ಗೋಣಿಕೊಪ್ಪಲು (ಕೊಡಗು ಜಿಲ್ಲೆ): ಗಾಯಗೊಂಡಿರುವ ಕಾಡಾನೆಯೊಂದು ಎರಡು ದಿನಗಳಿಂದ ನಾಗರಹೊಳೆ ಅರಣ್ಯದಂಚಿನ ಲಕ್ಷ್ಮಣತೀರ್ಥ ನದಿಯಲ್ಲಿಯೇ ನಿಂತು ಕಾಲಕಳೆಯುತ್ತಿದೆ.
ಬಾಳೆಲೆ ಸಮೀಪದ ಮಲ್ಲೂರು ಕುಂಬಾರ ಕಟ್ಟೆ ಎಂಬಲ್ಲಿ ಸುಮಾರು 40 ವರ್ಷ ಪ್ರಾಯದ ಹೆಣ್ಣಾನೆಯ ಕಾಲು ಹಾಗೂ ಬೆನ್ನಿನ ಭಾಗದಲ್ಲಿ ಗಾಯವಾಗಿ ಹುಳು ಬಿದ್ದಿವೆ. ತೀವ್ರ ನೋವಿನಿಂದ ಸೊರಗಿರುವ ಆನೆ ಕಾಡಿಗೆ ತೆರಳದೆ ನೀರಿನ ಕೆಸರಿನಲ್ಲಿಯೇ ಬಿದ್ದಿದೆ.
ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಸಾಕಾನೆಯೊಂದಿಗೆ ಮೇಲೆತ್ತಿ ಆನೆಯನ್ನು ಮರಳಿ ಕಾಡಿಗೆ ಸೇರಿಸಲು ಪ್ರಯತ್ನಿಸಿದರು.
ವೈದ್ಯಾಧಿಕಾರಿ ಉಮಾಶಂಕರ್ ಚಿಕಿತ್ಸೆ ನೀಡಿದ ಬಳಿಕ ಕಾಡಿಗೆ ಬಿಡಲಾಯಿತು. ಆದರೆ ಸ್ವಲ್ಪ ಹೊತ್ತು ಕಾಡಿನಂಚಿನಲ್ಲಿ ಸುಳಿದಾಡಿದ ಆನೆ ಮತ್ತೆ ನೀರಿಗೆ ಬಂದು ಸೇರಿತು.