ಲಕ್ಷ್ಮೇಶ್ವರ: ನಾಡಿನ ಐತಿಹಾಸಿಕ ದೇವಸ್ಥಾನಗಳಲ್ಲಿ ಒಂದಾದ ಮತ್ತು ಇಲ್ಲಿಯ ಆರಾಧ್ಯ ದೇವರಾದ ಸೋಮೇಶ್ವರರ ಜಾತ್ರಾ ಮಹೋತ್ಸವ ಇದೇ 4ರಿಂದ 6ರ ವರೆಗೆ ನಡೆಯಲಿದೆ.
ಇಂದಿನ ಲಕ್ಷ್ಮೇಶ್ವರಕ್ಕೆ ಹಿಂದೆ ಪುಲಿಗೆರೆ, ಹುಲಿಗೆರೆ, ಪುಲಿಕಾನಗರ, ಪುರಿಕರನಗರ ಎಂದೆಲ್ಲ ಕರೆಯುತ್ತಿದ್ದರು. ಲಕ್ಷ್ಮಣರಸ ಎಂಬ ಅರಸ ಈ ಊರಲ್ಲಿ ರಾಜ್ಯಭಾರ ಮಾಡಿದ್ದರಿಂದ ಇದಕ್ಕೆ ‘ಲಕ್ಷ್ಮಣಪುರ’ ಎಂದು ಕರೆದರು. ಅದೇ ಮುಂದೆ ‘ಲಕ್ಷ್ಮೇಶ್ವರ’ ಎಂದು ಪ್ರಸಿದ್ಧಿ ಪಡೆಯಿತು ಎಂಬುದು ಇತಿಹಾಸ ತಜ್ಞರ ಅಭಿಮತ.
ಆದಿಕವಿ ಪಂಪನು ಈ ಊರಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾನೆ ಎಂಬುದು ಮುಖ್ಯ. ಇಲ್ಲಿನ ಅನೇಕ ಐತಿಹಾಸಿಕ ಸ್ಮಾರಕಗಳು ಜಗತ್ ಪ್ರಸಿದ್ಧವಾಗಿದ್ದು ಇವುಗಳಲ್ಲಿ ಸೋಮೇಶ್ವರ ದೇವಸ್ಥಾನ ಅತ್ಯಂತ ಮಹತ್ವದ್ದಾಗಿದೆ.
ಸಂಕ್ಷಿಪ್ತ ಇತಿಹಾಸ: ಹನ್ನೊಂದನೇ ಶತಮಾನದಲ್ಲಿ ನಿರ್ಮಾಣವಾಗಿರುವ ಸೋಮೇಶ್ವರ ದೇವಾಲಯ ನೋಡಲು ಬಹಳ ಸುಂದರವಾಗಿದ್ದು , ಚಾಲುಕ್ಯ ಶಿಲ್ಪ ಶೈಲಿ ಹೊಂದಿದೆ. ಪೂರ್ವ, ದಕ್ಷಿಣ ಹಾಗೂ ಉತ್ತರ ದಿಕ್ಕುಗಳಿಂದ ದೇವಾಲಯದೊಳಗೆ ಪ್ರವೇಶ ಮಾಡಲು ಮೂರು ಬೃಹತ್ ಬಾಗಿಲುಗಳಿವೆ. ಅಲ್ಲದೆ ದೇವಸ್ಥಾನದ ಸುತ್ತಲೂ ಬೃಹತ್ ಕಲ್ಲುಗಳಿಂದ ನಿರ್ಮಿಸಿದ ದೊಡ್ಡ ಕೋಟೆಯಿದ್ದು, ಇದು ದೇವಸ್ಥಾನಕ್ಕೆ ರಕ್ಷಣೆ ಒದಗಿಸುತ್ತಿದೆ. ಗರ್ಭಗೃಹ, ಅರ್ಧ ಮಂಟಪ, ನವರಂಗ ಮತ್ತು ಮುಖ ಮಂಟಪಗಳಿಂದ ದೇವಸ್ಥಾನ ಕಂಗೊಳಿಸುತ್ತಿದೆ.
ಗರ್ಭ ಗುಡಿಯಲ್ಲಿರುವ ಶಿವ-–ಪಾರ್ವತಿಯರ ಮೂರ್ತಿಯನ್ನು ಆದಯ್ಯನೆಂಬ ಶಿವಭಕ್ತ ಸೌರಾಷ್ಟ್ರದಿಂದ ತಂದು ಪ್ರತಿಷ್ಠಾಪಿಸಿದ್ದಾನೆಂದು ಹೇಳಲಾಗುತ್ತಿದೆ. ಮೂರ್ತಿಯ ವಿಶೇಷವೇನೆಂದರೆ ಶಿವನು ತನ್ನ ಹೆಂಡತಿ ಪಾರ್ವತಿಯನ್ನು ನಂದಿ ಮೇಲೆ ಕೂಡಿಸಿಕೊಂಡು ಲೋಕ ಸಂಚಾರಕ್ಕೆ ಹೊರಟಿರುವುದು.