ಬೆಂಗಳೂರು: ಇಂದಿರಾನಗರದಲ್ಲಿ ಗುರುವಾರ ರಾತ್ರಿ ಮಂಜುಳಾ (45) ಎಂಬುವರನ್ನು ಅವರ ಪತಿ ಮೈಲಾರಯ್ಯ (56) ಕತ್ತು ಕೊಯ್ದು ಕೊಲೆ ಮಾಡಿದ್ದಾರೆ.
ಕೆ.ಜಿ.ಎಫ್ ಸರ್ಕಾರಿ ಕಾಲೇಜಿನ ಉಪನ್ಯಾಸಕರಾಗಿದ್ದ ಮೈಲಾರಯ್ಯ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಇಂದಿರಾನಗರದ 14ನೇ ಮುಖ್ಯರಸ್ತೆಯಲ್ಲಿ ವಾಸವಿದ್ದರು.
‘ದಂಪತಿ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಗುರುವಾರ ರಾತ್ರಿಯೂ ಮಾತಿನ ಚಕಮಕಿ ನಡೆದಿತ್ತು. ವಿಚ್ಛೇಧನ ನೀಡುವಂತೆ ಪತ್ನಿ ಕೂಗಾಡಿದ್ದರು. ಆಗ ಕೋಪಗೊಂಡ ಆರೋಪಿಯು ಮಚ್ಚಿನಿಂದ ಮೂರು ಬಾರಿ ಕತ್ತು ಕೊಯ್ದಿದ್ದರು’ ಎಂದು ಇಂದಿರಾನಗರ ಪೊಲೀಸರು ತಿಳಿಸಿದರು.
‘ತೀವ್ರ ರಕ್ತಸ್ರಾವವಾಗಿ ಮಂಜುಳಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಬಳಿಕ ಆರೋಪಿಯು ಶವದ ಪಕ್ಕವೇ ಕುಳಿತಿದ್ದರು. ಸ್ಥಳೀಯರು ನೀಡಿದ ಮಾಹಿತಿಯಿಂದ ಮನೆಗೆ ಹೋಗಿ ಅವರನ್ನು ಬಂಧಿಸಿದೆವು’ ಎಂದು ವಿವರಿಸಿದರು.
‘ಕೊಲೆ ಬಗ್ಗೆ ಸಂಬಂಧಿಕರ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದು ಹೇಳಿದರು.