ಬಾಗಲಕೋಟೆ: ಮುಂಗಾರಿನ ಮೊದಲ ಮಳೆ ಜಿಲ್ಲೆಯ ಕೃಷಿ ಚಟುವಟಿಕೆಗೆ ಜೀವ ತಂದಿದೆ. ಬಿತ್ತನೆಗೆ ಭೂಮಿ ಹದಗೊಳಿ ಸುವ ಕಾರ್ಯಕ್ಕೆ ರೈತಾಪಿ ವರ್ಗ ಮುಂದಾಗಿದೆ. ಬಾಗಲಕೋಟೆ ಉಪವಿಭಾಗದಲ್ಲಿ ಬಿದ್ದಿರುವ ಹದ ಮಳೆ ರೈತರಲ್ಲಿ ಆಶಾಭಾವನೆ ಮೂಡಿಸಿದೆ.
ಜೂನ್ 6ರಂದು ರಾತ್ರಿ ಬಾಗಲ ಕೋಟೆ ತಾಲ್ಲೂಕಿನ ಕಲಾದಗಿ, ಬಾದಾಮಿ ತಾಲ್ಲೂಕಿನ ಕೆರೂರು, ಹುನ ಗುಂದ ತಾಲ್ಲೂಕಿನ ಇಳಕಲ್ ಹಾಗೂ ಗುಡೂರು ಹೋಬಳಿಗಳಲ್ಲಿ ದಾಖಲೆ ಪ್ರಮಾಣದ ಮಳೆ ಸುರಿದಿದೆ. ಇದರಿಂದ ಹಳ್ಳ–ಕೊಳ್ಳ,ಕೆರೆಗಳು ಭರ್ತಿಯಾಗಿದ್ದು, ಹೊಲಗಳಲ್ಲಿ ಹಸಿ ಮೂಡಿದೆ. ಇದು ರೈತರ ಸಂತಸಕ್ಕೆ ಕಾರಣವಾಗಿದೆ.
1.5 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ: ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ 2.40 ಲಕ್ಷ ಹೆಕ್ಟೇರ್ ಕೃಷಿ ಭೂಮಿಯ ಪೈಕಿ 90 ಸಾವಿರ ಹೆಕ್ಟೇರ್ನಲ್ಲಿ ಕಬ್ಬು ಬೆಳೆ ಯಲಾಗಿದೆ. ಉಳಿದ 1.50 ಲಕ್ಷ ಹೆಕ್ಟೇರ್ ನಲ್ಲಿ ಬಿತ್ತನೆಯ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ. ಮೆಕ್ಕೆಜೋಳ, ಸೂರ್ಯಕಾಂತಿ, ಹೆಸರು, ಸೋಯಾ, ತೊಗರಿ, ಉದ್ದು ಹಾಗೂ ಅಲಸಂದೆ ಬಿತ್ತನೆಗೆ ರೈತರು ಸಿದ್ಧತೆ ನಡೆಸಿದ್ದಾರೆ.
ಬಿತ್ತನೆ ಬೀಜ, ಗೊಬ್ಬರ ಲಭ್ಯ: ಈ ಹಂಗಾಮಿಗೆ 16 ಸಾವಿರ ಕ್ವಿಂಟಲ್ ಬಿತ್ತನೆ ಬೀಜದ ಬೇಡಿಕೆ ಇದ್ದು, ಅದರಲ್ಲಿ ಈಗಾಗಲೇ ಏಳು ಸಾವಿರ ಕ್ವಿಂಟಲ್ ರೈತ ಸಂಪರ್ಕ ಕೇಂದ್ರಗಳಲ್ಲಿ (ಆರ್ಎಸ್ಕೆ) ದಾಸ್ತಾನು ಇದೆ. ಜಿಲ್ಲೆಯ 22 ಆರ್ಎಸ್ಕೆ ಗಳಲ್ಲಿ ರೈತರು ಬಿತ್ತನೆ ಬೀಜ ಹಾಗೂ ಗೊಬ್ಬರ ಖರೀದಿಸಬಹುದು ರಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ ಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು.
ತೊಗರಿ ಬಿತ್ತನೆಗೆ ಪ್ರೋತ್ಸಾಹ: ಕಳೆದ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ದಾಖಲೆಯ 37 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಯಲಾಗಿದೆ. ಈ ಹಂಗಾಮಿನಲ್ಲಿ 50 ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು, ಅದಕ್ಕಾಗಿ ರೈತರಿಗೆ ಇಲಾಖೆಯಿಂದ ಅಗತ್ಯ ಪ್ರೋತ್ಸಾಹ ನೀಡಲಾಗುತ್ತಿದೆ.
₹ 25 ಲಕ್ಷ ವ್ಯಯ: ಟ್ರ್ಯಾಕ್ಟರ್ ಬಳಕೆ ಮಾಡದೇ ಎತ್ತುಗಳ ಬಳಕೆ ಮಾಡಿ ತೊಗರಿ ಬಿತ್ತುವ ರೈತರಿಗೆ ಪ್ರತಿ ಹೆಕ್ಟೇರ್ಗೆ ₹ 2500 ಪ್ರೋತ್ಸಾಹಧನ ನೀಡಲಾಗು ತ್ತಿದೆ. ಜಿಲ್ಲೆಯ ಒಂದು ಸಾವಿರ ಫಲಾನು ಭವಿಗಳಿಗೆ ಇದರ ಲಾಭ ದೊರೆಯಲಿದೆ. ರೈತರ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುವುದು. ಗಿಡದಿಂದ ಗಿಡಕ್ಕೆ ಮೂರು ಅಡಿ ಹಾಗೂ ಸಾಲಿನಿಂದ ಸಾಲಿಗೆ 6 ಅಡಿ ಸ್ಥಳಾವಕಾಶ ಬಿಡುವ ಷರತ್ತು ಪೂರೈಸಬೇಕಿದೆ. ಈ ರೀತಿ ಬಿತ್ತನೆಯಿಂದ ಉತ್ತಮ ಇಳುವರಿಯೂ ಸಾಧ್ಯವಿದೆ ಎಂದು ಹೇಳುತ್ತಾರೆ.
ಪೂರೈಕೆ: ‘ಶೇ 2ರಷ್ಟು ಕಮಿಷನ್ ಆಧಾ ರದ ಮೇಲೆ ಬೀಜ–ಗೊಬ್ಬರ ಮಾರಾಟ ಮಾಡಲು ಮುಂದೆ ಬಂದರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೂ (ಪಿಕೆ ಪಿಎಸ್) ಬೀಜ–ಗೊಬ್ಬರ ಪೂರೈಕೆ ಮಾಡಲಾಗುವುದು. ಜಿಲ್ಲೆಯ ಒಟ್ಟು 140 ಪಿಕೆಪಿಎಸ್ಗಳಿವೆ. ಇದರಿಂದ ಮನೆ ಅಂಗಳದಲ್ಲಿಯೇ ಖರೀದಿಗೆ ರೈತರಿಗೆ ನೆರವಾಗಲಿದೆ’ ಎಂದು ತಿಳಿಸಿದರು.
ಜೂನ್ 6 ರಾತ್ರಿ ಮಳೆ ವಿವರ..
ಬಾಗಲಕೋಟೆ ಉಪವಿಭಾಗದಲ್ಲಿ ಜೂನ್ 6ರಂದು ರಾತ್ರಿ ಉತ್ತಮ ಮಳೆಯಾಗಿದ್ದು, ಅದರ ವಿವರ (ಮಿ.ಮೀಗಳಲ್ಲಿ): ಬಾಗಲಕೋಟೆ–33.4, ಎಪಿಎಂಸಿ–26.02, ಕಲಾದಗಿ–272, ರಾಂಪುರ–18.2, ಬೇವೂರು–50.4,ಬಾದಾಮಿ–47.4,ಗುಳೇದಗುಡ್ಡ–36.2,ಕೆರೂರು–26.8,ಕುಳಗೇರಿ ಕ್ರಾಸ್–17.8,ಕಟಗೇರಿ–27.2,ಬೇಲೂರು–36.2,ಹುನಗುಂದ–10,ಕಂದಗಲ್–18.2, ಕರಡಿ–23, ಸೂಳಿಭಾವಿ–58, ಗುಡೂರು (ಎಸ್ಸಿ)–78.6, ಕೂಡಲಸಂಗಮ–28.7, ಅಮೀನಗಡ–60, ಇಳಕಲ್–71.05.
58 ಮನೆಗಳಿಗೆ ಹಾನಿ: ಬಾಗಲಕೋಟೆ ತಾಲ್ಲೂಕು ಬೆನ್ನೂರಿನಲ್ಲಿ 1, ಮುಗಳೊಳ್ಳಿ 2, ತುಳಸಿಗಿರಿ 4, ಬೇವೂರು 1, ಚಿಕ್ಕಶೆಲ್ಲಿಕೇರಿ 12, ಹಿರೇ ಶೆಲ್ಲಿಕೇರಿ 5, ಕಳಸಕೊಪ್ಪ 3, ಇಳಾಲ 1, ಕಲಾದಗಿ 3, ಬಾದಾಮಿ ತಾಲ್ಲೂಕು ಜಲಗೇರಿ (ಎಲ್.ಟಿ) 7, ಅನವಾಲ 11, ಕಲಬಂದಕೇರಿ 5, ಮುತ್ತಲಗೇರಿ 2, ಹುನಗುಂದ ತಾಲ್ಲೂಕು ವೀರಾಪುರದಲ್ಲಿ 1 ಮನೆ ಹಾನಿಗೀಡಾಗಿವೆ. ತುಳಸಿಗಿರಿಯಲ್ಲಿ 1 ಆಡು, ತಿಮ್ಮಾಪುರದಲ್ಲಿ ಒಂದು ಎಮ್ಮೆ ಸಾವಿಗೀಡಾಗಿವೆ.
* *
ಜಿಲ್ಲೆಯಲ್ಲಿ ಮಳೆಯಿಂದ ಬಿತ್ತನೆಗೆ ಅಗತ್ಯವಿರುವಷ್ಟು ನೆಲ ಹದಗೊಂಡಿದೆ. ಬೀಜ–ಗೊಬ್ಬರಕ್ಕೆ ಯಾವುದೇ ಕೊರತೆ ಇಲ್ಲ. ಬೇಡಿಕೆ ಬಂದಂತೆ ಪೂರೈಕೆ ಮಾಡಲಾಗುವುದು
ರಮೇಶಕುಮಾರ
ಕೃಷಿ ಇಲಾಖೆ ಜಂಟಿ ನಿರ್ದೇಶಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.