ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಾತನ ಬಾವಿಗೆ ಕಾರ್ಮಿಕರಿಂದ ಕಾಯಕಲ್ಪ

Last Updated 5 ಜೂನ್ 2017, 4:40 IST
ಅಕ್ಷರ ಗಾತ್ರ

ಚಿತ್ರದುರ್ಗ:  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂಭಾಗ ದಲ್ಲಿರುವ ಮುನ್ಸಿಪಲ್ ಕಾಲೊನಿ ರಸ್ತೆಯಲ್ಲಿನ ಗಣಪತಿ ದೇವಸ್ಥಾನದ ಹಿಂಭಾಗದ ಪುರಾತನ ಬಾವಿಯನ್ನು ನಗರಸಭೆಯ ಪೌರಕಾರ್ಮಿಕರು ಶನಿವಾರದಿಂದ ಸ್ವಚ್ಛಗೊಳಿಸಲು ಆರಂಭಿಸಿದ್ದಾರೆ.

ನಗರಸಭೆ ಅಧ್ಯಕ್ಷ ಮಂಜುನಾಥ್ ಗೊಪ್ಪೆ ಮತ್ತು ಸದಸ್ಯರು ಆಂದೋಲನದ ರೀತಿ ಯಲ್ಲಿ ನಗರದ ಕಲ್ಯಾಣಿ, ಹೊಂಡ, ಬಾವಿಗಳನ್ನು ಸ್ವಚ್ಛಗೊಳಿಸಲು ಸಂಕಲ್ಪ ಮಾಡಿದ್ದಾರೆ. ಮೊದಲ ಪ್ರಯತ್ನವಾಗಿ ಕಳೆದ ವಾರ ಚನ್ನಕೇಶವಸ್ವಾಮಿ  ದೇವಾಲಯದ ಹಿಂಬದಿ ಕಲ್ಯಾಣಿಯನ್ನು ಹೀಗೆ ಪೌರಕಾರ್ಮಿಕರ ನೆರವಿನಿಂದ ಸ್ವಚ್ಛಗೊಳಿಸಿದರು.

ಅದರ ಮುಂದುವರಿದ ಭಾಗವಾಗಿ ಈ ಬಾವಿ ಶುಚಿಗೊಳಿಸತೊಡಗಿದ್ದಾರೆ. ಶನಿವಾರ ಬಾವಿ ಯೊಳಗಿದ್ದ ತ್ಯಾಜ್ಯವಿಲೇವಾರಿ ಮಾಡಿ, ಭಾನುವಾರ ಹೂಳು ತೆಗೆಯುವ ಕಾರ್ಯ ಮುಂದುರಿದಿದೆ.

ನಿನ್ನೆ 60 ರಿಂದ 80 ಕಾರ್ಮಿಕರು ಬಾವಿಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿ ದ್ದರು. ಇಡೀ ದಿನ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವರಿಗೆ ನಗರಸಭೆಯಿಂದ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ.

ಪುಷ್ಕರಣಿಯ ಇತಿಹಾಸ: ಪುಷ್ಕರಣಿ ಇತಿಹಾಸಕ್ಕೆ ಸಂಬಂಧಿಸಿದ ದಾಖಲೆಗಳು ಲಭ್ಯವಾಗಿಲ್ಲ. ಆದರೆ 70ರಿಂದ 80 ವರ್ಷಗಳ ಹಿಂದೆ ಇದರ ನೀರು ಬಳಸಿದವರು ಈಗಲೂ ಆ ಬಡಾವಣೆಯಲ್ಲಿದ್ದಾರೆ. ಸ್ಥಳೀಯ ನಿವಾಸಿ ಪೂಜಾರ ಚಂದ್ರಪ್ಪ ಪ್ರಕಾರ 50 ವರ್ಷಗಳ ಹಿಂದೆ ಇದೇ ರೀತಿ ಪುಷ್ಕರಣಿ ಸ್ವಚ್ಛಗೊಳಿಸಿದ್ದ ರಂತೆ.

