ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಖುಲಾ’ ಕುರಿತು ಒಂದಷ್ಟು ಖುಲಾಸಾ

Last Updated 2 ಜೂನ್ 2017, 19:30 IST
ಅಕ್ಷರ ಗಾತ್ರ

ಡಾ. ಷಾಕಿರಾ ಖಾನಂ ಬರೆದಿರುವ  ‘ತಲಾಖ್, ಖುಲಾ ಮತ್ತು ಮುಸ್ಲಿಂ ಪುರುಷ’ ಎಂಬ ಲೇಖನದಲ್ಲಿ (ಸಂಗತ, ಜೂನ್‌ 1)  ಅವರ ನಿಲುವೇನು ಎಂಬುದೇ ಸ್ಪಷ್ಟವಾಗುವುದಿಲ್ಲ. ‘ಮುಸ್ಲಿಂ ಮಹಿಳೆಯರು ‘ಖುಲಾ’ವನ್ನು ಕಾರ್ಯರೂಪಕ್ಕೆ ತರದೆ ತ್ರಿವಳಿ ತಲಾಖ್‌ನ ಮೇಲೆ ನಿರ್ಬಂಧ ಹೇರಲು ಹೊರಟಿರುವುದು ಏಕೆ’ ಎಂದು ಅವರು ಪ್ರಶ್ನಿಸುತ್ತಾರೆ. ಮುಂದುವರಿದು, ‘ಮಹಿಳೆಗಾಗಿ ಅನುಷ್ಠಾನಗೊಂಡಿರುವ ‘ಖುಲಾ’ ಸ್ವಾತಂತ್ರ್ಯವನ್ನು ಕಾರ್ಯರೂಪಕ್ಕೆ ತರಲು ಹೋರಾಡಬೇಕೇ ವಿನಾ ಪುರುಷರ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವುದಲ್ಲ’ ಎಂದಿದ್ದಾರೆ. ಇಂಥ ಗೊಂದಲ ಲೇಖನದುದ್ದಕ್ಕೂ ವ್ಯಕ್ತವಾಗುತ್ತದೆ.

ತಲಾಖ್‌ ಮತ್ತು ಖುಲಾ ಪುರುಷ ಮತ್ತು ಸ್ತ್ರೀ ಇಬ್ಬರಿಗೂ ವಿವಾಹ ಬಂಧನದಿಂದ ಬಿಡುಗಡೆಯನ್ನು ಪಡೆಯುವ ಹಕ್ಕನ್ನು ನೀಡುತ್ತವೆ. ಆದರೆ ಇವೆರಡೂ ಸಮಾನವಾದ ಸ್ವಾತಂತ್ರ್ಯಗಳಲ್ಲ ಎಂಬುದನ್ನು ನಾವು ಅರಿಯಬೇಕು. ತಲಾಖ್‌ನಲ್ಲಿ ಪತ್ನಿಯನ್ನು ಬಿಡಲು ಪುರುಷ  ಯಾವುದೇ ಕಾರಣ ನೀಡಬೇಕಾಗಿಲ್ಲ. ಸಾಕ್ಷಿಗಳೂ ಇಲ್ಲದೆ, ಈಗಂತೂ ಫೋನಿನಲ್ಲೋ ಫೇಸ್ ಬುಕ್ಕಿನಲ್ಲೋ ಸಂದೇಶವನ್ನು ಕಳಿಸಿ ತಲಾಖನ್ನು ನೀಡುವ ಪರಿಪಾಠ ಶುರುವಾಗಿದೆ. ಇಷ್ಟು ಸುಲಭವಾಗಿದೆ ಪುರುಷರ ಸ್ವಾತಂತ್ರ್ಯದ ಬಳಕೆ.

