ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ (ಬಿಸಿಸಿಐ) ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ಸಮಿತಿಯ ಶಿಫಾರಸುಗಳ ಜಾರಿಗೆ ಸುಪ್ರೀಂ ಕೋರ್ಟ್ ನೇಮಕ ಮಾಡಿದ್ದ ಆಡಳಿತಾಧಿಕಾರಿಗಳ ಸಮಿತಿಗೆ(ಸಿಒಎ) ಇತಿಹಾಸಕಾರ ರಾಮಚಂದ್ರ ಗುಹಾ ಅವರು ಗುರುವಾರ ರಾಜೀನಾಮೆ ನೀಡಿದರು.
ಶುಕ್ರವಾರ ಸಿಒಎ ಮುಖ್ಯಸ್ಥ ವಿನೋದ್ ರೈ ಅವರಿಗೆ ಏಳು ಪುಟಗಳ ಪತ್ರ ಬರೆದಿರುವ ರಾಮಚಂದ್ರ ಗುಹಾ ಅವರು ತಾವು ರಾಜೀನಾಮೆ ನೀಡಿರುವುದಕ್ಕೆ ಕಾರಣಗಳನ್ನು ಉಲ್ಲೇಖಿಸಿದ್ದಾರೆ.
‘ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್.ದೋನಿ ಅವರು ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ ಬಳಿಕವೂ ಬಿಸಿಸಿಐ ದೋನಿ ಅವರಿಗೆ ‘ಎ’ ಶ್ರೇಣಿ ಆದ್ಯತೆ ಹಾಗೂ ಇನ್ನಿತರ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತಿದೆ’ ಎನ್ನುವುದು ರಾಜೀನಾಮೆ ಕಾರಣಗಳಲ್ಲಿ ಒಂದಾಗಿದೆ.
‘19 ವರ್ಷದೊಳಗಿನ ಕ್ರಿಕೆಟ್ ಆಟಗಾರರಿಗೆ ತರಬೇತಿದಾರ ಹುದ್ದೆಯನ್ನು ರಾಹುಲ್ ದ್ರಾವಿಡ್ ಅವರಿಗೆ ವಹಿಸಲಾಗಿದೆ. ಆದರೆ, ಆದರ ಬಗ್ಗೆ ಗಮನ ಹರಿಸುವ ಬದಲು ಐಪಿಲ್ ಟಿ–20 ಟೂರ್ನಿಯತ್ತ(ಡೆಲ್ಲಿ ಡೆರ್ಡೆವಿಲ್ಸ್) ಹೆಚ್ಚು ಆಸಕ್ತಿ ತೋರಿದ್ದರು’ ಎಂದಿದ್ದಾರೆ.
‘ಆಟಗಾರರು, ಮಾಜಿ ಆಟಗಾರರು ಹಾಗೂ ಕೋಚ್ ಆಯ್ಕೆ ವಿಚಾರದಲ್ಲಿ ಹಿತಾಸಕ್ತಿ ಸಂಘರ್ಷ ನಡೆಯುತ್ತಿದ್ದು, ಬಗೆಹರಿಸುವಲ್ಲಿ ಬಿಸಿಸಿಐ ವಿಫಲವಾಗಿದೆ’ ಎಂದಿದ್ದಾರೆ.
ಟೀಂ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ರಾಮಚಂದ್ರ ಗುಹಾ ಅವರು, ‘ವೀಕ್ಷಕ ವಿವರಣೆಗಾರರಾಗಿರುವ ಸುನೀಲ್ ಗವಾಸ್ಕರ್ ಅವರನ್ನು ಬಿಸಿಸಿಐ ಪ್ಲೇಯರ್ ಮ್ಯಾನೇಜ್ಮೆಂಟ್ನ ಮುಖಸ್ಥರನ್ನಾಗಿ ನೇಮಕ ಮಾಡಿರುವುದು ಸರಿಯಲ್ಲ’ ಎಂದಿದ್ದಾರೆ.