‘1985ರಲ್ಲಿ ಇದರಿಂದ ಸುತ್ತಲಿನ ಬಡಾವಣೆಗೆ ನೀರು ಪೂರೈಕೆ ಮಾಡಲಾಗುತ್ತಿತ್ತು’ ಎಂದು ನಗರಾಭಿವೃದ್ಧಿ ಪ್ರಾಧಿ ಕಾರದ ಮಾಜಿ ಅಧ್ಯಕ್ಷ ಪಿ.ತಿಪ್ಪೇಸ್ವಾಮಿ ನೆನಪಿಸಿಕೊಳ್ಳು ತ್ತಾರೆ. ಈಗಲೂ ಪುಷ್ಕರಣಿ ಮೇಲ್ಭಾಗದ ತಡೆಗೋಡೆಯಲ್ಲಿ ಕೊಳವೆ ಜೋಡಿಸುವ ರಂಧ್ರವಿದೆ. ನಗರದ ಕೊಳಚೆ ನೀರು ಇದಕ್ಕೆ ಸೇರಬಾರದೆಂಬ ಕಾರಣಕ್ಕೆ, ರಂಧ್ರವನ್ನು ಇಟ್ಟಿಗೆಗಳಿಂದ ಮುಚ್ಚಲಾಗಿದೆ.

2007ರಲ್ಲಿ ಉತ್ತಮ ಮಳೆಯಾದಾಗ ಈ ಬಾವಿ ಭರ್ತಿಯಾಗಿತ್ತು. ‘ಎರಡು ತಿಂಗಳ ಹಿಂದಿನವರೆಗೂ ಇದರಲ್ಲಿ ನೀರಿತ್ತು. ವಾರದ ಹಿಂದೆ ನೀರು ಬತ್ತಿ ಹೋಗಿದ್ದರಿಂದ, ಈಗ ಸ್ವಚ್ಛಗೊಳಿಸಲು ಅನುಕೂಲವಾಯಿತು’ ಎನ್ನುತ್ತಾ ಆರೋಗ್ಯ ನಿರೀಕ್ಷಕ ಕಾಂತರಾಜ್, ಪುಷ್ಕರಣಿ ತಳದಲ್ಲಿ ನೀರಿರುವ ಚಿತ್ರವನ್ನು ತೋರಿಸಿದರು.

ಮಳೆ ನೀರು ತುಂಬಿಸುವ ಅವಕಾಶ: ಬಾವಿ ಸ್ವಚ್ಛಗೊಂಡ ನಂತರ ಸ್ಥಳಕ್ಕೆ ಜಲತಜ್ಞ ಎನ್.ದೇವರಾಜ ರೆಡ್ಡಿ  ಭೇಟಿ ನೀಡಿ, ಮಳೆ ನೀರು ಸಂಗ್ರಹಿಸುವ ಸಾಧ್ಯತೆ ಕುರಿತು ಪರಿಶೀಲಿಸಿದರು. ‘ತಳದಲ್ಲಿರುವ ಬಂಡೆಗಳಲ್ಲಿ ಬಿರುಕುಗಳಿವೆ. ಸ್ವಲ್ಪ ಹೂಳು ತೆಗೆಸಿದರೆ, ಒರತೆ ಸಿಗಬಹುದು’ ಎಂಬುದು ಅವರ ಅಭಿ ಪ್ರಾಯ.

ಸ್ವಚ್ಛಗೊಳಿಸಿರುವ ಪುಷ್ಕರಣಿ ಗೋಡೆಗೆ ಸುಣ್ಣ ಬಳಿಸಿ, ಅಕ್ಕಪಕ್ಕದ ನಿವಾಸಿಗಳಲ್ಲಿ ಕಸ ಹಾಕದಂತೆ ಜಾಗೃತಿ ಮೂಡಿಸಿ. ಸುತ್ತಲಿರುವ ಮನೆಗಳಿಗೆ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಿ ಕೊಂಡು, ಆ ನೀರನ್ನು ಪುಷ್ಕರಣಿಗೆ ಹರಿಸುವಂತೆ ಮನವೊಲಿಸಿ ಎಂಬ ಸಲಹೆ ಯನ್ನು ನಗರಸಭೆ ಸಿಬ್ಬಂದಿಗೆ ಕೊಟ್ಟದ್ದಾರೆ.

ಅಕ್ಕಪಕ್ಕದ ಒಂದೆರಡು ಮನೆಯ ವರು ತಮ್ಮ ಮನೆಯ ಚಾವಣಿ ಮೇಲೆ ಬೀಳುವ ಮಳೆ ನೀರನ್ನು ಕೊಳವೆಗಳ ಮೂಲಕ ಬಾವಿಗೆ ತಿರುಗಿಸಿದ್ದಾರೆ.  ಎಲ್ಲರೂ ವಿಧಾನ ಅಳವಡಿಸಿಕೊಂಡರೆ, ಈ ಮಳೆಗಾಲದಲ್ಲೇ ನೀರು ತುಂಬು ವಂತೆ ಮಾಡಬಹುದು’ ಎನ್ನುವುದು ರೆಡ್ಡಿಯವರ ಅಭಿಪ್ರಾಯವಾಗಿದೆ.

ನಗರಸಭೆ ಸ್ವಚ್ಛಗೊಳಿಸ್ಳಲಿರುವ ಹೊಂಡಗಳು..
* ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಪುಷ್ಕರಣಿ
* ಸಂಗಪ್ಪ ಲೇಔಟ್‌ನಲ್ಲಿರುವ ಪುಷ್ಕರಣಿ
* ಎಲ್‌ಐಸಿ ಕಚೇರಿ ಪಕ್ಕದ ಕಲ್ಯಾಣಿ(ಕೆಂಚಮಲ್ಲಪ್ಪ ಹೊಂಡ)
* ಕೋಟೆ ಸಮೀಪದ ಪುಷ್ಕರಣಿ
* ಮಾಸ್ತಮ್ಮ ಲೇಔಟ್‌ನಲ್ಲಿರುವ ಪುಷ್ಕರಣಿ
* ಕವಾಡಿಗರಹಟ್ಟಿ ಪುಷ್ಕರಣಿ

‘ಕಸ ಹಾಕದಂತೆ ಅರಿವು’
ಅಧ್ಯಕ್ಷ ಗೊಪ್ಪೆ ಮಂಜುನಾಥ್ ಮತ್ತು ಸದಸ್ಯರು ಸುತ್ತಲಿನ ನಿವಾಸಿಗಳ ಮನೆಗೆ ಭೇಟಿ ನೀಡಿ ‘ಸ್ವಚ್ಛಗೊಳಿಸಿರುವ ಪುಷ್ಕರಣಿಗೆ ಕಸ ಹಾಕದಂತೆ ಜಾಗೃತಿ ಮೂಡಿಸಿದ್ದಾರೆ. ದೇವಸ್ಥಾನದವರಿಗೂ ನಿರ್ಮಾಲ್ಯವನ್ನು ಬಾವಿಗೆ ಹಾಕದಂತೆ ಮನವಿ ಮಾಡಿದ್ದಾರೆ.

‘ತಳಭಾಗದಲ್ಲಿ ಮತ್ತೊಂದು ಪುಟ್ಟ ಕಲ್ಯಾಣಿ ರೀತಿಯ ರಚನೆ ಇದೆ ಎಂದು ಸ್ಥಳೀಯರು ಹೇಳಿದ್ದಾರೆ. ಹಾಗಾಗಿ, ಭಾನುವಾರ ಹೂಳು ತೆಗೆಸಲು ತಿಳಿಸಿದ್ದೇನೆ. ನಂತರ, ಗೋಡೆಗೆ ಸುಣ್ಣ ಹೊಡೆಸಿ, ಮಳೆ ನೀರು ಸಂಗ್ರಹಿಸಲು ಏನು ಮಾಡಬಹುದೆಂದು ಯೋಚನೆ ಮಾಡುತ್ತೇನೆ. ಈ ಕಾರ್ಯಕ್ಕೆ ಸ್ಥಳೀಯರ ಸಹಕಾರ ಅಗತ್ಯವಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಚನ್ನಕೇಶವಸ್ವಾಮಿ ಹೊಂಡಕ್ಕೆ ಮಳೆ ನೀರು
ಕಳೆದ ವಾರ ಸ್ವಚ್ಛಗೊಳಿಸಿದ್ದ ಚನ್ನಕೇಶವಸ್ವಾಮಿ ದೇವಾಲಯದ ಕಲ್ಯಾಣಿಗೆ ಮಳೆ ನೀರು ಹರಿಯುವ ಕೊಳವೆ ಮಾರ್ಗಗಳನ್ನು ಶನಿವಾರ ಅಧ್ಯಕ್ಷ ಮಂಜುನಾಥ್ ಗೊಪ್ಪೆ ಪರಿಶೀಲಿಸಿದ್ದಾರೆ. ಜಲತಜ್ಞ ದೇವರಾಜೆರೆಡ್ಡಿ ಅವರೊಂದಿಗೆ ನಗರಾಭಿವೃದ್ಧಿ ಪ್ರಾಧಿಕಾರ, ಆಕಾಶವಾಣಿ ಮತ್ತು ಸುತ್ತಲಿನ ಪ್ರದೇಶಗಳಿಂದ ಹರಿಯುವ

ಮಳೆ ನೀರಿನ ದಾರಿಗಳನ್ನು ಸರಿಪಡಿಸಲು ರೆಡ್ಡಿ ಸಲಹೆ ನೀಡಿದ್ದಾರೆ. ನಗರಸಭೆ ಎಂಜಿನಿಯರ್‌ಗೆ ಈ ಕುರಿತು ಮಾಹಿತಿ ನೀಡಿರುವ ಅಧ್ಯಕ್ಷರು, ಮಳೆ ಆರಂಭವಾಗುವುದರೊಳಗೆ, ಕಾಲುವೆಗಳನ್ನು ಸರಿಪಡಿಸುವಂತೆ ಸಲಹೆ ನೀಡಿದ್ದಾರೆ.

ನೀವೂ  ಭಾಗವಹಿಸಬಹುದು..
ಚಿತ್ರದುರ್ಗ ನಗರಸಭೆ ಕೈಗೆತ್ತಿಕೊಂಡಿರುವ ಹೊಂಡಗಳ ಸ್ವಚ್ಛತೆ ಕಾರ್ಯದ ಆಂದೋಲನದಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳು, ಕಾಲೇಜು ವಿದ್ಯಾರ್ಥಿಗಳು  (ಎನ್‌ಎಸ್‌ಎಸ್‌, ಎನ್‌ಸಿಸಿ, ಪರಿಸರ ಕ್ಲಬ್‌, ಪರಿಸರ ಕಾರ್ಯಕರ್ತರು) ಕೈಜೋಡಿಸಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ :9448319242

* * 

ಆಂದೋಲನದ ರೀತಿ ಹೊಂಡಗಳನ್ನು ಸ್ವಚ್ಛಗೊಳಿಸುತ್ತಿದ್ದೇವೆ. ಇವುಗಳಿಗೆ ಮಳೆ ನೀರು ತುಂಬಿಸುವ ಕುರಿತು ಚಿಂತನೆ ನಡೆಸಿದ್ದೇವೆ.
ಎಚ್.ಎನ್. ಮಂಜುನಾಥ ಗೊಪ್ಪೆ
ಅಧ್ಯಕ್ಷ, ನಗರಸಭೆ

* * 

ಇದೇ ಬಾವಿಯ ನೀರನ್ನೇ ದೇವಸ್ಥಾನಕ್ಕೆ ಬಳಸುತ್ತಿದ್ದೆವು. ನೀರು ಕೊಳಕಾಗಿದ್ದರಿಂದ ಇತ್ತೀಚೆಗೆ ಬಳಸುವುದನ್ನು ನಿಲ್ಲಿಸಿದ್ದೆವು.
ಪೂಜಾರ ಚಂದ್ರಪ್ಪ
ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT