ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧ ಗಾಳಿ, ಸ್ವಚ್ಛ ಪರಿಸರಕ್ಕೆ ಮೊದಲ ಆದ್ಯತೆ

Last Updated 6 ಜೂನ್ 2017, 6:19 IST
ಅಕ್ಷರ ಗಾತ್ರ

ಮಂಡ್ಯ: ‘ನಗರದ ಜನರು ಶುದ್ಧ ಗಾಳಿ ಲಭ್ಯವಾಗುವಂತೆ ಮಾಡಲು ಎಲ್ಲ 52 ಉದ್ಯಾನಗಳಲ್ಲಿ ಸಾಮೂಹಿಕವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ’ ಎಂದು ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ ಹೇಳಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರಸಭೆ ಸೋಮವಾರ ಕಸ್ತೂರ ಬಾ ಉದ್ಯಾನದಲ್ಲಿ ಏರ್ಪಡಿಸಿದ್ದ  ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸ್ವರ್ಣಸಂದ್ರದಲ್ಲಿರುವ ಉದ್ಯಾನವನ್ನು ಶುಗರ್ ಹೋಂಡಾ ಸಂಸ್ಥೆ ದತ್ತು ಪಡೆದು ಅಭಿವೃದ್ಧಿಪಡಿಸಿದೆ ಹಾಗೂ ಹೌಸಿಂಗ್‌ಬೋರ್ಡ್‌ ಬಡಾವಣೆಯ ಅಂಬರೀಷ್ ಉದ್ಯಾನ ವನ್ನು ಬೆಂಗಳೂರಿನ ಡೋರ್‌ಪ್ಲಾಂಟ್ಸ್‌ ಸಂಸ್ಥೆ ದತ್ತು ಪಡೆದು ಅಭಿವೃದ್ಧಿಪಡಿಸುತ್ತಿದೆ. ನಗರದ ಜನರು ಶುದ್ಧ ಗಾಳಿ ಪಡೆಯಲು ಎಲ್ಲ ಉದ್ಯಾನಗಳನ್ನು ಅಭಿವೃದ್ಧಿ ಪಡಿಸಲಾಗುವುದು’ ಎಂದು ಹೇಳಿದರು.

ಮಾಜಿ ಸಚಿವ ಎಂ.ಎಸ್. ಆತ್ಮಾನಂದ, ನಗರಸಭೆ ಆಯುಕ್ತ ಟಿ.ಎನ್‌.ನರಸಿಂಹಮೂರ್ತಿ, ನಗರಸಭಾ ಸದಸ್ಯರಾದ ಪುಷ್ಪಾವತಿ, ಸುಮಿತ್ರಾ, ಶಿವರತ್ನ, ಪರಿಸರ ಎಂಜಿನಿಯರ್‌ ಸುಬ್ರಹ್ಮಣ್ಯ,  ಆರೋಗ್ಯ ನಿರೀಕ್ಷಕರಾದ ಹರಿಪ್ರಸಾದ್, ಗೋವಿಂದರಾಜ್, ಕುಳ್ಳೇಗೌಡ ಹಾಜರಿದ್ದರು.

ರೈತರು ಹಾಗೂ ಕಾರ್ಮಿಕರ ಹಿತರಕ್ಷಣಾ ಟ್ರಸ್ಟ್‌
‘ಜಿಲ್ಲೆಯ ಮಳೆಯಾಶ್ರಿತ ಪ್ರದೇಶದ ರೈತರು ತರಕಾರಿ ಬೆಳೆದುಕೊಂಡು ನೆಮ್ಮದಿಯಿಂದ ಇದ್ದಾರೆ. ಆದರೆ ನೀರಾವರಿ ಆಶ್ರಿತ ಪ್ರದೇಶದ ರೈತರೇ  ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ವಿಷಾದನೀಯ’ ಎಂದು ಕೃಷಿ ವಿಜ್ಞಾನಿ  ಡಾ.ವಸಂತಕುಮಾರ್‌ ಹೇಳಿದರು.

ಕರ್ನಾಟಕ ರಾಜ್ಯ ರೈತರು ಹಾಗೂ ಕಾರ್ಮಿಕರ ಹಿತರಕ್ಷಣಾ ಟ್ರಸ್ಟ್‌ ವತಿಯಿಂದ ನಡೆದ ವಿಶ್ವ ಪರಿಸರ ದಿನಾಚರಣೆ ಹಾಗೂ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರಗತಿಪರ ರೈತರು ಹಾಗೂ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಟ್ರಸ್ಟ್‌ ಅಧ್ಯಕ್ಷ ಎಚ್‌.ಆರ್‌.ಅಶೋಕ್‌ ಕುಮಾರ್‌, ಬಿಜೆಪಿ ನಗರ ಘಟಕದ ಅಧ್ಯಕ್ಷ ಎಚ್‌.ಆರ್‌. ಅರವಿಂದ್‌, ಜಿ.ಎಸ್‌.ತಿಮ್ಮೇಗೌಡ, ಜಿ.ವಿ.ನಾಗರಾಜ ಮತ್ತಿತರರು ಹಾಜರಿದ್ದರು.