ತನ್ನ ಹಕ್ಕು ಸಾಧನೆಯಲ್ಲಿ ತನ್ನ ಪತ್ನಿಯೂ ಆಗಿದ್ದ, ತನ್ನ ಕಷ್ಟ ಸುಖಗಳನ್ನು ಹಂಚಿಕೊಂಡಿದ್ದ, ತನಗೆ ಮಕ್ಕಳನ್ನೂ ನೀಡಿರಬಹುದಾದ ಒಬ್ಬ ಸ್ತ್ರೀ ಕೂಡ ಬಾಧ್ಯಸ್ಥಳು ಎಂಬ ಮೂಲಭೂತ ಸಂವೇದನೆಯೂ ಇಂಥ ಹೊಣೆಗೇಡಿ ಪುರುಷರಿಗೆ ಇರುವುದಿಲ್ಲ, ಇಂಥ ಅವಿವೇಕಿಗಳಿಗೆ ತಲಾಖಿನ ಈ ಅನಿಷ್ಟ ವಿಧಾನ ಲೋಲುಪತೆಯ ಸುಲಭವಾದ ಸಾಧನವಾಗಿ ಪರಿಣಮಿಸಿದೆ.

ಖುಲಾ, ಎಂದರೆ ಸ್ತ್ರೀ ತನ್ನ ಪತಿಯಿಂದ ಬಿಡುಗಡೆಯನ್ನು ಕೇಳುವ ಸ್ವಾತಂತ್ರ್ಯ. ಆದರೆ, ಪುರುಷಪ್ರಧಾನ ಮನೋವೃತ್ತಿ ಇದನ್ನು ಅತ್ಯಂತ ಕಠಿಣ ಮತ್ತು ಅವಹೇಳನಕಾರಿಯಾಗಿ  ಮಾಡಿದೆ. ‘ನಿನಗೆ ಹಕ್ಕು ಬೇಕಾ? ಅದನ್ನು ನೀನು ಹೇಗೆ ಅನುಭವಿಸುತ್ತೀಯೋ ನೋಡೋಣ’ ಎಂದು ಪುರುಷಸಮಾಜ ಬಡಪಾಯಿ ಸ್ತ್ರೀಯರಿಗೆ ಬೆದರಿಕೆಯ ಸವಾಲು ಹಾಕಿದಂತಿದೆ ಈ ಖುಲಾ ಪದ್ಧತಿ.

ಉದಾಹರಣೆಗೆ, ನಮ್ಮ ಸಮಾಜದಲ್ಲಿ ಸ್ತ್ರೀಯರ ಸಾಮಾಜಿಕ, ಆರ್ಥಿಕ ಸ್ಥಿತಿ ಇರುವ ನೆಲೆಯಲ್ಲಿ, ಪುಂಡನೋ ಪೋಕರಿಯೋ ಇರುವ ಗಂಡನೊಂದಿಗೆ ಹೊಂದಿಕೊಂಡು ಹೋದರೇನೆ  ಸರಿ ಎಂಬಂತಿದೆ. ಇಂಥದರಲ್ಲಿ ತಾನಾಗಿ ಗಂಡನಿಂದ ಖುಲಾ ಕೇಳುವ ಧೈರ್ಯ ಈಕೆ ಮಾಡಲು ಸಾಧ್ಯವೇ?

ಇನ್ನು ಸ್ವಲ್ಪ ಮಟ್ಟಿಗೆ ಆರ್ಥಿಕ ಭದ್ರತೆಯೋ ಸಾಮಾಜಿಕ ಧೈರ್ಯವೋ ಅಥವಾ ‘ಇನ್ನು ಖಂಡಿತ ಸಾಧ್ಯವಿಲ್ಲ ಈ ದುಷ್ಟನ ಜೊತೆ ಜೀವನ’ ಎಂಬ ಕೊನೆ ನಿರ್ಧಾರಕ್ಕೆ ಬಂದೋ ಒಬ್ಬ ಸ್ತ್ರೀ ‘ಖುಲಾ’ ಕೇಳಬೇಕು ಎಂದು ನಿರ್ಧರಿಸುತ್ತಾಳೆ. ಆದರೆ ಆಕೆ ಅದನ್ನು ಪುರುಷರು ಮಾಡುತ್ತಿದ್ದಾರಲ್ಲ, ಹಾಗೆ ‘ಖುಲಾ’, ‘ಖುಲಾ’, ‘ಖುಲಾ’ ಎಂದು ಮೂರು ಬಾರಿ ಹೇಳಿ ತನ್ನ ಗಂಟುಮೂಟೆ ಕಟ್ಟಿಕೊಂಡು ಹೊರಟೇ ಬಿಡುವಷ್ಟು ಸುಲಭವಲ್ಲ.

