ನವದೆಹಲಿ: ಆಮ್ ಆದ್ಮಿ ಪಾರ್ಟಿಯಿಂದ ಉಚ್ಚಾಟಿತ ಶಾಸಕ ಕಪಿಲ್ ಮಿಶ್ರಾ ಅವರು ಆರೋಪಿಸಿರುವ ಸರ್ಕಾರಿ ಆಸ್ಪತ್ರೆಗಳ ಔಷಧ ಹಗರಣ ಕುರಿತು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ತನಿಖೆ ಆರಂಭಿಸಿದೆ.
ಪ್ರಕರಣ ಸಂಬಂಧ ತನಿಖೆಗೆ ಆದೇಶ ನೀಡಿದ್ದು, ವಿವಿಧ ಸ್ಥಳಗಳಲ್ಲಿ ತನಿಖೆ ಆರಂಭಿಸಲಾಗಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.
ಔಷಧಗಳ ಖರೀದಿ ಬಗ್ಗೆ ಪೂರ್ಣ ದಾಖಲೆಗಳನ್ನು ಕೊಡಿ ಎಂದು ತನಿಖಾ ದಳ ದೆಹಲಿ ಸರ್ಕಾರಕ್ಕೆ ಪತ್ರ ಬರೆಯುವ ಸಾಧ್ಯತೆ ಇದೆ.
ಅರವಿಂದ ಕೇಜ್ರಿವಾಲ್ ಅವರ ನೇತೃತ್ವದ ದೆಹಲಿ ಸರ್ಕಾರ, ಸರ್ಕಾರಿ ಆಸ್ಪತ್ರೆಗಳಿಗಿದ್ದ ಔಷಧ ಖರೀದಿ ಅಧಿಕಾರವನ್ನು ಮೊಟಕುಗೊಳಿಸಿದೆ ಎಂದು ಮಿಶ್ರಾ ಹೇಳಿದ್ದರು.
‘ದೆಹಲಿ ಸರ್ಕಾರ ಬಜೆಟ್ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಹಣ ನೀಡಿತ್ತು. ಅದಕ್ಕಾಗಿ ₹300 ಕೋಟಿ ಮೀಸಲಿರಿಸಲಾಗಿದೆ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರೇ ಸ್ವತಃ ಒಪ್ಪಿಕೊಂಡಿದ್ದರು. ಇಂತಹ ಸಂದರ್ಭದಲ್ಲಿ ಔಷಧಗಳ ಕೊರತೆ ಹೇಗಾಗುತ್ತದೆ?, ಇದೊಂದು ಹಗರಣ’ ಎಂದು ಮಿಶ್ರಾ ಅವರು ಆರೋಪಿಸಿದ್ದರು.