ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಸಂಗಾತಕ್ಕಾಗಿ ಹಂಬಲಿಸುವ ಸಖ್ಯಗೀತಗಳು

Last Updated 15 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

‘ಕೊನೆಯ ಬಾರಿಗೆ
ಹಗಲು– ಇರುಳನ್ನು
ಮತ್ತೊಮ್ಮೆ
ಗಾಢವಾಗಿ ತಬ್ಬಿಕೊಂಡು
ವಿದಾಯ ಹೇಳುವಾಗ...
ಹೃದಯ ಮೊರೆಯುತ್ತಿತ್ತು
ಈ ಸಂಜೆ
ಹೀಗೇ
ಹೆಣೆದ ಬೆರಳಲ್ಲೇ ಉಳಿದುಬಿಡಲಿ..!’

ಇವು ರೇಣುಕಾ ನಿಡಗುಂದಿ ಅವರ ‘ನಮ್ಮಿಬ್ಬರ ನಡುವೆ’ ಕವನ ಸಂಕಲನದ ಮೊದಲ ಕವನ ‘ಮೊದಲ ಭೇಟಿ’ಯ ಸಾಲುಗಳು.

ಅವನ–ಅವಳ ನಡುವಿನ ಮುಖಾಮುಖಿ ಇಲ್ಲಿನ ಎಲ್ಲ ಕವನಗಳ ಮೂಲದ್ರವ್ಯ. ಇದೊಂದು ಎಳೆಯಲ್ಲಿ ಹೆಣೆದ ಮಾಲೆಯಂತೆಯೇ ಈ ಸಂಕಲನ ಕಾಣುತ್ತದೆ. ಇಲ್ಲಿ ಅವಳು ಅವನಿಗೆ ಮುಖಾಮುಖಿಯಾಗುವುದು, ಪರಸ್ಪರ ಆವರಿಸಿಕೊಳ್ಳುವುದೆಂದರೆ ಹೆಣೆದ ಬೆರಳುಗಳಲ್ಲಿಯೇ ಉಳಿದುಬಿಡುವ ಸಂಜೆಯಂಥದ್ದು.

ಸೂರ್ಯ ಮುಳುಗಿದ ಮೇಲೆ ಆವರಿಸುವ ಕತ್ತಲನ್ನೂ – ಕರಗುವ ಬೆಳಕನ್ನೂ ಕಣ್ಣಳತೆಯಲ್ಲಿ ಗೆರೆ ಕೊರೆದಂತೆ ಗುರ್ತಿಸಲಾಗದು. ನೋಡುತ್ತಲೇ ಇದ್ದರೂ ಸಂಜೆಯ ಚಲನೆ ಗೋಚರವಾಗದು.  ಆದರೆ ಆಳದ ಅನುಭವಕ್ಕೆ ದಕ್ಕುವಂಥದ್ದು. ಅಲ್ಲಿ ಸೋಜಿಗವೂ ಇದೆ, ಸಂಕಟವೂ ಇದೆ. ಈ ಸಂಕಲನದಲ್ಲಿನ ಬಹುತೇಕ ಪದ್ಯಗಳು ‘ಅವನ’ ಜತೆಗಿನ ಸಂಬಂಧ, ಸೋಜಿಗ ಸಂಕಟಗಳ ನಡುವಿನ ಕಾವಿನಲ್ಲಿ ಪಾಕಗೊಂಡು ‘ಸಖ್ಯ’ವಾಗುವ ಹಂಬಲದಲ್ಲಿ ರಚಿತವಾದದ್ದು.

ಪ್ರೇಮವೆಂದರೆ ಹೆಣ್ಣು, ಗಂಡಿಗೆ ಶರಣಾಗುವುದಲ್ಲ, ಅದು ಇಬ್ಬರೂ ಸೇರಿ ತೂಗಬೇಕಾದ ಶಿಶು. (ಪ್ರೇಮದ ಈ ಶಿಶುವನ್ನು ತೂಗಬೇಕಿದೆ ಗೆಳೆಯ/ ಇಬ್ಬರೂ ಒಟ್ಟಿಗೆ.)
‘ಅವನು’ ಲೌಕಿಕದ ಇನಿಯನಷ್ಟೇ ಅಲ್ಲ. ಅವನ ಜತೆಗಿನ ಸಂಗಾತ ದೈಹಿಕ ಬಯಕೆಗಳ ತೀರಿಕೆಯಷ್ಟೆ ಅಲ್ಲ. ಸಂಸಾರದ ನೊಗದ ಇನ್ನೊಂದು ಬದಿ ಚಕ್ರವಷ್ಟೆಯೂ ಅಲ್ಲ. ಅದು ದೇಹದ ಮೂಲಕವೇ ಆತ್ಮಸಂಗಾತ ಬಯಸುವ, ಬೆಳೆಸುವ ದಾರಿ. ಆದ್ದರಿಂದಲೇ ಅವಳು ಅವನ ಕೆನ್ನೆಗೆ ಕೊಡುವ ಮೊದಲ ಮುತ್ತು ಅವಳ ಜಡ್ಡುಗಟ್ಟಿದ ಆತ್ಮವನ್ನೂ ಕದಲಿಸಬಲ್ಲದು.  (ಮೊದಲ ಮುತ್ತು). ಈ ಸಂಗಾತ ಪರಸ್ಪರರನ್ನು ಅರಿತುಕೊಳ್ಳುವಷ್ಟೇ ತೀವ್ರವಾಗಿ ತನ್ನನ್ನು ತಾನೇ ಕಂಡುಕೊಳ್ಳುವ ಕನ್ನಡಿಯೂ ಹೌದು.

