ಬೆಂಗಳೂರು: ವಿಧಾನ ಪರಿಷತ್ತಿಗೆ ಸಿ.ಎಂ. ಲಿಂಗಪ್ಪ ಅವರನ್ನು ನಾಮನಿರ್ದೇಶನ ಮಾಡುವಂತೆ ರಾಜ್ಯ ಸರ್ಕಾರ ಎರಡನೆ ಬಾರಿ ಕಳುಹಿಸಿದ್ದ ಶಿಫಾರಸಿಗೆ ರಾಜ್ಯಪಾಲ ವಜುಭಾಯಿ ವಾಲಾ ಶುಕ್ರವಾರ ಅಂಕಿತ ಹಾಕಿದ್ದಾರೆ.
ಪರಿಷತ್ತಿನಲ್ಲಿ ಖಾಲಿ ಇದ್ದ ಮೂರು ಸ್ಥಾನಗಳಿಗೆ ಪಿ.ಆರ್. ರಮೇಶ್, ಮೋಹನ್ ಕೊಂಡಜ್ಜಿ, ಸಿ.ಎಂ. ಲಿಂಗಪ್ಪ ಅವರನ್ನು ನಾಮನಿರ್ದೇಶನ ಮಾಡುವಂತೆ ಸರ್ಕಾರ ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು. ರಮೇಶ್ ಮತ್ತು ಕೊಂಡಜ್ಜಿ ನಾಮನಿರ್ದೇಶನಕ್ಕೆ ಅವರು ಒಪ್ಪಿಗೆ ಸೂಚಿಸಿದ್ದರು.
ಶಿಕ್ಷಣ ಮತ್ತು ಸಮಾಜ ಸೇವೆ ವಿಭಾಗದಲ್ಲಿ ಲಿಂಗಪ್ಪ ಅವರನ್ನು ನಾಮನಿರ್ದೇಶನ ಮಾಡಲು ಅವಕಾಶ ಇಲ್ಲ ಎಂಬ ಕಾರಣ ನೀಡಿದ್ದ ರಾಜ್ಯಪಾಲರು ನಾಮನಿರ್ದೇಶನಕ್ಕೆ ನಿರಾಕರಿಸಿದ್ದರು.