ಬೆಂಗಳೂರು: ಗೂಗಲ್ ಸಿಇಒ ಸುಂದರ್ ಪಿಚೈ ಅವರ ಗೋಹತ್ಯೆ ನಿಷೇಧದ ಬಗ್ಗೆ ಈ ರೀತಿ ಹೇಳಿಕೆ ನೀಡಿದ್ದಾರೆ ಎಂಬ 'ಉಲ್ಲೇಖ'ಗಳು ಕೆಲವು ದಿನಗಳಿಂದ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ.
ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ ಆದರೆ ನಾನು ಭಾರತದ ನಿರುದ್ಯೋಗ ಮತ್ತು ಯುವಕರು ಕೆಲಸ ಕಳೆದುಕೊಳ್ಳುತ್ತಿರುವ ಬಗ್ಗೆ ಚಿಂತಿತನಾಗಿದ್ದೇನೆ . ಭಾರತ ಜನರ ಅಭಿವೃದ್ಧಿ ಬಗ್ಗೆ ಯೋಚಿಸಬೇಕೇ ಹೊರತು ಅವರ ಆಹಾರ ಕ್ರಮಗಳ ಬಗ್ಗೆ ಅಲ್ಲ. ಬೀಫ್ ಸೇವನೆ ಮಾಡುವುದು ಅಥವಾ ಇನ್ಯಾವುದೇ ಆಹಾರ ಸೇವಿಸುವುದು ಅವರವರ ಸ್ವಾತಂತ್ರ್ಯ. ಅದನ್ನು ನಿಷೇಧಿಸಲು ಯಾರಿಗೂ ಹಕ್ಕು ಇಲ್ಲ. ಭಾರತದಂಥಾ ಮಹಾನ್ ರಾಷ್ಟ್ರಗಳು ವಿಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ಮುಂದುವರಿಯಬೇಕೇ ಹೊರತು ಧರ್ಮದ ವಿಚಾರಗಳಿಂದಲ್ಲ. ಧರ್ಮಗಳ ವಿಚಾರದಲ್ಲಿ ಈ ರೀತಿ ಮುಂದುವರಿದರೆ ಇದು ದೇಶದ ದೃಢತೆ ಮತ್ತು ವ್ಯಾಪಾರದ ಮೇಲೆ ಪರಿಣಾಮ ಬೀರಲಿದೆ. ಈಗಾಗಲೇ ಧಾರ್ಮಿಕ ಸಮಸ್ಯೆಗಳಿಂದಾಗಿ ಹಲವಾರು ದೊಡ್ಡ ಉದ್ಯಮಗಳು ಭಾರತದಿಂದ ದೂರ ಹೋಗಿವೆ. ಯಾವುದೇ ದೇಶದ ಭವಿಷ್ಯವು ಅಲ್ಲಿನ ವಿವೇಚನೆಯುಳ್ಳ ಯುವ ಜನಾಂಗದ ಕೈಯಲ್ಲಿದೆ.
ಈ ಫೋಟೊ ಪ್ರಕಾರ ಪಿಚೈ ಅವರು ದೇಶದಲ್ಲಿನ ನಿರುದ್ಯೋಗದ ಬಗ್ಗೆ ಮತ್ತು ಆಹಾರ ಕ್ರಮಗಳ ಬಗ್ಗೆ ಮಾತನಾಡಿದ್ದಾರೆ. ಪಿಚೈ ಅವರು ಈ ರೀತಿ ಹೇಳಿರುವುದಕ್ಕೆ ಹಲವರಿಂದ ಟೀಕೆಗಳೂ ಕೇಳಿ ಬಂದಿದ್ದವು.
ಆದರೆ ಪಿಚೈ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂಬುದಕ್ಕೆ ಯಾವುದೇ ಆಧಾರವೂ ಇಲ್ಲ. ಫೋಟೊದಲ್ಲಿ ಸುಂದರ್ ಪಿಚೈ ಅಂತ ಹೆಸರು ಬರೆದುದರಲ್ಲಿಯೂ ಕಾಗುಣಿತ ದೋಷ ಇದೆ.