ಕೊನೆಗೂ ಕೆಟ್ಟ ಧೈರ್ಯ ಮಾಡಿ ಅನಿವಾರ್ಯವಾಗಿ ಒಬ್ಬ ಸ್ತ್ರೀ, ಗಂಡನಿಂದ ಖುಲಾ ಕೇಳಿದರೆ, ಅದು ಮೌಲ್ವಿಗಳ ಎದುರು ಬರುತ್ತದೆ. ಮೌಲ್ವಿಗಳೆಲ್ಲರೂ ಪುರುಷರು. ಅವರಿಂದ ಈಕೆಗೆ, ‘ನೀನು ಖುಲಾ ಏಕೆ ಕೇಳುತ್ತಿದ್ದೀಯ, ಖುಲಾ ಕೊಡಲು ನಿನ್ನ ಪತಿ ಒಪ್ಪಿದ್ದಾನೆಯೇ, ಖುಲಾ ನಂತರ ನೀನು ಏನು ಮಾಡುತ್ತೀಯಾ, ಮಕ್ಕಳ ಗತಿ ಏನು’ ಎಂಬೆಲ್ಲ ಪ್ರಶ್ನೆಗಳ ಸುರಿಮಳೆ.

ಸ್ತ್ರೀಯೊಬ್ಬರು ಖುಲಾ ಕೇಳಿದ್ದಕ್ಕೆ ಕೊಟ್ಟ ಇಂಥ ಕಾರಣಗಳು ಸಮ್ಮತವಲ್ಲ ಎಂದು ತನಗೆ ಅನ್ನಿಸಿದ ಒಂದು  ಪ್ರಕರಣದಲ್ಲಿ ಮೌಲ್ವಿ, ‘ಇಂಥ ಸನ್ನಿವೇಶದಲ್ಲಿ ತಲಾಖನ್ನು ಕೇಳುವುದು ಕೇವಲ ಪುರುಷರ ಹಕ್ಕು; ಆದ್ದರಿಂದ ಸ್ತ್ರೀಯಿಂದ ಬಂದ ಈ ಬೇಡಿಕೆ ಇಸ್ಲಾಂ ವಿರೋಧಿ’ ಎಂದು ಫತ್ವಾ (ಅಭಿಪ್ರಾಯ) ನೀಡಿದ ಉದಾಹರಣೆ ಇದೆ. ಇದೇ ಸಾಮಾನ್ಯ.

ಇಷ್ಟೆಲ್ಲಾ ಆಗಿ, ಖುಲಾ ತೆಗೆದುಕೊಳ್ಳಬಹುದು ಎಂದು ತೀರ್ಮಾನವಾದಾಗಲೂ ಇದು ಪೂರ್ಣಗೊಳ್ಳುವುದು ಮತ್ತೆ ಪುರುಷನೇ ತಲಾಖ್ ಕೊಡುವುದರ ಮೂಲಕ. ಆತ ತನ್ನ ಒಪ್ಪಿಗೆಯನ್ನು ಸೂಚಿಸಿ ಸಹಿ ಹಾಕದೇ ಇದ್ದರೆ ಖುಲಾ ಊರ್ಜಿತವಾಗುವುದೇ ಇಲ್ಲ. ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ತಲಾಖ್‌ ಪರವಾಗಿ 42 ಖಂಡಗಳಿವೆ. ಖುಲಾ ಪರವಾಗಿ ಇರುವ ಖಂಡಗಳು ಕೇವಲ ನಾಲ್ಕು. ವಿಪರ್ಯಾಸದ ಸಂಗತಿಯೆಂದರೆ, ಈ ನಾಲ್ಕು ಖಂಡಗಳಲ್ಲಿಯೂ ‘ಪತಿಯ ಸಮ್ಮತಿ ಬೇಕು’ ಎನ್ನುವುದೂ ಒಂದು ಕಡ್ಡಾಯ ಷರತ್ತಾಗಿದೆ. ಪರಿಸ್ಥಿತಿ ಹೀಗಿರುವಾಗ, ಷಾಕಿರಾ ಖಾನಂ ಅವರು ಭಾವಿಸಿರುವ ಹಾಗೆ ‘ಖುಲಾ’ ನಿಜವಾದ ಅರ್ಥದಲ್ಲಿ ಒಂದು ಸ್ವಾತಂತ್ರ್ಯವೇ ಅಲ್ಲ. ಇಲ್ಲಿಯೂ ಪುರುಷಪ್ರಾಧಾನ್ಯದ ಕೊಕ್ಕೆ ಇದೆ.

