ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಸತಿ ಸಚಿವ ಕೃಷ್ಣಪ್ಪ ಕಳಂಕ ಮುಕ್ತ’ ರಾಜ್ಯಪಾಲರಿಗೆ ಮುಖ್ಯಮಂತ್ರಿ ವರದಿ?

Last Updated 6 ಜೂನ್ 2017, 20:14 IST
ಅಕ್ಷರ ಗಾತ್ರ

ಬೆಂಗಳೂರು: ‘ವಸತಿ ಸಚಿವ ಎಂ. ಕೃಷ್ಣಪ್ಪ ಕಳಂಕಮುಕ್ತರು ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರಿಗೆ ವರದಿ ಕಳುಹಿಸಿದ್ದಾರೆ.

‘ಬೆಂಗಳೂರು ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಬಡಾವಣೆ ನಿರ್ಮಿಸಿ, ಹಸ್ತಾಂತರಿಸಲು ವಾಜರಹಳ್ಳಿ ಮತ್ತು ರಘುವನಹಳ್ಳಿಯಲ್ಲಿ ಕೃಷ್ಣಪ್ಪ ಪಾಲುದಾರಿಕೆಯ ಕಂಪೆನಿ ರೈತರಿಂದ ಭೂಸ್ವಾಧೀನ ಪಡಿಸಿಕೊಂಡಿತ್ತು. ಈ ಜಮೀನುಗಳ ಪರಿಹಾರ ಮೊತ್ತವನ್ನು  ತನ್ನ ಹೆಸರಿಗೆ ಪಡೆದ ಕಂಪೆನಿ ರೈತರಿಗೆ ವಂಚಿಸಿದೆ ಎಂಬ ಗಂಭೀರ ಆರೋಪ ಸಚಿವರ ಮೇಲೆ ಇದೆ. ಈ ರೀತಿಯ ಕಳಂಕ ಹೊತ್ತಿರುವ ಕೃಷ್ಣಪ್ಪ ಅವರನ್ನು ಸಚಿವ ಸ್ಥಾನದಲ್ಲಿ ಮುಂದುವರಿಸುವುದು ಎಷ್ಟು ಸರಿ’ ಎಂದು ರಾಜ್ಯಪಾಲ ವಜುಭಾಯಿ ವಾಲಾ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು.

ಈ ಸಂಬಂಧ ವರದಿ ಸಲ್ಲಿಸಿರುವ ಮುಖ್ಯಮಂತ್ರಿ, ‘ವಾಜರಹಳ್ಳಿ ಮತ್ತು ರಘುವನಹಳ್ಳಿಯ ಜಮೀನು ಸ್ವಾಧೀನ ವಿವಾದದಲ್ಲಿ ಅವರ ವಿರುದ್ಧ ಹೈಕೋರ್ಟ್‌ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಆಧರಿಸಿ ಅವರು ತಪ್ಪು ಮಾಡಿದ್ದಾರೆ ಎಂದು ಹೇಳುವುದು ಸರಿಯಲ್ಲ. ಎರಡು ದಶಕಗಳಷ್ಟು ಹಿಂದಿನ ಈ ಪ್ರಕರಣ ಈಗಾಗಲೇ ಸುಪ್ರೀಂಕೋರ್ಟ್‌ವರೆಗೂ ಹೋಗಿತ್ತು. ಇಂತಹ ಪ್ರಕರಣವನ್ನು ಮಾನದಂಡವಾಗಿಟ್ಟುಕೊಂಡು ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗದು’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಆದರೆ, ‘ಈ ಸಂಬಂಧ ಯಾವುದೇ ವರದಿಯನ್ನು ರಾಜಭವನಕ್ಕೆ ಕಳುಹಿಸಿಲ್ಲ’ ಎಂದು ಮುಖ್ಯಮಂತ್ರಿ ಸಚಿವಾಲಯದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT