ಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯರ ತಂಡ ನಡೆಸಿದ ಹೃದ್ರೋಗ ಶಸ್ತ್ರಚಿಕಿತ್ಸೆಯನ್ನು ನ್ಯೂಜಿಲೆಂಡ್ ವೈದ್ಯರು ಟೆಲಿ ಸಂದರ್ಶನದ ಮೂಲಕ ವೀಕ್ಷಿಸಿದರು.
ಸಂಸ್ಥೆಯ ನಿರ್ದೇಶಕ ಡಾ. ಸಿ. ಎನ್. ಮಂಜುನಾಥ್, ಡಾ. ಕೆ.ಎಚ್. ಶ್ರೀನಿವಾಸ್, ಡಾ. ಆನಂದ ಪಿ ಸುಬ್ರಮಣಿಯನ್ ಮತ್ತು ಡಾ.ಬಿ.ಸಿ.ಶ್ರೀನಿವಾಸ್ ಅವರ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿತು.
ಏಳು ವರ್ಷ ಮತ್ತು ಒಂಬತ್ತು ವರ್ಷದ ಇಬ್ಬರು ಮಕ್ಕಳು ಹುಟ್ಟಿನಿಂದ ಬಂದ ಹೃದಯ ರಂಧ್ರದ ರೋಗದಿಂದ ನರಳುತ್ತಿದ್ದರು. ಅವರಿಗೆ ಪದೇ ಪದೇ ಹೃದಯಸೋಂಕು, ಜ್ವರ ಕಾಣಿಸಿಕೊಳ್ಳುತ್ತಿತ್ತು. ಅದರಲ್ಲಿ ಒಂದು ಮಗು ಈಗಾಗಲೇ ಒಂದು ಬಾರಿ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿತ್ತು.
ಡಾ.ಸಿ.ಎನ್.ಮಂಜುನಾಥ್, ‘ನಮ್ಮ ಸಂಸ್ಥೆಯು ಆರು ವರ್ಷಗಳಿಂದ ವಿಶ್ವದ ಇತರ ಭಾಗಗಳ ವೈದ್ಯರ ಜತೆ ಇದೇ ರೀತಿ ಟೆಲಿ ಸಂದರ್ಶನದ ಮೂಲಕ ಚಿಕಿತ್ಸೆ ನಡೆಸಿದೆ’ ಎಂದರು.