ವಿಜಯಪುರ: ರಾಜ್ಯದಲ್ಲಿ ಉತ್ತಮ ಮಳೆಯಾಗಿ ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಅವರು ಪತ್ನಿ ಆಶಾ, ಇಲಾಖೆಯ ಅಧಿಕಾರಿಗಳ ತಂಡದ ಜತೆ ಕೃಷ್ಣಾ ನದಿಯ ಉಗಮ ಸ್ಥಾನ ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಮಹಾಬಳೇಶ್ವರ ದೇಗುಲದಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದರು.
ಆ ನಂತರ ಪಂಚ ನದಿಗಳ ಉಗಮ ಸ್ಥಾನ ಪಂಚ ಗಂಗಾ ಕ್ಷೇತ್ರದಲ್ಲಿ ಮತ್ತು ಕೃಷ್ಣಾಯಿ ಮಂದಿರದಲ್ಲಿ ಪೂಜೆ ಸಲ್ಲಿಸಿದರು.
‘ಕೃಷ್ಣಾ–ಕಾವೇರಿ ರಾಜ್ಯದ ಜೀವ ನದಿಗಳು. ಈ ಹಿಂದೆ ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿದ್ದೆ. ಇದೇ ಪ್ರಥಮ ಬಾರಿಗೆ ಕೃಷ್ಣೆಯ ಉಗಮ ಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದು, ಉತ್ತಮ ಮಳೆ–ಬೆಳೆಗಾಗಿ ಪ್ರಾರ್ಥಿಸಿದೆ’ ಎಂದು ಸಚಿವ ಪಾಟೀಲ ತಿಳಿಸಿದರು.
‘ರಾಜ್ಯದಲ್ಲಿ ನಾಲ್ಕು ವರ್ಷಗಳಿಂದ ಮಳೆಯಿಲ್ಲ. ಮಳೆ ಆಗಲಿ ಎಂದು ನಡೆಸುವ ಪೂಜೆಗಾಗಿ ಸರ್ಕಾರದ ಒಂದು ರೂಪಾಯಿ ಹಣ ಖರ್ಚು ಮಾಡುವುದಿಲ್ಲ. ನಾನು ಮತ್ತು ನನ್ನ ಸ್ನೇಹಿತರು ಅದರ ಖರ್ಚು ಭರಿಸುತ್ತೇವೆ’ ಎಂದು ಅವರು ತಿಳಿಸಿದರು.