ಲಖನೌ: ಕರ್ನಾಟಕ ವೃಂದದ ಐಎಎಸ್ ಅಧಿಕಾರಿ ಆಗಿದ್ದ ಅನುರಾಗ್ ತಿವಾರಿ ಅವರ ಸಾವು ಅತಿಯಾಗಿ ಮಾತ್ರೆ ಸೇವಿಸಿದ್ದರಿಂದ ಆಗಿರಬಹುದೇ ಎಂಬ ಬಗ್ಗೆ ವಿಶೇಷ ತನಿಖಾ ತಂಡವು (ಎಸ್ಐಟಿ) ತನಿಖೆ ನಡೆಸುತ್ತಿದೆ.
ಇತ್ತೀಚೆಗೆ ಬೆಂಗಳೂರಿನ ತಿವಾರಿ ಅವರ ಮನೆಗೆ ಎಸ್ಐಟಿ ಸದಸ್ಯರು ಭೇಟಿ ನೀಡಿದ್ದಾಗ ಅಲ್ಲಿ ಭಾರಿ ಪ್ರಮಾಣದಲ್ಲಿ ಸಿಗರೇಟ್ ತುಂಡುಗಳು, ಮಾನಸಿಕ ರೋಗಕ್ಕೆ ಸಂಬಂಧಿಸಿದ ಔಷಧಗಳು ದೊರೆತಿವೆ.
ಲಖನೌದಲ್ಲಿ ತಿವಾರಿ ಉಳಿದುಕೊಂಡಿದ್ದ ಅತಿಥಿ ಗೃಹದ ಕೊಠಡಿಯಲ್ಲೂ ಬಹಳಷ್ಟು ಸಿಗರೇಟ್ ತುಂಡುಗಳು ಪತ್ತೆಯಾಗಿವೆ. ಬೆಂಗಳೂರಿನ ಮನೆ ಮತ್ತು ಅತಿಥಿಗೃಹದಲ್ಲಿ ದೊರೆತ ಸಿಗರೇಟ್ ತುಂಡುಗಳು ಮತ್ತು ಇತರ ವಸ್ತುಗಳನ್ನು ಅಧಿಕಾರಿಗಳು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಎಸ್ಐಟಿ ಸದಸ್ಯರು ಬೆಂಗಳೂರಿಗೆ ಭೇಟಿ ನೀಡಿದ್ದಾಗ ಕರ್ನಾಟಕದ ಇಬ್ಬರು ಐಎಎಸ್ ಅಧಿಕಾರಿಗಳು ತಿವಾರಿ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಆದರೆ ತಮ್ಮ ಹೇಳಿಕೆಗಳನ್ನು ದಾಖಲಿಸಲು ಅವರು ನಿರಾಕರಿಸಿದ್ದರು.
ಕಟ್ಟು ಕಥೆ: ಅತಿಯಾದ ಮಾತ್ರೆ ಸೇವನೆ ಎಂಬುದೆಲ್ಲ ಪೊಲೀಸರ ಕಟ್ಟುಕಥೆ. ಪ್ರಕರಣದ ಹಾದಿ ತಪ್ಪಿಸಲು ಪೊಲೀಸರು ಈ ರೀತಿಯ ವದಂತಿ ಹರಡುತ್ತಿದ್ದಾರೆ ಎಂದು ತಿವಾರಿ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ತನಿಖೆಯನ್ನು ಎಸ್ಐಟಿ ಸರಿಯಾಗಿ ನಡೆಸುತ್ತಿಲ್ಲ ಎಂದೂ ದೂರಿದ್ದಾರೆ.