ಪುತ್ತೂರು: ಮಳೆಗಾಲದಲ್ಲಿ ಸಂಭವಿಸಬಹುದಾಗಿರುವ ಪ್ರಾಕೃತಿಕ ವಿಕೋಪಗಳಿಗೆ ತಕ್ಷಣ ಸ್ಪಂದಿಸುವ ನಿಟ್ಟಿನಲ್ಲಿ ತಾಲ್ಲೂಕು ಮಟ್ಟದ ಪ್ರತಿಯೊಂದು ಸರ್ಕಾರಿ ಕಚೇರಿ ಗಳಲ್ಲಿಯೂ ಕಂಟ್ರೋಲ್ ರೂಂ ತೆರೆಯಬೇಕು. ತಾಲ್ಲೂಕು ಮಟ್ಟದ ಅಧಿಕಾರಿ ಗಳು ತಹಶೀಲ್ದಾರರ ಅನುಮತಿ ಇಲ್ಲದೆ ಯಾವ ಕಾರಣಕ್ಕೂ ರಜೆ ಹಾಕಿ ತಮ್ಮ ವ್ಯಾಪ್ತಿ ಬಿಟ್ಟು ಹೊರಗೆ ಹೋಗಬಾರದು ಎಂದು ಪುತ್ತೂರು ಉಪವಿಭಾಗಾಧಿಕಾರಿ ಡಾ.ರಘುನಂದನ್ ಮೂರ್ತಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಪ್ರಾಕೃತಿಕ ವಿಕೋಪ ಮುಂಜಾಗ್ರತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡಿದರು. ಸರ್ಕಾರಿ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಎಲ್ಲೇ ಸಮಸ್ಯೆಯಾದರೂ ಅದಕ್ಕೆ ತಕ್ಷಣ ಸ್ಪಂದಿಸಬೇಕು. ತಮಗೆ ಸಂಬಂಧಿಸಿದ್ದಲ್ಲ ಎಂದು ಬಿಟ್ಟು ಹೋಗಬಾರದು. ಜನ ತೆಯ ದೂರುಗಳಿಗೆ ತಕ್ಷಣ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಅವರು ಸೂಚಿಸಿದರು.
ಪ್ರಾಕೃತಿಕ ವಿಕೋಪದಿಂದಾಗಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ ಸಂಬಂಧಿಸಿ ಹೆಚ್ಚಿನ ಕಷ್ಟನಷ್ಟಗಳು ಸಂಭವಿಸುತ್ತಿದ್ದು, ದೂರುಗಳು ಬಂದ ತಕ್ಷಣ ಅಧಿಕಾರಿಗಳು ಸಮಸ್ಯೆಯಾದ ಸ್ಥಳಕ್ಕೆ ತೆರಳಿ ಒಂದೆರಡು ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದ ಅವರು, ಅಪಾಯಕಾರಿ ಮರಗಳ ತೆರವು ವಿಚಾರದಲ್ಲಿ ಕೈಗೊಂಡ ಕ್ರಮಗಳ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಕೇಳಿದರು.ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ಗುರುತಿಸಿ ತೆರವುಗೊಳಿ ಸುವ ಕೆಲಸ ನಡೆದಿದೆ ಎಂದು ಎಸಿಎಫ್ ಸುಬ್ರಹ್ಮಣ್ಯೇಶ್ವರ ರಾವ್ ಮತ್ತು ಆರ್ ಎಫ್ಒ ಕಾರ್ಯಪ್ಪ ತಿಳಿಸಿದರು.
ಶಾಲಾ ವಠಾರದಲ್ಲಿ ಕಲ್ಲು ಕ್ವಾರಿ ಗುಂಡಿ: ತಾಲ್ಲೂಕಿನ ಕೆಲವೊಂದು ಶಾಲಾ ವಠಾರದಲ್ಲಿ ಕೆಂಪು ಕಲ್ಲಿನ ಕ್ವಾರಿ ಗುಂಡಿಗಳನ್ನು ಮುಚ್ಚದೆ ಹಾಗೆಯೇ ಬಿಡಲಾಗಿದೆ. ಪಾಣಾಜೆ ಗ್ರಾಮದ ಸೂರಂಬೈಲು ಶಾಲಾ ವಠಾರದಲ್ಲಿ ಕೆಂಪು ಕಲ್ಲಿನ ಕ್ವಾರಿ ಗುಂಡಿಗಳಿದ್ದು, ಮಳೆಗಾಲ ದಲ್ಲಿ ಆ ಗುಂಡಿಗಳಲ್ಲಿ ನೀರು ನಿಲ್ಲುವುದ ರಿಂದ ಅಪಾಯದ ಸ್ಥಿತಿ ಎದುರಾಗುತ್ತಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿ ಸುಂದರ ಗೌಡ ಅವರು ಸಭೆಯ ಗಮನಕ್ಕೆ ತಂದರು.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಉಪವಿಭಾಗಾಧಿಕಾರಿ, ಶಾಲಾ ವಠಾರದಲ್ಲಿ ಮುಚ್ಚದೆ ಬಿಟ್ಟಿರುವ ಕಲ್ಲಿನ ಕ್ವಾರಿಗಳ ಕುರಿತು ಕಂದಾಯ ಇಲಾಖೆಗೆ ಮಾಹಿತಿ ನೀಡು ವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿ ಎಂದು ಸಭೆಯಲ್ಲಿ ಹಾಜರಿದ್ದ ತಾಲ್ಲೂಕು ಪಂಚಾಯಿತಿ ಯೋಜನಾಧಿಕಾರಿಗೆ ಸೂಚಿಸಿದರು.
ಕ್ವಾರಿಗಳನ್ನು ಗುರುತಿಸಿ ಕ್ರಮಕೈಗೊಳ್ಳದಿ ದ್ದರೆ ಸಂಭವಿಸಬಹುದಾದ ಅನಾಹುತ ಗಳಿಗೆ ನಿಮ್ಮನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಕಂದಾಯ ನಿರೀಕ್ಷಕರಿಗೆ ಎಚ್ಚರಿಕೆ ನೀಡಿದರು. ತಹಶೀಲ್ದಾರ್ ಅನಂತಶಂಕರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ಮೆಸ್ಕಾಂ ಸಮಸ್ಯೆ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಯಲಿಲ್ಲ.
* *
ಅಪಾಯಕಾರಿ ವಲಯಗಳನ್ನು ಮೊದಲಾಗಿಯೇ ಗುರುತಿಸಿ. ಪ್ರತಿಯೊಂದು ವಲಯದಲ್ಲಿಯೂ ಐದಾರು ಮಂದಿ ಮುಳುಗು ತಜ್ಞರನ್ನು ಗುರುತಿಸಿ, ಪಟ್ಟಿ ತಯಾರಿಸಿಟ್ಟುಕೊಳ್ಳಿ ಡಾ.ರಘುನಂದನ್ ಮೂರ್ತಿ
ಪುತ್ತೂರು ಎ.ಸಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.