ವಾಲೆಟ್‌ ಮೂಲಕ ಹಣ ವರ್ಗಾವಣೆ ಮೊದಲಾದ ವಿಧಾನ ಅಳವಡಿಸಿಕೊಳ್ಳಲಾಗುತ್ತಿದೆ.

ಈ ಹೊಸ ವಿಧಾನವು ಚುನಾವಣಾ ಆಯೋಗಕ್ಕೆ ಸವಾಲಾಗಿ ಪರಿಣಮಿಸಿದೆ. ಈ ಅಕ್ರಮಗಳ ಮೇಲೆ ಕಣ್ಣಿಡಲು ಆಯೋಗವು ವಾಣಿಜ್ಯ ತೆರಿಗೆ ಇಲಾಖೆ, ಆದಾಯ ತೆರಿಗೆ ಇಲಾಖೆಗಳ ನೆರವು ಪಡೆಯುತ್ತಿದೆ. ಅಲ್ಲದೆ, ಚುನಾವಣಾ ಸಂದರ್ಭಗಳಲ್ಲಿ ಬ್ಯಾಂಕ್‌ ಖಾತೆಗಳಲ್ಲಿ ನಡೆಯುವ ಹಣದ ವಹಿವಾಟಿನ ಮೇಲೆ ನಿಗಾ ಇಡಲಾಗುತ್ತಿದೆ ಎಂದು ಆಯೋಗ ತಿಳಿಸಿದೆ.

ನೇರವಾಗಿ ನಗದು ಹಂಚುವುದು ಕಷ್ಟವಾಗಿರುವುದರಿಂದ, ಅದರ ಬದಲಿಗೆ  ಬೆಳ್ಳಿ ದೀಪಗಳು, ಬೆಳ್ಳಿ ತಟ್ಟೆಗಳು, ಟೀ ಶರ್ಟ್‌, ಮೊಬೈಲ್‌ ಫೋನ್‌, ಸೀರೆಗಳನ್ನು ವ್ಯಾಪಕವಾಗಿ ಹಂಚಲಾಗುತ್ತದೆ. ಇವೆಲ್ಲವನ್ನು ತಡೆಗಟ್ಟಲು ಆಯೋಗವು ಚುನಾವಣಾ ಖರ್ಚು ವೆಚ್ಚಗಳ ವೀಕ್ಷಕರು ಮತ್ತು ತಂಡಗಳನ್ನು ನೇಮಿಸಿದೆ.  ಆದರೂ ಇವರೆಲ್ಲರ ಕಣ್ಣು ತಪ್ಪಿಸಲಾಗುತ್ತಿದೆ.

ಈ ರೀತಿ ನಡೆಯುವ ಅಕ್ರಮ ಚಟುವಟಿಕೆಗಳು ಆಯಾ ರಾಜಕೀಯ ಪಕ್ಷಗಳ ಉನ್ನತ ನಾಯಕರ ಗಮನಕ್ಕೆ ಬಾರದೆ ನಡೆಯುತ್ತವೆ ಎಂಬುದನ್ನು ನಂಬಲು ಆಗುವುದಿಲ್ಲ. ಅಲ್ಲದೆ, ಪಕ್ಷಗಳ ಉಸ್ತುವಾರಿ ಹೊತ್ತವರ ಬೆಂಬಲ ಇಲ್ಲದೆ ಈ ಅಕ್ರಮ ಚಟುವಟಿಕೆಗಳು ನಡೆಯವು. ಅಭ್ಯರ್ಥಿಗಳಾಗಲಿ, ಉಸ್ತುವಾರಿ ವಹಿಸಿದವರಾಗಲಿ ಈ ಅಕ್ರಮಗಳ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಪ್ರಜಾಪ್ರಭುತ್ವದ ಆದರ್ಶ, ಆಶಯ ಉಳಿದು ಗಟ್ಟಿಯಾದ ಬೇರುಗಳನ್ನು ಬಿಡಬೇಕಾದಲ್ಲಿ ತಡಮಾಡದೆ ಕಾನೂನು ಪ್ರಕಾರ ಕ್ರಮ ಜರುಗಿಸಲೇಬೇಕಾಗುತ್ತದೆ.

–ಅನಿಲ್‌ ಕುಮಾರ್‌ ಝಾ
ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ

* ನಿರೂಪಣೆ: ಎಸ್‌. ರವಿಪ್ರಕಾಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT