ಬೆಂಗಳೂರು: ‘ನಾನು ರಾಯಚೂರಿನಲ್ಲಿ ಎರಡನೇ ತರಗತಿಯಲ್ಲಿದ್ದಾಗ ಅಪ್ಪ–ಅಮ್ಮ ಆ ಶಾಲೆ ಬಿಡಿಸಿ ಇಲ್ಲಿಗೆ ಕರೆತಂದರು. ನಾಲ್ಕು ವರ್ಷದಿಂದ ಮನೆಗೆಲಸ ಮಾಡುತ್ತಿದ್ದೆ. ಈ ವರ್ಷ ನೇರವಾಗಿ ಏಳನೇ ತರಗತಿಗೆ ಸೇರಿದ್ದೇನೆ. ಕಲಿಯುವ ಖುಷಿಯೊಂದಿಗೆ ಸಣ್ಣ ಭಯವೂ ನನ್ನಲ್ಲಿದೆ’
–ಇದು ಶಾಲೆ ತೊರೆದಿದ್ದ ವಿದ್ಯಾರ್ಥಿನಿ ರಾಧಿಕಾ ಮಾತು. ಸ್ಪರ್ಶ ಸಂಸ್ಥೆ ಶನಿವಾರ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ‘ನನ್ನ ನಡೆ ಶಿಕ್ಷಣದೆಡೆಗೆ’ ಕಾರ್ಯಕ್ರಮದಲ್ಲಿ ತನ್ನ ಕಥೆ ಬಿಚ್ಚಿಟ್ಟಳು.
ಶಾಲೆ ತೊರೆದ, ಚಿಂದಿ ಆಯುವ, ಭಿಕ್ಷಾಟನೆ ಮಾಡುವ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ. ಈ ವರ್ಷ 102 ಮಕ್ಕಳನ್ನು ಶಾಲೆಗೆ ದಾಖಲಿಸಿದೆ.
ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಗೋಪಿನಾಥ್, ‘400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಸ್ಥೆ ನೆರವಿನಿಂದ ಕಲಿಯುತ್ತಿದ್ದಾರೆ. ಏಳು ವರ್ಷದ ಹಿಂದೆ ಶಾಲೆಗೆ ಸೇರಿಸಿದ್ದ ವಿದ್ಯಾರ್ಥಿ ಈಗ ಎಂಜಿನಿಯರಿಂಗ್ ಕಲಿಯುತ್ತಿದ್ದಾರೆ’ ಎಂದರು.