ಬ್ಯಾಂಕಾಕ್: ಭಾರತದ ಬಿ. ಸಾಯಿ ಪ್ರಣೀತ್ ಥಾಯ್ಲೆಂಡ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಗುರುವಾರ ಕ್ವಾರ್ಟರ್ಫೈನಲ್ಗೆ ಲಗ್ಗೆಯಿಟ್ಟಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದ ಪ್ರೀ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಪ್ರಣೀತ್ 21–13, 21–18ರಲ್ಲಿ ನೇರ ಗೇಮ್ಗಳಿಂದ ಮಲೇಷ್ಯಾದ ಇಸ್ಕಂದರ್ ಜುಲ್ಕರ್ಣಿಯನ್ ಅವರನ್ನು ಮಣಿಸಿದರು.
ಸಿಂಗಪುರ ಓಪನ್ನಲ್ಲಿ ಚಾಂಪಿಯನ್ ಆಗಿದ್ದ ಮೂರನೇ ಶ್ರೇಯಾಂಕದ ಪ್ರಣೀತ್ ಕ್ವಾರ್ಟರ್ನಲ್ಲಿ ಥಾಯ್ಲೆಂಡ್ನ ಕಂಟಫನ್ ವಾಂಗ್ಚರಣ್ ವಿರುದ್ಧ ಆಡಲಿದ್ದಾರೆ.
ಜುಲ್ಕರ್ಣಿಯನ್ ಅವರನ್ನು ಎದುರಿಸಿದ ಮೊದಲ ಪಂದ್ಯದಲ್ಲೇ ಪ್ರಣೀತ್ ಗೆಲುವು ಒಲಿಸಿಕೊಂಡಿದ್ದಾರೆ. ಮೊದಲ ಗೇಮ್ನಲ್ಲಿ ಆರಂಭದಲ್ಲೇ 5–1ರ ಮುನ್ನಡೆ ಪಡೆದರು.
ಆದರೆ ಮಲೇಷ್ಯಾದ ಅನುಭವಿ ಆಟಗಾರ ಭಾರತದ ಯುವ ಆಟಗಾರನಿಗೆ ಪ್ರಬಲ ಪೈಪೋಟಿ ನೀಡಿದರು. ಆದರೆ ಪ್ರಣೀತ್ ದೀರ್ಘ ರ್ಯಾಲಿಗಳಲ್ಲಿ ಹೆಚ್ಚು ಪಾಯಿಂಟ್ಸ್ ಪಡೆದು ತಿರುಗೇಟು ನೀಡಿದರು.
ಎರಡನೇ ಗೇಮ್ನಲ್ಲಿ ಜುಲ್ಕರ್ಣಿಯನ್ 9–7ರಲ್ಲಿ ಮುನ್ನಡೆ ಸಾಧಿಸಿದರು. ಆದರೆ ಪ್ರಣೀತ್ ಚುರುಕಿನ ರಿಟರ್ನ್ಸ್ಗಳಿಂದ ಪಾಯಿಂಟ್ಸ್ ಪಡೆದರು.
41 ನಿಮಿಷದ ಹಣಾಹಣಿಯಲ್ಲಿ ಪ್ರಣೀತ್ ತಮ್ಮ ಅಮೋಘ ಸಾಮರ್ಥ್ಯದ ಆಟದ ಮೂಲಕ ಗೆಲುವು ತಮ್ಮದಾಗಿಸಿಕೊಂಡರು.
ಸೌರಭ್ ವರ್ಮಾ ಹಾಗೂ ಸಾಯಿ ಉತ್ತೇಜಿತಾ ರಾವ್ ಚುಕ್ಕಾ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್ ವಿಭಾಗಗಳಲ್ಲಿ ತಮ್ಮ ಸವಾಲು ಅಂತ್ಯಗೊಳಿಸಿದ್ದಾರೆ.
12ನೇ ಶ್ರೇಯಾಂಕದ ಸೌರಭ್ 16–21, 25–23, 11–21ರಲ್ಲಿ ಐದನೇ ಶ್ರೇಯಾಂಕದ ಫ್ರಾನ್ಸ್ನ ಬ್ರಿಸ್ ಲೆವೆರ್ಡೆಸ್ ಎದುರು ಸೋಲು ಕಂಡರೆ, ಉತ್ತೇಜಿತಾ 15–21, 17–21ರಲ್ಲಿ ಥಾಯ್ಲೆಂಡ್ನ ಪತ್ತರಾಸುದಾ ಚೈವಾನ್ ಮೇಲೆ ಸೋಲು ಅನುಭವಿಸಿದರು.