ಕನಕಪುರ: ಸಾಲ ಮನ್ನಾ ಮಾಡಿ ಎಂದು ಹೋರಾಟ ನಡೆಸುತ್ತಿದ್ದ ರೈತರ ಮೇಲೆ ಗೋಲಿಬಾರ್ ಮಾಡಿರುವ ಮಧ್ಯಪ್ರದೇಶ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿಗಳ ಆಳ್ವಿಕೆ ಜಾರಿ ಮಾಡಬೇಕೆಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಚಿಲೂರು ಮುನಿರಾಜು ಒತ್ತಾಯಿಸಿದರು.
ನಗರದ ಚನ್ನಬಸಪ್ಪ ವೃತ್ತದಲ್ಲಿ ಮಧ್ಯಪ್ರದೇಶದಲ್ಲಿ ರೈತರ ಮೇಲೆ ನಡೆದ ಗೋಲಿಬಾರ್ ಖಂಡಿಸಿ ಪ್ರಗತಿಪರ ಸಂಘಟನೆಗಳ ಜತೆಗೂಡಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ನಡೆಸಿದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.
ಮಧ್ಯ ಪ್ರದೇಶದಲ್ಲಿ ಗೋಲಿಬಾರ್ನಿಂದ 6 ಮಂದಿ ರೈತರು ಸತ್ತಿದ್ದಾರೆ, ಮೃತಪಟ್ಟಿರುವ ರೈತರ ಕುಟುಂಬಕ್ಕೆ ಸರ್ಕಾರ ಪರಿಹಾರವನ್ನು ಘೋಷಿಸಿದೆ. ಇದು ಕೆಟ್ಟ ಸಂಪ್ರದಾಯ, ರೈತರ ಮೇಲೆ ಹಲ್ಲೆಮಾಡುವ ಗೋಲಿಬಾರ್ ಮಾಡುವ ಅಧಿಕಾರಿ ಕೊಟ್ಟವರ್ಯಾರು, ಪ್ರಧಾನಿ ಇದಕ್ಕೆ ಉತ್ತರ ನೀಡಬೇಕೆಂದು ಒತ್ತಾಯಿಸಿದರು.
ರಾಜ್ಯ ಸರ್ಕಾರವು ಮಹದಾಯಿ ಹೋರಾಟ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರಿಂದ ಹಲ್ಲೆ ಮಾಡಿಸಿ ದೌರ್ಜನ್ಯ ಮೆರೆದಿತ್ತು, ಪೊಲೀಸರ ಲಾಟಿ ಏಟು ತಿಂದ ರೈತರಿಗೆ ಬಾಸುಂಡೆಗೆ ₹100 ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಹೇಳುತ್ತಿರುವುದು ಅಮಾನವೀಯ, ಬಾಸುಂಡೆಗೆ ₹500 ಕೊಡಲು ರೈತರು ಸಿದ್ದರಿದ್ದಾರೆ.
ರ್ಕಾರದ ಪ್ರತಿನಿಧಿ ಲಾಠಿ ಏಟು ತಿನ್ನಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಉದ್ಯಮಿಗಳು ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸಾಲ ಮಾಡಿದವರ ಸಾಲವನ್ನು ಸರ್ಕಾರ ಮನ್ನಾ ಮಾಡುತ್ತಾ ಬಂದಿದೆ, ಆದರೆ ರೈತರ ಸಾಲ ಮನ್ನಾ ಮಾಡಲು ಮಾತ್ರ ಹಿಂದೇಟು ಹಾಕಿ ಕೇಂದ್ರದ ಕಡೆ ಕೈ ತೋರಿಸಿ ಬೇಜವಬ್ದಾರಿ ತೋರುತ್ತಿದ್ದಾರೆ, ರಾಜ್ಯ ಸರ್ಕಾರವು ಸಾಲ ಮನ್ನಾ ಮಾಡಬೇಕು, ಹೋರಾಟ ನಡೆಸುವ ರೈತರನ್ನು ಹತ್ತಿಕ್ಕುವ ಕೆಲಸ ಎಂದಿಗೂ ಮಾಡಬಾರದೆಂದು ಎಚ್ಚರಿಸಿದರು.
ರಾಜ್ಯ ರೈತ ಸಂಘವು ಪ್ರಗತಿಪರ ಸಂಘಟನೆಗಳ ಜತೆಗೂಡಿ ನಗರದ ಅಯ್ಯಪ್ಪಸ್ವಾಮಿ ದೇವಾಲಯದಿಂದ ಎಂ.ಜಿ.ರಸ್ತೆ ಮೂಲಕ ಮೆರವಣಿಗೆ ನಡೆಸಿ ಚನ್ನಬಸಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.
ರೈತ ಸಂಘದ ಜಿಲ್ಲಾ ಮುಖಂಡ ಶ್ರೀನಿವಾಸ್, ಬಸವರಾಜು, ಸಾಮಂತೇಗೌಡ, ಬಿ.ಎಸ್.ಪಿ.ಯ ನೀಲಿರಮೇಶ್, ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆಯ ಕೆ.ಎಸ್. ಭಾಸ್ಕರ್, ಕನ್ನಡ ಪರ ಸಂಘಟನೆಯ ಜಯಸಿಂಹ, ವೈಭವ ಕರ್ನಾಟಕದ ಪುಟ್ಟು, ಯುವಶಕ್ತಿ ವೇದಿಕಯ ಶ್ರೀನಿವಾಸ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
**
ಎಲ್ಲಾ ಸರ್ಕಾರಗಳು ರೈತ ವಿರೋಧಿಗಳಾಗಿವೆ. ಶಾಂತ ರೀತಿಯಲ್ಲಿ ಹೋರಾಟ ನಡೆಸುವ ರೈತರ ಮೇಲೆ ಸರ್ಕಾರಗಳು ಕೆಂಗಣ್ಣು ಬೀರಿ ಗೋಲಿಬಾರ್ ಮಾಡುತ್ತಿವೆ -ಚಿಲೂರು ಮುನಿರಾಜು, ರೈತ ಸಂಘದ ತಾಲ್ಲೂಕು ಅಧ್ಯಕ್ಷ