ಬೆಂಗಳೂರು: ‘ಸರ್ಕಾರಿ ಜಾಗ ಒತ್ತುವರಿ ತೆರವು ಸಂಬಂಧ ನೀಡಿದ್ದ ನಿರ್ದೇಶನಗಳನ್ನು ಪಾಲಿಸಿಲ್ಲ’ ಎಂಬ ಕಾರಣಕ್ಕೆ ಬೆಂಗಳೂರು ನಗರ ವ್ಯಾಪ್ತಿಯ ವಿವಿಧ ತಹಶೀಲ್ದಾರ್ಗಳಿಗೆ ಷೋಕಾಸ್ ನೋಟಿಸ್ ಜಾರಿಗೊಳಿಸಲು ಭೂಕಬಳಿಕೆ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಈ ಕುರಿತ ಪ್ರಕರಣಗಳನ್ನು ಕರ್ನಾಟಕ ಭೂಕಬಳಿಕೆ ನಿಷೇಧ ನ್ಯಾಯಾಲಯದ ಅಧ್ಯಕ್ಷ ಎಚ್.ಎನ್. ನಾರಾಯಣ್, ನ್ಯಾಯಾಂಗ ಸದಸ್ಯ ಬಿ.ಬಾಲಕೃಷ್ಣ ಹಾಗೂ ಕಂದಾಯ ವಿಭಾಗದ ಸದಸ್ಯ ಬಿ.ಆರ್. ಜಯರಾಮರಾಜೇ ಅರಸ್ ಅವರನ್ನು ಒಳಗೊಂಡ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಪತ್ರಿಕಾ ವರದಿ ಆಧಾರದಲ್ಲಿ ದಾಖಲಿಸಿಕೊಂಡಿರುವ 499 ಸ್ವಯಂ ಪ್ರೇರಿತ, 108 ಖಾಸಗಿ, ಸರ್ಕಾರದಿಂದ ದಾಖಲಿಸಲಾಗಿರುವ 9
ಹಾಗೂ ಅಧೀನ ನ್ಯಾಯಾಲಯಗಳಿಂದ ವರ್ಗಾವಣೆಯಾಗಿರುವ 3 ಪ್ರಕರಣ ಸೇರಿದಂತೆ ಒಟ್ಟು 619 ಪ್ರಕರಣಗಳ ವಿಚಾರಣೆಯನ್ನು ವಿಶೇಷ ನ್ಯಾಯಾಲಯ ನಡೆಸುತ್ತಿದೆ.