ವಿಜಯಪುರ: ಸೋಮವಾರದಿಂದ (ಜೂನ್ 5) ಎಂಜಿನಿಯರಿಂಗ್, ಆರ್ಕಿಟೆಕ್ಚರ್, ವೈದ್ಯಕೀಯ, ಡೆಂಟಲ್, ಬಿಎಸ್ಸಿ ಅಗ್ರಿಕಲ್ಚರ್ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಕೋರ್ಸ್ಗಳ ಪ್ರವೇಶ ದಾಖ ಲೆಗಳ ಪರಿಶೀಲನೆ ಆರಂಭಗೊಂಡಿದೆ.
ನಗರದ ಬಿಎಲ್ಡಿಇ ಸಂಸ್ಥೆಯ ಡಾ.ಫ.ಗು.ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸಿಇಟಿಯಲ್ಲಿ ವಿವಿಧ ರ್್ಯಾಂಕ್ ಪಡೆದ ಅವಳಿ ಜಿಲ್ಲೆಯ ವಿದ್ಯಾರ್ಥಿಗಳ ಮೂಲ ದಾಖಲಾತಿ ಪರಿಶೀಲನೆಗೆ ಚಾಲನೆ ನೀಡಲಾಗಿದೆ.
ಅವಿಭಜಿತ ವಿಜಯಪುರ ಜಿಲ್ಲೆಯ ವಿದ್ಯಾರ್ಥಿಗಳು ತಮ್ಮ ರ್್ಯಾಂಕಿಂಗ್ಗೆ ಅನುಗುಣವಾಗಿ ನಿಗದಿಪಡಿಸಿದ ದಿನದಂದು ಪೋಷಕರ ಜತೆ ಸಹಾಯವಾಣಿ, ದಾಖಲಾತಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ, ಮೂಲ ದಾಖಲಾತಿಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಪರಿಶೀಲನೆಗಾಗಿ ನೀಡುತ್ತಿದ್ದಾರೆ. ಜೂನ್ 21ರವ ರೆಗೂ ದಾಖಲಾತಿ ಪರಿಶೀಲನೆ ನಡೆಯಲಿದೆ.
ಪಾಲಕರಲ್ಲಿ ಹರ್ಷ: ವಿಜಯಪುರ ನಗರ ದಲ್ಲಿ ಸಿಇಟಿ ದಾಖಲೆಗಳ ಪರಿಶೀಲನೆ ನಡೆ ಯುತ್ತಿರುವುದು ವಿದ್ಯಾರ್ಥಿ ಸಮೂಹ–ಪಾಲಕರಲ್ಲಿ ಅಪಾರ ಹರ್ಷವನ್ನುಂಟು ಮಾಡಿದೆ.
‘ಸಹಾಯವಾಣಿ ಕೇಂದ್ರ ಗ್ರಾಮೀಣ ಜನರಿಗೆ ಸಾಕಷ್ಟು ಅನುಕೂಲ ಕಲ್ಪಿಸಿದೆ. ಈ ಹಿಂದೆ ದಾಖಲಾತಿ ಪರಿಶೀಲನೆಗಾಗಿ ಬೆಂಗಳೂರಿಗೆ ಹೋಗಿ ನಾಲ್ಕೈದು ದಿನ ಕಳೆಯಬೇಕಿತ್ತು. ಇದೀಗ ಅರ್ಧ ದಿನವೂ ನಮಗೆ ಬೇಕಿಲ್ಲ.
ಬೆಂಗಳೂರಿನಲ್ಲಿ ನಮ್ಮ ಭಾಷೆ ಅವರಿಗೆ ತಿಳಿಯುತ್ತಿರಲಿಲ್ಲ. ಸಮರ್ಪಕ ಮಾಹಿತಿಯೂ ದೊರೆಯುತ್ತಿರಲಿಲ್ಲ. ಇಲ್ಲಿ ನಮ್ಮ ಭಾಗದ ಜನರೇ ದಾಖಲಾತಿ ಪರಿಶೀಲಿಸುತ್ತಾರೆ. ಗೊತ್ತಾಗದಿದ್ದುದನ್ನು ಕೇಳಿದರೆ ಅರ್ಥವಾಗುವಂತೆ ತಿಳಿಸುತ್ತಾರೆ. ಇದು ನಮ್ಮ ಪಾಲಿಗೆ ವರದಾನ ವಾಗಿದೆ’ ಎಂದು ಮಕ್ಕಳ ದಾಖಲಾತಿ ಪರಿಶೀಲನೆಗೆ ಬಂದಿದ್ದ ಗೋಪಾಲದಾಸ, ಬಸಣ್ಣ ರಾಜಪ್ಪ, ಆರ್.ಜೆ.ಕುಲಕರ್ಣಿ ತಿಳಿಸಿದರು.
ಕೇಂದ್ರದ ಕುರಿತು...: ಅವಿಭಜಿತ ಜಿಲ್ಲೆಯ ವಿದ್ಯಾರ್ಥಿಗಳ ಅನುಕೂಲಕ್ಕಾ ಗಿಯೇ ನಗರದಲ್ಲಿ 2012ರಲ್ಲಿ ಆರಂಭ ಗೊಂಡ ಸಿಇಟಿ ಸಹಾಯವಾಣಿ ಕೇಂದ್ರ ಐದು ವರ್ಷವೂ ಯಶಸ್ವಿಯಾಗಿ ಕಾರ್ಯಾಚರಿಸಿದ್ದು, ಪ್ರಸ್ತುತ ವರ್ಷವೂ ತನ್ನ ಸೇವೆ ಆರಂಭಿಸಿದೆ. ಇದರಿಂದ ಈ ಭಾಗದ ಜನರು ಬೆಂಗಳೂರಿನಲ್ಲಿ ಸೌಕರ್ಯಗಳಿಲ್ಲದೆ ದಿನ ಕಳೆಯುವುದು ತಪ್ಪಿದಂತಾಗಿದೆ.
‘ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೊದಲ ಬಾರಿಗೆ ಆರಂಭಗೊಂಡ ಸಿಇಟಿ ಸಹಾಯವಾಣಿಗೆ ಈ ಭಾಗದ ವಿದ್ಯಾರ್ಥಿಗಳಿಂದ ಅದ್ಭುತ ಪ್ರತಿಕ್ರಿಯೆ ದೊರಕಿತ್ತು. ಇದರಿಂದ ಉತ್ತೇಜಿತ ಗೊಂಡ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಮುಂದಿನ ವರ್ಷಗಳಲ್ಲೂ ನಗರದಲ್ಲಿ ಸಿಇಟಿ ಸಹಾಯವಾಣಿ ಕೇಂದ್ರವನ್ನು ನಿರಂತರವಾಗಿ ಆರಂಭಿಸುತ್ತಿದೆ’ ಎಂದು ನೋಡೆಲ್ ಅಧಿಕಾರಿ ಡಿ.ಆರ್.ನಿಡೋಣಿ ‘ಪ್ರಜಾವಾಣಿ’ಗೆ ತಿಳಿಸಿದರು.
ಡಾ.ಫ.ಗು.ಹಳಕಟ್ಟಿ ಎಂಜಿನಿ ಯರಿಂಗ್ ಕಾಲೇಜ್ನಲ್ಲಿ 2013ರಿಂದ ಸಹಾಯವಾಣಿ ಕೇಂದ್ರ ಕಾರ್ಯಾಚರಿ ಸುತ್ತಿದೆ. ಸತತ ಐದನೇ ವರ್ಷವೂ ಇಲ್ಲಿಯೇ ಸಹಾಯವಾಣಿ ಆರಂಭಿಸಲಾ ಗಿದ್ದು, ದಾಖಲೆಗಳ ಪರಿಶೀಲನೆ ನಡೆದಿದೆ ಎಂದು ಅವರು ಹೇಳಿದರು.
‘ಸಿಇಟಿ ಸಹಾಯವಾಣಿ, ದಾಖಲಾತಿ ಪರಿಶೀಲನಾ ಕೇಂದ್ರದ ನಿರ್ವಹಣೆಗಾಗಿ ತಲಾ ಒಬ್ಬ ನೋಡಲ್ ಅಧಿಕಾರಿ, ಸಹಾಯಕ ನೋಡಲ್ ಅಧಿಕಾರಿ, ಐವರು ಪರಿಶೀಲನಾ ಅಧಿಕಾರಿ, ಇಬ್ಬರು ಸಾಫ್ಟ್ವೇರ್ ಎಂಜಿನಿಯರ್ಗಳು, ಐವರು ಕಂಪ್ಯೂಟರ್ ಆಪರೇಟರ್ಗಳು ಸೇರಿದಂತೆ ಭದ್ರತಾ ಸಿಬ್ಬಂದಿ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸುಸಜ್ಜಿತ ಸಹಾಯವಾಣಿ ಕೇಂದ್ರದ ಕೌನ್ಸೆಲಿಂಗ್ ಸೆಂಟರ್ನಲ್ಲಿ ಕಂಪ್ಯೂಟರ್ ಸಿಸ್ಟಂ, ಯುಪಿಎಸ್, ಪ್ರಿಂಟರ್ಗಳನ್ನು ಅಳವಡಿಸಲಾಗಿದೆ. ಇಂಟರ್ನೆಟ್ ಸಮಸ್ಯೆ ಬಾಧಿಸದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ.
ಪ್ರತಿ ವಿದ್ಯಾರ್ಥಿಯ ದಾಖಲಾತಿ ಪರಿಶೀಲಿಸಿ ಸೀಕ್ರೇಟ್ ಕೀ ಕೋಡ್ ನೀಡಲಾಗುವುದು. ಈ ಕೋಡ್ ಬಳಸಿ ಕೊಂಡು ವಿದ್ಯಾರ್ಥಿಗಳು ತಮಗಿಷ್ಟದ ಕಾಲೇಜನ್ನು ವ್ಯಾಸಂಗಕ್ಕೆ ಆಯ್ಕೆ ಮಾಡಿ ಕೊಳ್ಳಬಹುದು’ ಎಂದು ನೋಡೆಲ್ ಅಧಿಕಾರಿ ಡಿ.ಆರ್.ನಿಡೋಣಿ ಮಾಹಿತಿ ನೀಡಿದರು. ‘ವಿದ್ಯಾರ್ಥಿಗಳು ಮೂಲ ದಾಖಲೆ, ಜೆರಾಕ್ಸ್ ಪ್ರತಿಗಳೊಂದಿಗೆ ಕೌನ್ಸೆಲಿಂಗ್ಗೆ ಹಾಜರಾಗಬೇಕು’ ಎಂದು ಅವರು ಹೇಳಿದರು.
ಅಂಕಿ–ಅಂಶ
2012 ರಿಂದಲೂ ದಾಖಲೆ ಪರಿಶೀಲನೆ
5000 ವಿದ್ಯಾರ್ಥಿಗಳ ನಿರೀಕ್ಷೆ
4700 ವಿದ್ಯಾರ್ಥಿಗಳು ಭಾಗಿ
* *
ವಿಜಯಪುರ, ಬಾಗಲಕೋಟೆ ಜಿಲ್ಲೆ ವ್ಯಾಪ್ತಿಯ ವಿದ್ಯಾರ್ಥಿಗಳ ದಾಖಲಾತಿ ಪರಿಶೀಲನೆ ಆರಂಭ ಗೊಂಡಿದೆ. ಹೊರ ಜಿಲ್ಲೆಯವರೂ ಪಾಲ್ಗೊಳ್ಳಲು ಮುಕ್ತ ಅವಕಾಶವಿದೆ
ಡಿ.ಆರ್.ನಿಡೋಣಿ
ನೋಡೆಲ್ ಅಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.