ಕೆಲವು ನೆಟಿಜನ್ಗಳ ಪ್ರಕಾರ ಆನ್ಲೈನ್ನಲ್ಲಿ ಸುಳ್ಳು ಸುದ್ದಿಗಳು ಹೇಗೆ ಹರಡುತ್ತವೆ ಎಂಬುದಕ್ಕೆ ಇದೇ ಉದಾಹರಣೆ. ಇದೊಂದು ಸುಳ್ಳು ಸುದ್ದಿ ಎಂದು Check4Spam ಹೇಳಿದೆ.
ಇಷ್ಟೇ ಅಲ್ಲ, ಪಿಚೈ ಅವರು ನೀಟ್ ಪರೀಕ್ಷೆ ಬಗ್ಗೆ ಹೇಳಿದ ಹೇಳಿಕೆಯೂ ಸುಳ್ಳು ಸುದ್ದಿಯೇ .
ಬಡ ಕುಟುಂಬದಲ್ಲಿ ಜನಿಸಿದ ನನಗೆ ವೈದ್ಯಕೀಯ ವಿದ್ಯಾರ್ಥಿಗಳ ನೋವು ಗೊತ್ತಿದೆ.ನೀಟ್ನಂಥ ಪರೀಕ್ಷೆಗಳು ಸಾಮಾನ್ಯ ಮನುಷ್ಯರ ನಿಜವಾದ ಪ್ರತಿಭೆಯನ್ನು ನಾಶ ಮಾಡುತ್ತದೆ. ನಾನು ನೀಟ್ ಪರೀಕ್ಷೆ ಬರೆಯದೇ ಇದ್ದ ಕಾರಣ ನಾನು ಸಿಇಒ ಆದೆ. ಡಿಜಿಟಲ್ ಜಗತ್ತಿನಲ್ಲಿ ನೀಟ್ನಂಥಾ ಪರೀಕ್ಷೆಗಳಲ್ಲಿ ಮೋಸದಾಟ ನಡೆಯುತ್ತದೆ. ಸರ್ಕಾರ ವಿದ್ಯಾರ್ಥಿಗಳನ್ನು ನಗ್ನಗೊಳಿಸಿ ಅವರನ್ನು ಅವಮಾನಿಸುತ್ತಿರುವುದು ನಾಚಿಕೆಗೇಡಿನ ಸಂಗತಿ . ವಿದ್ಯಾರ್ಥಿಗಳು ಉಗ್ರರಲ್ಲ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ನ್ಯಾಯ ಸಿಗಲಿ ಎಂದು ಪ್ರಾರ್ಥಿಸೋಣ.
ಇನ್ನೊಂದೆಡೆ ಪಿಚೈ ಅವರು ನಾಮ್ ತಮಿಳರ್ ಕಾಚಿ ನೇತಾರ ಸೀಮಾನ್ ಅವರ ಬಗ್ಗೆ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ನೇತಾರ ಹೆಚ್ ರಾಜಾ ಅವರು ಟ್ವೀಟ್ ಮಾಡಿದ್ದರು .ಇದೀಗ ಆ ಟ್ವೀಟ್ ಡಿಲೀಟ್ ಆಗಿದೆ. ರಾಜಾ ಅವರ ಟ್ವೀಟ್ನಲ್ಲಿ ಪಿಚೈ ಹೇಳಿದ್ದಾರೆ ಎನ್ನಲಾಗಿರುವ ಮಾತುಗಳು ಹೀಗಿತ್ತು .
ಸೀಮನ್ ತಮಿಳನಾಗಿದ್ದರೆ ಬರೇ ಹಿಂದೂಧರ್ಮವನ್ನು ವಿಮರ್ಶಿಸುವುದೇಕೆ? ಉರ್ದು ಮಾತನಾಡುವ ಮುಸ್ಲಿಮರು ತಮಿಳರೇ? ಇಂಗ್ಲೀಷ್ ಮಾತನಾಡುವ ಕ್ರೈಸ್ತರು ತಮಿಳರೇ. ಇದನ್ನು ನಾನು ತಮಿಳಿನಲ್ಲಿ ಬರೆಯುತ್ತಿರುವುದೇಕೆಂದರೇ ಸೀಮನ್ ತಮಿಳರು. ನೀವು ಅನುಕೂಲಸಿಂಧು ಮುಖವಾಡ ತೊಡಬೇಡಿ. ತಮಿಳರನ್ನು ಅವಮಾನಿಸಬೇಡಿ.
ಇನ್ನೂ ಕೆಲವು ಸುಳ್ಳು ಮೀಮ್ಗಳು ಹೀಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.