ಬೆಂಗಳೂರು: ನಾಗವಾರದಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣ ಸಂಬಂಧ ಬೌರಿಂಗ್ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಆಳ್ವ, ಸಂತ್ರಸ್ತ ಬಾಲಕಿಯ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು.
ಬಳಿಕ ಮಾತನಾಡಿದ ಅವರು, ‘ಬಾಲಕಿಯು ಸದ್ಯ ನಿದ್ರಾವಸ್ಥೆಯಲ್ಲಿದ್ದಾಳೆ. ಆಕೆಯ ಬೆರಳು ತುಂಡಾಗಿದ್ದು, ಅದನ್ನು ಮರುಜೋಡಣೆ ಮಾಡಲಾಗಿದೆ. ರಕ್ತದ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಕ್ರಮ ಕೈಗೊಳ್ಳುತ್ತೇನೆ’ ಎಂದರು.
‘ಘಟನೆಯಿಂದ ಬಾಲಕಿಯು ಆತಂಕಕ್ಕೆ ಒಳಗಾಗಿದ್ದಾಳೆ. ಆಕೆಗೆ ಕೌನ್ಸೆಲಿಂಗ್ ಅಗತ್ಯವಿದೆ. ಈ ಬಗ್ಗೆ ನಿಮ್ಹಾನ್ಸ್ ವೈದ್ಯ ಡಾ. ಶೇಷಾದ್ರಿ ಅವರೊಂದಿಗೆ ಚರ್ಚಿಸುತ್ತೇನೆ’ ಎಂದು ತಿಳಿಸಿದರು.