ಇಸ್ಲಾಮಾಬಾದ್: ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆಗೆ ಅಂತರರಾಷ್ಟ್ರೀಯ ನ್ಯಾಯಾಲಯವು ತಡೆಯಾಜ್ಞೆ ನೀಡಿರುವ ಕುರಿತಂತೆ ಪಾಕಿಸ್ತಾನ ಸಂಸತ್ತಿನಲ್ಲಿ ಚರ್ಚಿಸಲು ಸೋಮವಾರ ನಿರ್ಧರಿಸಲಾಯಿತು.
ಈ ಕುರಿತಂತೆ ನಿಲುವಳಿ ಸೂಚನೆ ಮಂಡಿಸಿದ ಜಮಾತ್–ಐ–ಇಸ್ಲಾಮಿ ಪಕ್ಷದ ಸಂಸದ ಸಿರಾಜುಲ್ಹಕ್, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಸರ್ಕಾರವು ಸರಿಯಾಗಿ ಸಿದ್ಧತೆ ನಡೆಸಿರಲಿಲ್ಲ ಎಂಬುದು ನ್ಯಾಯಾಲಯದ ತೀರ್ಪಿನಿಂದ ಸಾಬೀತಾಗಿದೆ ಎಂದರು.
ನಿಲುವಳಿಯನ್ನು ಅಂಗೀಕರಿಸಿದ ಸಭಾಧ್ಯಕ್ಷ ರಜಾ ರಬ್ಬಾನಿ ಅವರು ಸದನದಲ್ಲಿ ಈ ವಿವರಣೆ ನೀಡುವಂತೆ ವಿದೇಶಾಂಗ ಸಚಿವ ಹಾಗೂ ಅಟಾರ್ನಿ ಜನರಲ್ ಅವರಿಗೆ ನೋಟಿಸ್ ಜಾರಿ ಮಾಡಿದರು.
ಈ ಪ್ರಕರಣದಲ್ಲಿ ಪಾಕಿಸ್ತಾನ ನಿರೀಕ್ಷೆಯಂತೆ ನಡೆದುಕೊಂಡಿಲ್ಲ. ಇದು ರಾಷ್ಟ್ರಕ್ಕೆ ಮುಜುಗರ ತಂದಿದೆ ಎಂದು ಹಕ್ ಹೇಳಿದ್ದಾರೆ.
ಜಾಧವ್ ಬಂಧನ ಪ್ರಮುಖ ಯಶಸ್ಸು. ಆದರೆ ಭಾರತದ ಪ್ರಜೆಗೆ ಸಂಬಂಧಿಸಿದ ವಾಸ್ತವಾಂಶಗಳನ್ನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ವಿವರಿಸುವ ಅವಕಾಶವನ್ನು ಪಾಕಿಸ್ತಾನ ಕಳೆದುಕೊಂಡಿತು ಎಂದೂ ಅವರು ಆರೋಪಿಸಿದ್ದಾರೆ.