ಮಂದ್ಸೌರ್: ರೈತರ ಹೋರಾಟದ ಕೇಂದ್ರ ಬಿಂದುವಾದ ಮಂದ್ಸೌರ್ ಜಿಲ್ಲೆಯಲ್ಲಿ ಪರಿಸ್ಥಿತಿ ಶನಿವಾರ ಶಾಂತವಾಗಿತ್ತು. ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಕರ್ಫ್ಯೂ ಸಡಿಲಿಸಲಾಗಿತ್ತು.
ಪರಿಸ್ಥಿತಿ ಶಾಂತವಾಗಿದ್ದ ಕಾರಣ ಅಂಗಡಿಗಳು ತೆರೆದವು ಮತ್ತು ಜನರು ಅಗತ್ಯ ವಸ್ತುಗಳನ್ನು ಖರೀದಿಸಿದರು. ಜಿಲ್ಲೆಯಲ್ಲಿ ಯಾವುದೇ ಹಿಂಸಾಕೃತ್ಯ ನಡೆದ ಬಗ್ಗೆ ವರದಿಯಾಗಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಭಾನುವಾರ ಕರ್ಫ್ಯೂ ಹಿಂತೆಗೆಯಲಾಗುವುದು ಎಂದು ಜಿಲ್ಲಾಧಿಕಾರಿ ಒ.ಪಿ. ಶ್ರೀವಾತ್ಸವ ತಿಳಿಸಿದರು.
ಗೋಲಿಬಾರ್ ಬಳಿಕ ಇಲ್ಲಿ ಕರ್ಫ್ಯೂ ಹೇರಲಾಗಿತ್ತು. ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಅಂತರ್ಜಾಲ ಸೇವೆಯ ಮೇಲಿನ ನಿರ್ಬಂಧ ಈಗಲೂ ಮುಂದುವರಿದಿದೆ.
ಸಚಿವರ ಕಾರಿಗೆ ಮೊಟ್ಟೆ ಎಸೆತ
ಭುವನೇಶ್ವರ : ಮಂದ್ಸೌರ್ನಲ್ಲಿ ಪೊಲೀಸರ ಗುಂಡಿಗೆ ರೈತರು ಬಲಿಯಾಗಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಒಡಿಶಾ ಯುವ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಕೃಷಿ ಸಚಿವ ರಾಧಾಮೋಹನ್ ಸಿಂಗ್ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಮೊಟ್ಟೆ ಎಸೆದು, ಕಪ್ಪು ಬಾವುಟ ಪ್ರದರ್ಶಿಸಿದರು.
ಕೇಂದ್ರ ಸರ್ಕಾರದ ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿಂಗ್ ಅವರು ಭುವನೇಶ್ವರಕ್ಕೆ ಬಂದಿದ್ದರು.