ನವದೆಹಲಿ: ಹಾಕಿ ಮಾಂತ್ರಿಕ ಧ್ಯಾನ್ಚಂದ್ ಅವರಿಗೆ ಭಾರತರತ್ನ ನೀಡುವಂತೆ ಕೋರಿ ಕ್ರೀಡಾ ಸಚಿವಾಲಯ ಪ್ರಧಾನಿ ಕಚೇರಿಗೆ ಪತ್ರ ಬರೆದಿದೆ.
ಕ್ರೀಡಾ ಸಚಿವ ವಿಜಯ್ ಗೋಯೆಲ್ ಅವರು ಸುದ್ದಿಸಂಸ್ಥೆಗೆ ಈ ವಿಷಯ ತಿಳಿಸಿದ್ದಾರೆ. ‘ಧ್ಯಾನ್ಚಂದ್ ದೇಶಕ್ಕೆ ನೀಡಿದ ಕಾಣಿಕೆ ಅಪಾರ. ಹೀಗಾಗಿ ಅವರಿಗೆ ಭಾರತರತ್ನ ನೀಡುವಂತೆ ಕೋರಲಾಗಿದೆ’ ಎಂದು ಗೋಯೆಲ್ ಹೇಳಿದ್ದಾರೆ.
ಭಾರತ ಕಂಡ ಅಪ್ರತಿಮ ಹಾಕಿ ಆಟಗಾರರಾದ ಧ್ಯಾನ್ಚಂದ್ 1928, 1932 ಮತ್ತು 1936ರ ಒಲಿಂಪಿಕ್ಸ್ ಗಳಲ್ಲಿ ಭಾರತ ಚಿನ್ನ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರು 1979ರಲ್ಲಿ ಮೃತಪಟ್ಟಿದ್ದರು. ಅವರಿಗೆ ಭಾರತರತ್ನ ನೀಡುವಂತೆ ಈ ಹಿಂದೆಯೂ ಕ್ರೀಡಾ ಸಚಿವಾಲಯ ಪ್ರಧಾನಮಂತ್ರಿ ಕಚೇರಿಗೆ ಪತ್ರ ಬರೆದಿತ್ತು.
2013ರಲ್ಲಿ ಧ್ಯಾನ್ ಚಂದ್ ಅವರಿಗೆ ಭಾರತರತ್ನ ನೀಡಲು ಯುಪಿಎ ಸರ್ಕಾರ ನಿರ್ಧರಿಸಿತ್ತು. ಆದರೆ ಏಕಾಏಕಿ ನಿರ್ಣಯ ಬದಲಿಸಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ಪುರಸ್ಕಾರ ಪ್ರದಾನ ಮಾಡಿತ್ತು.
ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೋಯೆಲ್ ‘ಅಂದು ಏನು ನಡೆದಿದೆಯೋ ಅದರ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ಆದರೆ ಧ್ಯಾನ್ಚಂದ್ ಅವರ ಸಾಧನೆಯನ್ನು ಯಾವುದೇ ಪ್ರಶಸ್ತಿಯ ಮೂಲಕ ಅಳೆಯಲು ಸಾಧ್ಯವಿಲ್ಲ ಎಂದು ಮಾತ್ರ ಹೇಳಬಲ್ಲೆ. ಪ್ರಧಾನಮಂತ್ರಿಗಳು ಸೂಕ್ತ ನಿರ್ಧಾರ ಕೈಗೊಳ್ಳುವರು ಎಂಬ ಭರವಸೆ ಇದೆ’ ಎಂದು ಕ್ರೀಡಾ ಸಚಿವರು ಹೇಳಿದರು.
ಧ್ಯಾನ್ಚಂದ್ ಅವರಿಗೆ ದೇಶದ ಅತ್ಯುನ್ನತ ಗೌರವ ನೀಡುವಂತೆ ಅವರ ಪುತ್ರ ಅಶೋಕ್ ಕುಮಾರ್ ಮತ್ತು ಕೆಲ ಮಾಜಿ ಹಾಕಿ ಆಟಗಾರರು ನಿರಂತರ ವಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿ ಸುತ್ತಿದ್ದಾರೆ. ಧ್ಯಾನ್ಚಂದ್ ಅವರಿಗೆ ಸೂಕ್ತ ಗೌರವ ಸಲ್ಲಿಸಬೇಕು ಎಂದು ಒತ್ತಾಯಿಸಿ 2011ರಲ್ಲಿ 82 ಸಂಸದರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.