ಅಲ್ಲದೇ, ಈಗ ವ್ಯಾಪಕ ಚರ್ಚೆಗೆ ಒಳಗಾಗಿರುವುದು ಮುಸ್ಲಿಂ ಪುರುಷರು ನೀಡುವ ತಲಾಖಿನ ಬಗ್ಗೆ ಅಲ್ಲ; ಈಗ ಹಲವರು ಅನುಸರಿಸುವ ‘ತ್ರಿವಳಿ’ ತಲಾಖಿನ ಅಮಾನವೀಯ ವಿಧಾನದ ಬಗ್ಗೆ. ಎಲ್ಲರಿಗೂ ಗೊತ್ತಿರುವ ಹಾಗೆ ವಿಚ್ಛೇದನ ಬೇಕು ಎಂದಾಗ ಪುರುಷನೇ ತಲಾಖ್‌ ಹೇಳುತ್ತಾನೆ. ಇದನ್ನು ಪ್ರಶ್ನಿಸುವ, ಸರಿಪಡಿಸುವ ಯಾವುದೇ ಅವಕಾಶ ಪತ್ನಿಗೆ ಇಲ್ಲ. ಆದರೂ ಇಸ್ಲಾಮಿನ ಪ್ರಕಾರ ಪತಿ ಮೂರು ಸಲ ತಲಾಖನ್ನು ಉಚ್ಚರಿಸಬೇಕು. ಮತ್ತು ಪ್ರತಿ ತಲಾಖಿನ ಉಚ್ಚಾರಣೆಯ ನಡುವೆ ಒಂದು ತಿಂಗಳು ಅಂತರವನ್ನು ಇಟ್ಟುಕೊಳ್ಳಬೇಕು. ಈ ಅವಧಿಯಲ್ಲಿ ಪತಿ–ಪತ್ನಿ ಒಟ್ಟಿಗೇ ಇರಬೇಕು. ಈ ನಡುವೆ ಅವರಲ್ಲಿ ಸಾಮರಸ್ಯ ಮೂಡದೇ ಇದ್ದಲ್ಲಿ, ಮೂರನೇ ಬಾರಿ ತಲಾಖ್‌ ಹೇಳಿದ ನಂತರ ನೂರು ದಿನಗಳ ಇದ್ದತ್ (ಕಾಯುವಿಕೆ) ಅವಧಿಯ (ಸ್ತ್ರೀ ಈ ಸಂಬಂಧದಿಂದ ಗರ್ಭಿಣಿಯಾಗಿಲ್ಲ ಎಂಬುದು ಖಚಿತವಾದ) ನಂತರ ತಲಾಖ್‌ ಊರ್ಜಿತಗೊಳ್ಳುತ್ತದೆ. ಬಿಟ್ಟು ಬಿಟ್ಟು ಮೂರು ಬಾರಿ ತಲಾಖ್‌ ಹೇಳಬೇಕು ಎಂದು ವಿಧಿಸಿರುವುದು ಈ ಪತಿ– ಪತ್ನಿ ಮತ್ತೆ ಸಾಮರಸ್ಯವನ್ನು ಕಂಡುಕೊಂಡು ಒಟ್ಟಿಗೇ ಇರುವ ಸಾಧ್ಯತೆಯನ್ನು ಹೆಚ್ಚಿಸಲು. ಎಂದರೆ ತಲಾಖ್‌ ವಿಧಿಯಲ್ಲಿಯೂ ಅದು ಆಗದೇ ಇರಲಿ ಎಂಬ ಇಂಗಿತವೇ ಇದೆ.

