ರಾಮನಗರ: ಮೇಕೆದಾಟು ಚಲೋ ಅಂಗವಾಗಿ ಕನ್ನಡ ಒಕ್ಕೂಟಗಳ ಕಾರ್ಯಕರ್ತರು ಇಲ್ಲಿನ ಐಜೂರು ವೃತ್ತದಲ್ಲಿ ಮಂಗಳವಾರ ೧೦೧ ಈಡುಗಾಯಿ ಒಡೆದು ಪ್ರತಿಭಟನೆ ನಡೆಸಿದರು.
ಕನ್ನಡ ಒಕ್ಕೂಟಗಳ ಅಧ್ಯಕ್ಷ ವಾಟಾಳ್ ನಾಗರಾಜು ಮಾತನಾಡಿ, ತಮಿಳುನಾಡು ವಿರೋಧವನ್ನು ಲೆಕ್ಕಿಸದೇ ಮೇಕೆದಾಟು ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿದರು.
ಇದೇ ೧೨ರಂದು ಕರ್ನಾಟಕ ಬಂದ್ ನಡೆಯುವುದು ನಿಶ್ಚಿತ. ಬಸ್, ಆಟೋ, ಅಂಗಡಿ ಮುಂಗಟ್ಟು ಮುಚ್ಚಿ ಬೆಂಬಲ ನೀಡಬೇಕು. ಬಂದ್ ಸಂಬಂಧ ಈವರೆಗೆ ನಮ್ಮನ್ನು ರಾಜ್ಯ ಸರ್ಕಾರ ಸಂಪರ್ಕಿಸಿಲ್ಲ. ಎಂದರು.
ಪ್ರತಿಭಟನೆ ಹತ್ತಿಕ್ಕಲು ಮುಂದಾದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮಹದಾಯಿ, ಕಳಸಾ ಬಂಡೂರಿ ಹೋರಾಟ ಎರಡು ವರ್ಷ ತಲುಪಿದ್ದು, ರಾಜ್ಯದ ಸಂಸದರು ಇನ್ನಾದರೂ ಗಂಡಸ್ತನ ಪ್ರದರ್ಶಿಸಿ ಸಂಸತ್ತಿನಲ್ಲಿ ಧ್ವನಿ ಎತ್ತಬೇಕು. ರಾಜ್ಯದ ನೀರಾವರಿ ಯೋಜನೆಗಳ ಜಾರಿಗೆ ಪ್ರಧಾನಿ ಮಧ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಿದರು.