ನವದೆಹಲಿ: ಪಾಕಿಸ್ತಾನ ಮೂಲದ ಕೆನಡಾ ಬರಹಗಾರ ತಾರೆಕ್ ಫತಾಹ್ ಹತ್ಯೆಗೆ ಸಂಚು ರೂಪಿಸಿದ್ದ ಗ್ಯಾಂಗ್ಸ್ಟರ್ ಛೋಟಾ ಶಕೀಲ್ ಸಹಚರನನ್ನು ದೆಹಲಿ ವಿಶೇಷ ದಳ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪೊಲೀಸ್ ವಿಶೇಷ ದಳದ ಉಪ ಆಯುಕ್ತ ಪಿಎಸ್ ಕುಶ್ವಾ, ‘ಬಂಧಿತ ಜುನೈದ್ ಚೌಧರಿಯನ್ನು ಜೂನ್ 7ರ ಮಧ್ಯರಾತ್ರಿಯ ವೇಳೆ ಈಶಾನ್ಯ ದೆಹಲಿಯ ವಾಜಿರಾಬಾದ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಬಂಧಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಬಂಧಿತನ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ ಅವರು ‘ಸದ್ಯ ದೆಹಲಿಯಲ್ಲಿ ಇಲ್ಲದ ವಿವಾದಿತ ಸಾಹಿತಿ ಪತಾಹ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು. ಅದರ ಹೊಣೆಯನ್ನು ಚೌಧರಿ ವಹಿಸಿದ್ದ’ ಎಂದು ಹೇಳಿದ್ದಾರೆ.
ಚೌಧರಿ ಹಾಗೂ ಇತರೆ ಮೂವರನ್ನು 2016ರ ಜೂನ್ನಲ್ಲಿ ಬಂಧಿಸಲಾಗಿತ್ತು. ಆ ವೇಳೆ ಚೋಟಾ ಶಕೀಲ್ ಕಳುಹಿಸಿದ್ದ ಹವಾಲಾ ಹಣ ಮತ್ತು ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಆರೋಪದ ಮೇಲೆ ಜೈಲು ಸೇರಿದ್ದ ಇವರು, ನಾಲ್ಕು ತಿಂಗಳ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ಆಗಲೂ ಹಿಂದೂ ಸಭಾದ ಮುಖ್ಯಸ್ಥ ಸ್ವಾಮಿ ಚಕ್ರಪಾಣಿ ಹತ್ಯೆಗೆ ಸಂಚು ರೂಪಿಸಲಾಗಿತ್ತು.