ಮಡಿಕೇರಿ: ಯುವ ಭವನದ ಕಟ್ಟಡ ಹಸ್ತಾಂತರಕ್ಕೆ ಆಗ್ರಹಿಸಿ ಜಿಲ್ಲಾ ಯುವ ಒಕ್ಕೂಟ ಹಾಗೂ ವಿವಿಧ ಸಂಘ– ಸಂಸ್ಥೆಗಳ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.ಈ ಸಂದರ್ಭ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಮಂಡುವಂಡ ಬಿ. ಜೋಯಪ್ಪ, ಕೂಡಲೇ ಒಕ್ಕೂಟಕ್ಕೆ ಕಟ್ಟಡ ಹಸ್ತಾಂತರಿಸಲಿ’ ಎಂದರು.
‘ಮಹಿಳಾ ಕಾಲೇಜು ಮಂಜೂರಾದ ಹಿನ್ನೆಲೆಯಲ್ಲಿ ಯುವ ಭವನದ ಕಟ್ಟಡದಲ್ಲಿ ತರಗತಿ ನಡೆಸಲು ಕೋರಿಕೆ ಸಲ್ಲಿಸಿದ್ದರು. ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮನವಿ ಮೇರೆಗೆ ಕಟ್ಟಡ ಬಿಡುಕೊಡಲಾಗಿತ್ತು. ಆದರೆ, ಈಗ ನಾಲ್ಕು ವರ್ಷ ಕಳೆದರೂ ಕಟ್ಟಡ ಹಸ್ತಾಂತರಿಸುವ ಕೆಲಸ ಆಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಯುವ ಪೀಳಿಗೆಗೆ ವಿವಿಧ ಚಟುವಟಿಕೆ ನಡೆಸಲು ಕಟ್ಟಡ ಅಗತ್ಯ. ಮಹಿಳಾ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ. ಸೂಕ್ತ ಸ್ಥಳದಲ್ಲಿ ಸ್ಥಳ ಗುರುತಿಸಿ ಕಾಲೇಜು ನಿರ್ಮಿಸಲಿ’ ಎಂದು ಒತ್ತಾಯಿಸಿದರು.
‘ಯುವ ಭವನದ ಕಟ್ಟಡವಿಲ್ಲದೇ ಯುವಕ, ಯುವತಿ ಮಂಡಳಿಗಳ ಕಾರ್ಯ ಚಟುವಟಿಕೆಗೆ ಹಿನ್ನಡೆ ಉಂಟಾಗಿದೆ. ಜಿಲ್ಲೆಯ ಯುವಕರಿಗೆ ಮಾರ್ಗದರ್ಶನ, ತರಬೇತಿ, ಕಾರ್ಯಾಗಾರ, ಯುವ ಸಮ್ಮೇಳನ ನಡೆಸುವ ಉದ್ದೇಶಕ್ಕೆ ಭವನ ಅಗತ್ಯೆ’ ಎಂದು ಕಾರ್ಯದರ್ಶಿ ಪಿ.ಪಿ. ಸುಕುಮಾರ್ ಕೋರಿದರು.
ಮಹಿಳಾ ಕಾಲೇಜು ಕಟ್ಟಡಕ್ಕೆ ₹ 2 ಕೋಟಿ ಅನುದಾನ ಮಂಜೂರಾಗಿದ್ದರೂ ಜಿಲ್ಲಾಡಳಿತಕ್ಕೆ ಸೂಕ್ತ ಜಾಗ ಗುರುತಿಸಲು ಸಾಧ್ಯವಾಗಿಲ್ಲ. ಕಟ್ಟಡ ಹಸ್ತಾಂತರಕ್ಕೆ ಕ್ರಮ ಕೈಗೊಳ್ಳದಿದ್ದರೆ ಜಿಲ್ಲೆಯಾದ್ಯಂತ ಪ್ರತಿ ಭಟಿಸಲಾಗುವುದು ಎಂದರು.
ಸೋಮವಾರಪೇಟೆ ತಾಲ್ಲೂಕು ಯುವ ಒಕ್ಕೂಟದ ಅಧ್ಯಕ್ಷ ರವಿ, ಗಾಳಿಬೀಡು ಯುವಕ ಸಂಘದ ಅಧ್ಯಕ್ಷ ಉಡುದೋಳಿ ಗಿರೀಶ್, ಕಾರ್ಯದರ್ಶಿ ನವೀನ್ ದೇರಳ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.