ಅದರ ಬದಲು ಕುಡಿದ ಅಮಲಿನಲ್ಲಿಯೋ, ಕೋಪದ ಭರದಲ್ಲಿಯೋ ಒಂದೇ ಉಸಿರಿನಲ್ಲಿ ‘ತಲಾಖ್‌, ತಲಾಖ್‌, ತಲಾಖ್‌’ ಎಂದು  ಹೇಳಿದರೆ ತಲಾಖ್‌ ಆಗಿಬಿಡುತ್ತೆ ಎಂದು ತಿಳಿಯುವುದು ಜಾಣ ದಡ್ಡತನ, ಅನುಕೂಲಸಿಂಧು ಕ್ರೌರ್ಯ. ಒಂದೇ ಹೊಡೆತದಲ್ಲಿ ತಲಾಖ್‌್ ಆಗುವುದಾದರೆ, ತಲಾಖ್‌ ಎಂದು ಮೂರು ಸಲ ಏಕೆ ಹೇಳಬೇಕು? ಒಂದೇ ಸಲ ಜೋರಾಗಿ ಯಾಕೆ ಒದರಬಾರದು? ನೂರು ಸಲ ಏಕೆ ಉಚ್ಚರಿಸಬಾರದು? ಒಂದೇ ಸಲ ಹೇಳುವ ತ್ರಿವಳಿ ತಲಾಖ್‌, ತಲಾಖಿನ ಮೂರು ಸಲದ ಉಚ್ಚಾರಣೆಯ ನಡುವೆ ಸಹಬಾಳ್ವೆಯ, ಸಾಮರಸ್ಯವನ್ನು ಕಂಡುಕೊಳ್ಳುವ ಸಾಧ್ಯತೆಯನ್ನೂ ಅಲ್ಲಗಳೆಯುತ್ತದೆ.

ಹೆಚ್ಚಿನ ಸಲ ಇದು ದುಡುಕಿನ ಸ್ವಭಾವದ ಪುರುಷರಿಗೂ ಅನುಕೂಲಕರವಾಗಿರುವುದಿಲ್ಲ. ಇದರಿಂದ ಅವರೂ ಅನೇಕ ರೀತಿಯಲ್ಲಿ ಪಶ್ಚಾತ್ತಾಪ ಪಡುತ್ತಾರೆ. ಕುರ್‌ಆನ್ ಮತ್ತು ಹದೀಸಿನಲ್ಲಿಯೂ ‘ತ್ರಿವಳಿ’ ತಲಾಖಿಗೆ ಮನ್ನಣೆ ಇಲ್ಲ ಎಂದು ಸುನ್ನಿ, ಷಿಯಾ ಮುಂತಾದ ಪಂಗಡಗಳ ಘನ ವಿದ್ವಾಂಸರು ಒಪ್ಪುತ್ತಾರೆ. ಆದರೆ, ಪಟ್ಟಭದ್ರ ಹಿತಾಸಕ್ತಿಯ ಸಂಸ್ಥೆಗಳು, ಮೌಲ್ವಿಗಳ ದರ್ಬಾರಿನಲ್ಲಿ ಜಾರಿಗೊಂಡು ಅಟ್ಟಹಾಸಗೈಯುತ್ತಿರುವ ಈ ವಿಕೃತ ಪದ್ಧತಿಯನ್ನು ವಿರೋಧಿಸಿ ಅವರೂ ಮಾತಾಡದೇ ಇರುವುದೇ ವಿಪರ್ಯಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT