ಮಂಗಳೂರು: ಶಿಕ್ಷಣ ಪಡೆಯುವುದು ಅಂಕಗಳನ್ನು ಗಳಿಸುವುದಕ್ಕೆ ಮಾತ್ರ ಸೀಮಿತವಾಗಿರಬಾರದು. ಜೀವನಕ್ಕೆ ಬೇಕಾದ ಮೌಲ್ಯಗಳನ್ನು ಅಳವಡಿಸಿಕೊ ಳ್ಳುತ್ತ ಹೋದರೆ ಯಶಸ್ಸು ಸಾಧಿಸಲು ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ ಹೇಳಿದರು.
ನಗರದ ವಿಕಾಸ್ ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪುನರ್ಮನನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪೋಷಕರೂ ಕೂಡ ವಿದ್ಯಾರ್ಥಿ ಗಳನ್ನು ಆಸಕ್ತಿಯುತ ಕ್ಷೇತ್ರದಲ್ಲಿ ಬೆಳೆಯಲು ಬಿಡಬೇಕು ಎಂದು ಸಲಹೆ ನೀಡಿದ ಅವರು, ರಸ್ತೆ ಸುರಕ್ಷತೆಯ ಕುರಿತಂತೆ ದೃಶ್ಯ ಮಾಧ್ಯಮದ ಮೂಲಕ ಅರಿವು ಮೂಡಿಸಿದರು.
ಅತಿಥಿಯಾಗಿದ್ದ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಎಲುವು–ಕೀಲು ವಿಭಾಗ ಮುಖ್ಯಸ್ಥ ಡಾ. ಸುರೇಂದ್ರ ಕಾಮತ್ ಮಾತನಾಡಿ, ಏಕಾಗ್ರತೆ ಮತ್ತು ಕಠಿಣ ಪರಿಶ್ರಮದಿಂದ ವಿದ್ಯಾರ್ಥಿಯೊಬ್ಬ ಗೆಲುವನ್ನು ಹೊಂದಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸ್ಥಾಪಕ ಅಧ್ಯಕ್ಷ ಜೆ. ಕೃಷ್ಣ ಪಾಲೆಮಾರ್, ‘ನಮ್ಮ ಕಾಲೇಜಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಪ್ರತ್ಯೇಕವಾಗಿ ಪಾಲನೆ ಮಾಡುತ್ತೇವೆ. ಆ ಕಾರಣಕ್ಕಾಗಿ ವಿಶಿಷ್ಟ ರೀತಿಯಲ್ಲಿ ಶಿಕ್ಷಣವನ್ನು ನೀಡುತ್ತಿದ್ದೇವೆ. ವಿದ್ಯಾರ್ಥಿಯೊಬ್ಬ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಅಗತ್ಯವಿರುವ ಪರಿಸರವನ್ನು ನಾವು ಕೊಡುತ್ತೇವೆ. ವಿದ್ಯಾರ್ಥಿಗಳು ಅಂತಹ ಸಂಸ್ಕಾರವನ್ನು ಪಡೆದು, ಸುಸಂಸ್ಕೃತರಾಗಿ ಹೊರಹೊಮ್ಮಿ ಎಲ್ಲರಿಗೂ ಕೀರ್ತಿ ತರುವಂತಾಗಬೇಕು’ ಎಂದರು.
ವಿಕಾಸ್ ಎಜು ಸಲ್ಯೂಷನ್ನ ಸಲಹೆಗಾರ ಡಾ. ಅನಂತ್ಪ್ರಭು ಜಿ. ಮಾತನಾಡಿ, ಹೊಸ ವಿದ್ಯಾರ್ಥಿಗಳು ಮತ್ತು ಹೆತ್ತವರು ಭಾಗವಹಿಸುವ ಈ ದಿನದ ಕಾರ್ಯಕ್ರಮ, ವಿದ್ಯಾರ್ಥಿಗಳಲ್ಲಿರುವ ಭಯವನ್ನು ದೂರಮಾಡಲು ಸಹಾಯಕ ಎಂದರು.ವಿಕಾಸ್ನ ಜೀವನದ ಕುರಿತು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಕೆಲವು ನಿದರ್ಶನಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಕಾಲೇಜಿನ ಪ್ರಾಂಶುಪಾಲಪ್ರೊ. ಟಿ. ರಾಜಾರಾಮ್ ರಾವ್ ಸ್ವಾಗತಿಸಿದರು. ಕಾಲೇಜಿನ ಆಡಳಿತಾಧಿಕಾರಿ ವಿದ್ಯಾ ಕಾಮತ್, ವಿದ್ಯಾರ್ಥಿಗಳಿಗೆ ಕಾಲೇಜಿನ ನೀತಿ ನಿಯಮಗಳ ಕುರಿತು ವಿವರಿಸಿದರು. ವಿಕಾಸ್ ಎಜುಕೇಶನ್ ಟ್ರಸ್ಟ್ನ ಟ್ರಸ್ಟಿಗಳಾದ ಜೆ. ಕೊರಗಪ್ಪ, ಸೂರಜ್ ಕಲ್ಯ ವೇದಿಕೆಯಲ್ಲಿದ್ದರು. ಆರ್ಟ್ ಆಫ್ ಲಿವಿಂಗ್ನ ಸಕ್ರಿಯ ಸದಸ್ಯೆ, ಕೆಎಂಸಿ ಆಸ್ಪತ್ರೆ ರೆಡಿಯಾಲಜಿ ವಿಭಾಗದ ಪ್ರಾಧ್ಯಾಪಕಿ ಡಾ. ವಿನಯ ಪೂರ್ಣಿಮಾ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಉಪನ್ಯಾಸಕಿ ಶೋಭಾ ಪಿ. ವಂದಿಸಿದರು.
* *
ವಿದ್ಯಾರ್ಥಿಗಳು ಕೇವಲ ಪಠ್ಯಕ್ಕಷ್ಟೇ ಓದಬಾರದು. ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ, ಸಾಧನೆಗಳನ್ನು ಓದಿ, ಅವುಗಳನ್ನು ಅನುಸರಿಸಬೇಕು.
ಭೂಷಣ್ ಜಿ. ಬೊರಸೆ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.