ಬೆಂಗಳೂರು: ನಗರದಲ್ಲಿ ಶುಕ್ರವಾರ ಗಾಳಿ ಸಹಿತ ಮಳೆ ಸುರಿದಿದ್ದು, ಕೆಲವೆಡೆ ಮರಗಳು ನೆಲಕ್ಕುರುಳಿವೆ.
ಸೌತ್ ಎಂಡ್ ವೃತ್ತ, ವಿಜಯನಗರದ 8ನೇ ಅಡ್ಡರಸ್ತೆ, ವೈಯಾಲಿಕಾವಲ್ ಬಳಿಯ ಚಿನ್ನಣ್ಣಸ್ವಾಮಿ ಬಡಾವಣೆ ಹಾಗೂ ಶಿವಾನಂದ ವೃತ್ತದಲ್ಲಿ ಮರ ಬಿದ್ದ ಬಗ್ಗೆ ಸಾರ್ವಜನಿಕರು ಬಿಬಿಎಂಪಿಗೆ ದೂರು ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಬಿಬಿಎಂಪಿ ಸಿಬ್ಬಂದಿ ರಾತ್ರಿಯೇ ಮರಗಳನ್ನು ತೆರವು ಮಾಡಿದರು.
ಬೆಳ್ಳಂದೂರು ಬಳಿಯ ಇಕೋ ಸ್ಪೇಸ್ ಬಳಿ ಹಾಗೂ ಶಿವಾನಂದ ವೃತ್ತದ ರಸ್ತೆಯಲ್ಲಿ ಮೂರು ಅಡಿಯಷ್ಟುನೀರು ನಿಂತಿತ್ತು. ಇದರಿಂದವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು.
ವಿಜಯನಗರ, ರಾಜಾಜಿನಗರ, ಮೈಸೂರು ರಸ್ತೆ, ರಾಜರಾಜೇಶ್ವರಿ ನಗರ,, ಕೆಂಗೇರಿ, ಕೋರಮಂಗಲ, ಎಚ್ಎಸ್ಆರ್ ಲೇಔಟ್, ಎಂ.ಜಿ. ರಸ್ತೆ, ಶಿವಾಜಿನಗರ, ಯಶವಂತಪುರ, ಪೀಣ್ಯ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಮಳೆಯಾಗಿದೆ.
‘ಗಾಳಿ ಆಂಜನೇಯ ದೇವಸ್ಥಾನ ಸುತ್ತಮುತ್ತ 1.5 ಮಿಲಿ ಮೀಟರ್, ವಿದ್ಯಾ ಪೀಠ 4.5 ಮಿ.ಮೀ, ರಾಜರಾಜೇಶ್ವರಿ ನಗರ 1.5 ಮಿ.ಮೀ ಮಳೆಯಾಗಿದೆ’ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.