‘ಇರಬೇಕು ನೀನು ಹೀಗೇ/ ನನ್ನ ಛಿದ್ರಗೊಂಡ ಆತ್ಮದ ತುಣುಕುಗಳನ್ನೆ/ ಫಳಪಳ ಉಜ್ಜಿ ಕನ್ನಡಿಯಂತೆ/ ಆಗಾಗ/ ನನ್ನೆದುರು ನಿಲ್ಲಿಸಿ/ ಮತ್ತೆ ಮತ್ತೆ ಕತ್ತು ಕೊಂಕಿಸಿ ನೋಡಿಕೊಳ್ಳಲು/ ಬೇಕು ನೀ ನನಗೆ...’

‘ಕನ್ನಡಿ’ ರೇಣುಕಾ ಅವರ ಕವಿತೆಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ ರೂಪಕ. ಅದೇ ಹೆಸರಿನ ಎರಡು ಕವಿತೆಗಳು ಇದೇ ಸಂಕಲನದಲ್ಲಿವೆ. ಗಂಡು ಹೆಣ್ಣಿನ ಆದರ್ಶ ಸಂಬಂಧದ ಆಶಯದಂತೆಯೇ, ಕಾಲದ ಹರಿವಲ್ಲಿ ಆಗುವ ರೂಪಾಂತರಗಳಿಂದ ಸಖ್ಯದ ಕನಸು ಮರೀಚಿಕೆಯಾಗುವ ವಿಪರ್ಯಾಸವನ್ನು ಕಾಣಿಸುವ ಆತ್ಮಸಾಕ್ಷ್ಮಿಯಾಗಿಯೂ ಕಾಣುತ್ತದೆ.

ಕನ್ನಡಿ ಅಲ್ಲೇ ಇದೆ
ದಶಕದಿಂದಲೂ...

ಕನ್ನಡಿಯೊಳಗಿನ ಗಂಟು ನಂಟು ಸಹ!!’

ಇಲ್ಲಿನ ಗಂಡು ಹೆಣ್ಣಿನ ಸಂಬಂಧದ ಚಿತ್ರಿಕೆಗಳಲ್ಲಿ ರಮ್ಯಭಾವ ಎದ್ದು ಕಾಣುತ್ತಿದ್ದರೂ ಅದರಲ್ಲಿಯೇ ಮುಳುಗಿಹೋಗುವುದಿಲ್ಲ. ಏರಲು ಬಯಸುವ ಆ ಎತ್ತರವನ್ನು ತಲುಪಲಾಗದೇ ಹೋದ ಹತಾಶೆ, ಪರಸ್ಪರ ಪಡೆದುಕೊಳ್ಳುವ ಖುಷಿಯ ಆಸುಪಾಸಿನಲ್ಲಿಯೇ ಇರುವ ಕಳೆದುಕೊಳ್ಳುವ ನಿರಾಸೆ, ಭ್ರಮನಿರಸದ ವಿಷಾದಗಳೂ ವ್ಯಕ್ತವಾಗಿವೆ.

‘ಬೆಳಗೆಂದರೆ ನೀನು/ ಪ್ರತಿ ಬೆಳಗೂ ಮರುಹುಟ್ಟು!’ ಎನ್ನುವ ಕವಯಿತ್ರಿಗೆ ಈ ಎಲ್ಲವೂ ಮೇಲು ಮೇಲಿನ ತೋರಿಕೆಯಷ್ಟೇ ಆಗಿ ಒಣ ಬತ್ತಿಯಂತೆ ಉರಿದು ಬೂದಿಯಾಗಿಬಿಡಬಹುದಾದ ದುರಂತದ ಬಗ್ಗೆಯೂ ಅರಿವಿದೆ. (‘ಎದೆ ತುಂಬ ಎಣ್ಣೆಯಿದ್ದರೂ/ ಪ್ರಣತಿಯಲ್ಲಿ/ ಬರೀ ಬತ್ತಿ ಉರಿದು/ ಸುಟ್ಟು ಕರಕಾಗಿದ್ದು/ ಇದ್ದೂ ಇಲ್ಲದಂತಿದ್ದೇನೆ ನೋಡಾ/ಅಂದಿತೆ?’)