‘ಪರಿಸರ’ ಗ್ರಾಮೀಣಾಭಿವೃದ್ಧಿ ಸಂಸ್ಥೆ: ‘ನಿಸರ್ಗದ ಸೇವೆ ಮಾಡುವ ಪರಿಸರ ಪ್ರೇಮಿಗಳನ್ನು ಗೌರವಿಸಬೇಕು’ ಎಂದು ಚಂದೂಪುರ ಸರ್ಕಾರಿ ಪಿಯು ಕಾಲೇಜು ಉಪ ಪ್ರಾಚಾರ್ಯ ಲೋಕೇಶ್‌ ಹೇಳಿದರು.

ನಗರದ 16ನೇ ವಾರ್ಡ್‌ ಉದ್ಯಾನದಲ್ಲಿ ಪರಿಸರ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ನಡೆದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಂಸ್ಥೆ ಅಧ್ಯಕ್ಷ ಮಂಗಲ ಎಂ. ಯೋಗೀಶ್ ,  ಗೌರವಾಧ್ಯಕ್ಷ ಕೆ.ಟಿ. ಹನುಮಂತು, ನಿವೃತ್ತ ಮುಖ್ಯ ಶಿಕ್ಷಕ ಶ್ರೀನಿವಾಸ್‌,  ಸಂತೆಕಸಲಗೆರೆ ಬಸವರಾಜು ಇತರರು ಹಾಜರಿದ್ದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌:  ‘ಪರಿಸರ ಜಾಗೃತಿ ಸರ್ವರಿಗೂ ಇರಬೇಕು. ಪರಿಸರ ಮಾಲಿನ್ಯ ತಡೆಗೆ ಸಹಕರಿಸಬೇಕು’ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಮನ್ಸೂರ್‌ ಅಹಮದ್‌ ಜಮಾನ್‌ ಹೇಳಿದರು.

ರಾಜ್ಯ ವಿಜ್ಞಾನ ಪರಿಷತ್‌, ಅರಣ್ಯ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ನಡೆದ ಪರಿಸರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಡಿಡಿಪಿಐ ಎಂ.ಶಿವಮಾದಪ್ಪ, ವೃತ್ತಿ ಶಿಕ್ಷಣ ವಿಷಯ ಪರಿವೀಕ್ಷಕ ಎಂ.ಆರ್‌.ಮುನಿಯಪ್ಪ, ವಿಜ್ಞಾನ ಪರಿಷತ್‌ ಅಧ್ಯಕ್ಷ ಚಿಕ್ಕಸ್ವಾಮಿ ಹಾಜರಿದ್ದರು.

ಶುಗರ್‌ ಹೋಂಡಾ: ‘ಸ್ವರ್ಣಸಂದ್ರದ ಬಳಿಯ ಉದ್ಯಾನವನ್ನು ಶುಗರ್ ಹೋಂಡಾ ಸಂಸ್ಥೆ ದತ್ತು ತೆಗೆದುಕೊಳ್ಳುತ್ತಿರುವುದು ಸ್ವಾಗತಾರ್ಹ’ ಎಂದು ಮಾಜಿ ಸಚಿವ ಎಂ.ಎಸ್.ಆತ್ಮಾನಂದ ತಿಳಿಸಿದರು.

32ನೇ ವಾರ್ಡ್‌ನ ಉದ್ಯಾನದಲ್ಲಿ ಶುಗರ್ ಹೊಂಡಾ ಸಂಸ್ಥೆ ಆಯೋಜಿಸಿದ್ದ ಪರಿಸರ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಶುಗರ್ ಹೊಂಡಾ ವ್ಯವಸ್ಥಾಪಕ ಸುಧೀರ್ ಜೈನ್, ನಗರಸಭಾ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ, ಆಯುಕ್ತ ನರಸಿಂಹಮೂರ್ತಿ, ಸದಸ್ಯರಾದ ಪುಷ್ಪಾವತಿ, ಸುಮಿತ್ರಾ ಶಂಕರ್, ಶಿವಪ್ರಕಾಶ್‌ ಬಾಬು ಇದ್ದರು.

ಜಯ ಕರ್ನಾಟಕ: ಜಯ ಕರ್ನಾಟಕ ಸಂಘಟನೆ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ  ನಗರದ ಪಶ್ಚಿಮ ಪೊಲೀಸ್ ಠಾಣಾಧಿಕಾರಿಗಳಿಗೆ ಜಿಲ್ಲಾ ಘಟಕದ ಅಧ್ಯಕ್ಷ ಯೋಗಣ್ಣ ಸಸಿ ವಿತರಿಸಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ರವೀಂದ್ರ, ಪ್ರ.ಕಾ.ಬೋರೇಗೌಡ, ಹರೀಶ್, ಮೈಕೆಲ್, ಯೋಗೇಶ್, ಪ್ರವೀಣ್ ಮಹಾಜರಿದ್ದರು.

ಪರಿಸರ ರಕ್ಷಣೆ ಎಲ್ಲರ ಕರ್ತವ್ಯ
ಮಳವಳ್ಳಿ: ಮಾಲಿನ್ಯ ಹೆಚ್ಚಾದಂತೆ ಪರಿಸರ ಸಮತೋಲನದಲ್ಲಿ ಏರುಪೇರಾಗುತ್ತಿದೆ. ಸಂವಿಧಾನದ ಮೂಲಕ ಹಕ್ಕು ಪಡೆಯುವ ಹಾಗೆ ನಮ್ಮ ಕರ್ತವ್ಯವನ್ನು ಪಾಲಿಸಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಂ.ಭಾರತಿ ತಿಳಿಸಿದರು.

ಪಟ್ಟಣದ ಹೊರವಲಯದಲ್ಲಿರುವ ಆದರ್ಶ ಮಹಾವಿದ್ಯಾಲಯ (ಕೇಂದ್ರ ಪುರಸ್ಕೃತ) ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆದರ್ಶ ವಿದ್ಯಾಲಯ, ಅರಣ್ಯ ಇಲಾಖೆ ಸಹಯೋಗದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಸಸಿನೆಟ್ಟು ನಂತರ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂವಿಧಾನದಡಿ ಪ್ರತಿಯೊಬ್ಬ ನಾಗರಿಕನೂ ಹಕ್ಕು ಪಡೆಯುವ ಅವಕಾಶವಿದೆ. ಅದೇ ರೀತಿ ಕರ್ತವ್ಯ ಪಾಲನೆ ಮಾಡಬೇಕು. ಈ ನಿಟ್ಟಿನಲ್ಲಿ ಪರಿಸರವನ್ನು ಉಳಿಸುವ ಕೆಲಸವೂ ನಮ್ಮಿಂದಾಗಬೇಕು ಎಂದು ಹೇಳಿದರು.

ವಲಯ ಅರಣ್ಯ ಅಧಿಕಾರಿ ಮಂಜು ಮಾತನಾಡಿದರು. ಹೆಚ್ಚುವರಿ ನ್ಯಾಯಾಧೀಶ ಬಾಲಸುಬ್ರಮಣಿ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಹೇಮಂತ್, ವಲಯ ಅರಣ್ಯ ಅಧಿಕಾರಿ ರಂಗಸ್ವಾಮಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ದರ್ಶನ್, ಮುಖ್ಯಶಿಕ್ಷಕ ಶಿವರಾಜು, ಎಸ್‌ಡಿಎಂಸಿ ಅಧ್ಯಕ್ಷ ಎಂ.ಶಿವಕುಮಾರ್, ವಕೀಲರಾದ ರವೀಂದ್ರ, ಶ್ರೀಕಂಠಸ್ವಾಮಿ, ಟಿ.ಜಿ.ಜಗದೀಶ್, ಮಲ್ಲಪ್ಪ ಹಾಜರಿದ್ದರು.

ಜಾಥಾ:  ಪಟ್ಟಣದ ಭಗವಾನ್ ಬುದ್ಧ ಬಿ.ಇಡಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಪರಿಸರ ದಿನಾಚರಣೆ ಅಂಗವಾಗಿ ಸೋಮವಾರ ಭಿತ್ತಿ ಫಲಕಗಳನ್ನು ಹಿಡಿದು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಜಾಥಾ ನಡೆಸಿದರು.

ಪ್ರಾಂಶುಪಾಲ ಡಾ.ಸುರೇಶ್, ಉಪನ್ಯಾಸಕರು ಹಾಜರಿದ್ದರು.

ರಾಗಿ ಬೊಮ್ಮನಹಳ್ಳಿ: ಇಲ್ಲಿನ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಕೆರೆ ಏರಿಯ ಮೇಲೆ, ಶಾಲೆ ಮತ್ತು ಆಸ್ಪತ್ರೆ ಆವರಣದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನ ಆಚರಿಸಲಾಯಿತು.

ಅಧ್ಯಕ್ಷ ಜಯಕುಮಾರ್, ಪಿಡಿಒ ಪ್ರಶಾಂತ್‌ಬಾಬು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು, ನೌಕರರು ಹಾಜರಿದ್ದರು.

ರಾವಣಿ: ಇಲ್ಲಿನ ಪ್ರೌಢಶಾಲೆಯಲ್ಲಿ ಪರಿಸರ ದಿನ ಆಚರಿಸಲಾಯಿತು. ಜಾಥಾ ಮೂಲಕ ಪರಿಸರದ ಬಗ್ಗೆ ಅರಿವು ಮೂಡಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಭೀಮಾನಾಯಕ್, ಮುಖ್ಯಶಿಕ್ಷಕ ಶಿವಲಿಂಗಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT