ಬೆಂಗಳೂರು: ಆಹಾರ ಇಲಾಖೆ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವಿನ ತನಿಖೆ ಕೈಗೆತ್ತಿಕೊಂಡಿರುವ ಉತ್ತರಪ್ರದೇಶದ ವಿಶೇಷ ತನಿಖಾ ತಂಡ (ಎಸ್ಐಟಿ) ನಗರಕ್ಕೆ ಗುರುವಾರ ಬಂದಿದೆ.
ಅವಿನಾಶ್ ಕುಮಾರ್ ಮಿಶ್ರಾ ಮತ್ತು ಸಾಹಿ ಅವರನ್ನೊಳಗೊಂಡ ತಂಡ ಮಾಹಿತಿ ಸಂಗ್ರಹಿಸುತ್ತಿದೆ. ಈ ಅಧಿಕಾರಿಗಳ ಜೊತೆ ತಿವಾರಿ ಸಹೋದರ ಮಯಾಂಕ್ ತಿವಾರಿ ಕೂಡಾ ಬಂದಿದ್ದಾರೆ.
ಕನ್ನಿಂಗ್ಹ್ಯಾಂ ರಸ್ತೆಯಲ್ಲಿರುವ ಆಹಾರ ಇಲಾಖೆಯ ಕಚೇರಿ ಮತ್ತು ಸದಾಶಿವನಗರದಲ್ಲಿರುವ ತಿವಾರಿ ತಂಗಿದ್ದ ಅತಿಥಿಗೃಹಕ್ಕೆ ತೆರಳಿ ಕೆಲವು ದಾಖಲೆಗಳನ್ನು ತಂಡ ಪರಿಶೀಲಿಸಿದೆ.
ಅನುರಾಗ್ ತಿವಾರಿ ಮತ್ತು ಹಿರಿಯ ಅಧಿಕಾರಿ ಮಧ್ಯೆ ಭಿನ್ನಾಭಿಪ್ರಾಯವಿತ್ತು ಎನ್ನಲಾಗಿದ್ದು, ಈ ಬಗ್ಗೆಯೂ ತನಿಖೆ ನಡೆಸುವ ಸಾಧ್ಯತೆ ಇದೆ.
‘ಆಹಾರ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣವನ್ನು ಬಯಲಿಗೆ ಎಳೆಯಲು ತಿವಾರಿ ಪ್ರಯತ್ನಿಸಿದ್ದರು. ಇದರಿಂದಾಗಿ ಅವರ ಕೊಲೆ ನಡೆದಿದೆ’ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.