ಕಾವ್ಯದಲ್ಲಿ ಗಂಡು–ಹೆಣ್ಣಿನ ಸಂಬಂಧವನ್ನು ದೇಹಬಯಕೆಯನ್ನು ಮೀರಿದ ಸಖ್ಯವಾಗಿ ಕಾಣಿಸಲು ಪ್ರಕೃತಿಯ ವಿವರಗಳನ್ನು ಬಳಸಿಕೊಳ್ಳುವುದು ಸುಲಭ ದಾರಿ. ರೇಣುಕಾ ಪದ್ಯಗಳಲ್ಲಿಯೂ ಆಕಾಶ, ಹಗಲು, ರಾತ್ರಿ, ಸಂಜೆ, ಸಮುದ್ರ ಮೋಡ, ಗಾಳಿ, ನಕ್ಷತ್ರ, ಮರಗಳಂಥ ವಿವರಗಳು ಹೇರಳವಾಗಿ ಕಾಣಸಿಗುತ್ತವೆ. ಆದರೆ ಎಷ್ಟೇ ಪಂಚಭೂತಗಳಲ್ಲಿ ಅಲೆದಾಡಿದರೂ ಅವರು ಕೊನೆಗೂ ಬಂದು ತಲುಪುವುದು ಈ ಬದುಕನ್ನು ಇನ್ನಷ್ಟು ತೀವ್ರವಾಗಿ ಬದುಕುವುದೇ ಮುಖ್ಯ ಎಂಬ ನಿಲುವಿಗೇ. (ನಿನ್ನನ್ನು ಪ್ರೀತಿಸುವುದೆಂದರೆ/ ಬದುಕನ್ನು ಇನ್ನಿಲ್ಲದಂತೆ/ ಬದುಕುವುದೇ ಅಲ್ಲವೇ?)

ಅಂತರಾತ್ಮದ ಅಭಿವ್ಯಕ್ತಿಯೇ ಮುಖ್ಯವಾಗಿರುವ ಕವಿಗೆ ತಮ್ಮ ರಚನೆಗಳು ಪದ್ಯವಾಗಿ ಯಶಸ್ವಿಯಾಗಲೇಬೇಕು ಎಂಬ ಹಟ ಇಲ್ಲ. ಹಾಗೆಯೇ ಮಹತ್ವವಾದದ್ದನ್ನೇನೋ ಮುಟ್ಟಬೇಕು ಎಂಬ ಮಹಾತ್ವಾಕಾಂಕ್ಷೆಯಲ್ಲಿ ಹುಟ್ಟಿಕೊಂಡ ರಚನೆಗಳೂ ಅಲ್ಲ. ಇದರಿಂದಾಗಿಯೇ ಇಲ್ಲಿನ ಕವಿತೆಗಳಲ್ಲಿ ಲಹರಿಯ ಲಘುತನ, ಸ್ವಗತದ ಏಕತಾನ ಎರಡೂ ಇದೆ. ಇದು ಇಲ್ಲಿನ ಪದ್ಯಗಳ ಮಿತಿಯೂ ಹೌದು.

ಈ ಸಂಕಲನದ ಕೊನೆಯ ಪದ್ಯ ‘ನಾವಿಬ್ಬರೂ’ ಕೊನೆಯ ಸಾಲುಗಳು ಹೀಗಿವೆ:

ನನಗೀಗ ಅಗಲಿಕೆಯೆಂದರೆ
ಒಂದು ರಾಜ್ಯ ಮುಳುಗಿ
ಒಬ್ಬ ಸೂರ್ಯ ಸತ್ತು
ಇನ್ನೊಂದು ಸಾಮ್ರಾಜ್ಯ ಕೊಳ್ಳೆಹೋಗುತ್ತಿರುವಂಥ ಸಂಕಟ
ಒಂಟಿ ಕ್ಷಣಗಳಲ್ಲಿ ಇನ್ನರ್ಧ ನಾನು
ನಿನ್ನಲ್ಲೇ ಉಳಿದುಹೋಗಿರುವ ನೆನಪು
ಬಾ ಸೇತುವೆಯ ಮೇಲೆ ಕುಳಿತು
ಆ ಅರ್ಧರ್ಧವನ್ನೂ ಪೂರ್ಣಗೊಳಿಸೋಣ’

ಸೇತುವೆಯ ಮೇಲೆ ಕುಳಿತು ಅರ್ಧರ್ಧವನ್ನು ಪೂರ್ಣಗೊಳಿಸುವ ಹಂಬಲ, ರೇಣುಕಾ ನಿಡಗುಂದಿ ಅವರ ಎಲ್ಲ ಕವಿತೆಗಳ ಹಿಂದಿನ ಒತ್ತಾಸೆಯೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT