ನವದೆಹಲಿ: ಬಡ್ಡಿ ದರ ಕಡಿತ ಮಾಡಬೇಕೆಂದು ಸರ್ಕಾರ ಮತ್ತು ಉದ್ಯಮ ವಲಯದಿಂದ ಬೇಡಿಕೆ ವ್ಯಕ್ತವಾಗುತ್ತಿದ್ದರೂ, ಭಾರತೀಯ ರಿಸರ್ವ್ ಬ್ಯಾಂಕ್, ಬುಧವಾರ ಪ್ರಕಟಿಸಲಿರುವ ತನ್ನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆ ಇದೆ.
ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ನೇತೃತ್ವದಲ್ಲಿನ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಮಂಗಳವಾರ ಇಲ್ಲಿ ಸಭೆ ಸೇರಿ ಬಡ್ಡಿ ದರ ಕಡಿತದ ಬಗೆಗಿನ ಚರ್ಚೆಗೆ ಚಾಲನೆ ನೀಡಿತು. ಸಮಿತಿಯು ನಾಳೆಯೂ ಈ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬಂದ ನಂತರ ಬಡ್ಡಿ ದರ ಕಡಿತದ ನಿರ್ಧಾರ ಪ್ರಕಟಗೊಳ್ಳಲಿದೆ.
2016-17ನೇ ಹಣಕಾಸು ವರ್ಷದಲ್ಲಿ ಶೇ 7.1ಕ್ಕೆ ಕುಸಿದಿರುವ ದೇಶಿ ಆರ್ಥಿಕ ವೃದ್ಧಿ ದರಕ್ಕೆ (ಜಿಡಿಪಿ) ಚೇತರಿಕೆ ನೀಡಲು ಬಡ್ಡಿ ದರ ಕಡಿತದ ಅಗತ್ಯ ಇದೆ ಎಂದು ಉದ್ಯಮ ವಲಯವು ಬಲವಾಗಿ ಪ್ರತಿಪಾದಿಸುತ್ತಿದೆ.
ಕಡಿಮೆ ದರಕ್ಕೆ ಸಾಲ ದೊರೆಯುವುದರಿಂದ ಖಾಸಗಿ ಬಂಡವಾಳ ಹೂಡಿಕೆಗೆ ಉತ್ತೇಜನ ಸಿಗಲಿದೆ ಎಂದು ಸರ್ಕಾರವೂ ಬಡ್ಡಿ ದರ ಕಡಿತಕ್ಕೆ ಒಲವು ತೋರಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿನ ಈ ದ್ವಿತೀಯ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ, ಆರ್ಬಿಐ ಬಡ್ಡಿ ದರ ಕಡಿತಕ್ಕೆ ಮುಂದಾಗಲಾರದು ಎಂದು ಹಣಕಾಸು ವಲಯದ ಪರಿಣತರು ಅಂದಾಜಿಸಿದ್ದಾರೆ.
ಹಣದುಬ್ಬರದ ಮೇಲೆ ಜಿಎಸ್ಟಿ ಬೀರಬಹುದಾದ ಪರಿಣಾಮವನ್ನು ಪರಿಗಣಿಸಿ ಮುಂದಿನ ಬಾರಿ ಆರ್ಬಿಐ ಬಡ್ಡಿ ದರ ಕಡಿತ ಮಾಡಬಹುದು ಎನ್ನುವುದು ಮಾರುಕಟ್ಟೆ ತಜ್ಞರ ಅನಿಸಿಕೆಯಾಗಿದೆ.