ಗೌರಿಬಿದನೂರು: ಕೇಂದ್ರ ಬಿಜೆಪಿ ಸರ್ಕಾರದ ಪ್ರಸ್ತಾವಿತ ಗೋ ಹತ್ಯೆ ನಿಷೇಧ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಮುಖಂಡರು ಸೋಮವಾರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ತಾಲ್ಲೂಕು ಪಂಚಾಯಿತಿ ಆವರಣದಿಂದ ಮರೆವಣಿಗೆಯಲ್ಲಿ ಹೊರಟ ದಲಿತ ಮುಖಂಡರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳು ಕೂಗಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ನಂತರ ತಾಲ್ಲೂಕು ಕಚೇರಿ ಬಳಿ ಕೆಲ ಕಾಲ ಪ್ರತಿಭಟನೆ ನಡೆಸಿದರು.
ದಲಿತ ಮುಖಂಡ ಸಿ.ಜಿ.ಗಂಗಪ್ಪ ಮಾತನಾಡಿ, ‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಭಾವನಾತ್ಮಕ ವಿಚಾರಗಳನ್ನು ಜನರ ಮಧ್ಯೆ ಬೆರಸಿ ಬಹು ಸಂಸ್ಕೃತಿಯ ಭಾರತವನ್ನು ಏಕ ಸಂಸ್ಕೃತಿ ಭಾರತವನ್ನಾಗಿ ಪರಿವರ್ತಿಸಲು ಸಂಘ ಪರಿವಾರದವರು ತಂತ್ರ ರೂಪಿಸುತ್ತಿದ್ದಾರೆ’ ಎಂದು ಆರೋಪಿಸಿದರು.
ದಲಿತ ಮುಖಂಡ ಚನ್ನಪ್ಪ ಮಾತನಾಡಿ, ‘ನಮ್ಮ ದೇಶದ ಸಂವಿಧಾನದಲ್ಲಿ ಎಲ್ಲಿಯೂ ಕೂಡ ಆಹಾರ ಸೇವನೆ ಬಗ್ಗೆ ಪ್ರಸ್ತಾಪಿಸಿಲ್ಲ. ಇಂದಿನ ಮನುವಾದಿಗಳು ಮತ್ತೆ ಮನು ಸಂಸ್ಕೃತಿಯನ್ನು ಸ್ಥಾಪಿಸಲು ಹುನ್ನಾರ ನಡಿಸಿದ್ದಾರೆ’ ಎಂದು ದೂರಿದರು.
ವಿವಿಧ ದಲಿತ ಸಂಘಟನೆಗಳ ಮುಖಂಡರಾದ ಮಾ.ಕಾ.ರಾಮಚಂದ್ರ, ಸನಂದ ಕುಮಾರ್, ಎಚ್.ಎಲ್.ವೆಂಕಟೇಶ್, ಗೋಪಾಲ್, ಮುನಿಯಪ್ಪ, ಸತ್ಯನಾರಾಯಣ, ನರಸಿಂಹಮೂರ್ತಿ, ಕೆ.ನಂಜುಂಡಪ್ಪ, ಅಶ್ವತ್ಥಪ್ಪ ಇದ್ದರು.