ಬೆಂಗಳೂರು: ರಾಬರ್ಟ್ ಬಾಷ್ ಎಂಜಿನಿಯರಿಂಗ್ ಮತ್ತು ಬಿಸಿನೆಸ್ ಸೆಲ್ಯೂಷನ್ (ಆರ್ಬಿಇಐ) ಸಂಸ್ಥೆಯು ಮಡಿವಾಳ ಕೆರೆಯಲ್ಲಿ ಸ್ಥಾಪಿಸಿರುವ ಗೊಬ್ಬರ ತಯಾರಿಕಾ ಘಟಕಕ್ಕೆ ಚಾಲನೆ ನೀಡಲಾಗಿದೆ.
ಕೆರೆ ದಂಡೆಯ ಮೇಲೆ ಬೀಳುವ ಎಲೆಗಳನ್ನು ಸಂಗ್ರಹಿಸಿ ಗೊಬ್ಬರವನ್ನಾಗಿ ಮಾಡಿ ಜನರಿಗೆ ಪೂರೈಕೆ ಮಾಡಲಾಗುತ್ತದೆ. ಇದರಿಂದ ಬರುವ ಲಾಭಾಂಶವನ್ನು ಕೆರೆಯ ನಿರ್ವಹಣೆಗೆ ಬಳಸಲಾಗುತ್ತದೆ.
ಎಲೆ ಸಂಗ್ರಹ, ಗೊಬ್ಬರ ತಯಾರಿಕೆ ಘಟಕ, ಗೊಬ್ಬರ ಮಾರಾಟದ ಕೆಲಸಗಳನ್ನು ನಿರ್ವಹಿಸಲು ನಾಲ್ವರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಯೋಜನೆಗಳನ್ನು ಹಮ್ಮಿಕೊಳ್ಳಲು ಬಾಷ್ ಸಂಸ್ಥೆ ಉದ್ದೇಶಿಸಿದೆ.
ಆರ್ಬಿಇಐನ ಹಿರಿಯ ಉಪಾಧ್ಯಕ್ಷ ಆರ್.ಕೆ.ಶೆಣೈ ಮಾತನಾಡಿ, ‘ಅರಣ್ಯ ಇಲಾಖೆ ಮತ್ತು ರೀಗ್ರೀನ್ ವೆಂಚರ್ಸ್ ಜೊತೆಗೂಡಿ ಈ ಯೋಜನೆ ಜಾರಿಗೊಳಿಸಿದ್ದೇವೆ. ಮಡಿವಾಳ ಕೆರೆಯನ್ನು ಜೀವವೈವಿಧ್ಯ ಉದ್ಯಾನವನ್ನಾಗಿ ರೂಪಿಸಲು ಹಾಗೂ ಕೆರೆ ನಿರ್ವಹಣೆಯನ್ನು ಸುಸ್ಥಿರವಾಗಿಡಲು ಇದು ಸಹಕಾರಿ’ ಎಂದರು.