ಕಾಬೂಲ್: ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನ ಖೈರ್ ಖಾನಾ ಪ್ರದೇಶದ ಸ್ಮಶಾನದಲ್ಲಿ ಶನಿವಾರ ಸ್ಥಳೀಯ ರಾಜಕೀಯ ಮುಖಂಡರ ಪುತ್ರನ ಅಂತ್ಯಕ್ರಿಯೆ ನಡೆಯುವ ವೇಳೆ ಮೂರು ಬಾಂಬ್ಗಳು ಸ್ಫೋಟಗೊಂಡು ಕನಿಷ್ಠ 18 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
‘ಸ್ಥಳೀಯ ಮುಖಂಡ ಏಜಾದ್ಯಾರ್ ಅವರ ಪುತ್ರ ಸಲೀಮ್ ಏಜಾದ್ಯಾರ್ ಅಂತ್ಯಕ್ರಿಯೆಗಾಗಿ ಹೆಚ್ಚಿನ ಸಂಖ್ಯೆಯ ಜನ ಸೇರಿದ್ದರು. ಈ ವೇಳೆ ಒಂದಾದ ನಂತರ ಒಂದರಂತೆ ಮೂರು ಬಾಂಬ್ಗಳು ಸ್ಫೋಟಗೊಂಡವು’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕಾಬೂಲ್ನಲ್ಲಿ ಶುಕ್ರವಾರ ನಡೆದ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಗೋಲಿಬಾರ್ನಲ್ಲಿ ಸಲೀಮ್ ಮೃತಪಟ್ಟಿದ್ದರು.
ಈವರೆಗೆ ಯಾವ ಉಗ್ರಗಾಮಿ ಸಂಘಟನೆಯೂ ದಾಳಿಯ ಹೊಣೆ ಹೊತ್ತಿಲ್ಲ.