ಬೆಂಗಳೂರು: ಚಿನ್ನದ ಬಿಸ್ಕತ್ಗಳಿಗೆ ಚಾಕಲೇಟ್ ಕವಚ ಸುತ್ತಿ ಕಳ್ಳಸಾಗಣೆ ಮಾಡುತ್ತಿದ್ದ ಪ್ರಯಾಣಿಕರೊಬ್ಬರನ್ನು ಬಂಧಿಸಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಇಂಟೆಲಿಜೆನ್ಸ್ ಅಧಿಕಾರಿಗಳು, ₹34.29 ಲಕ್ಷ ಮೌಲ್ಯದ ಚಿನ್ನ ಜಪ್ತಿ ಮಾಡಿದ್ದಾರೆ.
‘ಇಂಡಿಗೊ ಏರ್ಲೈನ್ಸ್ ವಿಮಾನದಲ್ಲಿ ದುಬೈನಿಂದ ಬಂದಿದ್ದ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಈ ಪೈಕಿ ಒಬ್ಬ ಪ್ರಯಾಣಿಕನ ಬಳಿ ಚಾಕಲೇಟ್ಗಳು ಸಿಕ್ಕಿದ್ದವು. ಅವುಗಳ ಕವಚ ತೆಗೆದು ನೋಡಿದಾಗ ಅದರೊಳಗೆ ಚಿನ್ನದ ಬಿಸ್ಕತ್ ಇರುವುದು ಗೊತ್ತಾಯಿತು. ಇಂತಹ 10 ಬಿಸ್ಕತ್ಗಳು ಸಿಕ್ಕಿವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
‘ಆರೋಪಿಯು ಉದ್ಯಮಿಯಾಗಿದ್ದು, ಸಂಬಂಧಿಕರನ್ನು ಭೇಟಿಯಾಗಲು ಬೆಂಗಳೂರಿಗೆ ಬಂದಿದ್ದರು. ಚಿನ್ನದ ಬಿಸ್ಕತ್ ಸಾಗಣೆಗೆ ಅಗತ್ಯ ದಾಖಲೆಗಳನ್ನು ಅವರು ತೋರಿಸಿಲ್ಲ’ ಎಂದರು.
ಖೋಟಾ ನೋಟು ಜಪ್ತಿ: ಇನ್ನೊಂದು ಪ್ರಕರಣದಲ್ಲಿ, ವಿಮಾನ ನಿಲ್ದಾಣದಿಂದ ಬ್ಯಾಂಕಾಂಕ್ಗೆ ಹೊರಟಿದ್ದ ಮಹಮ್ಮದ್ ಅಹ್ಮದ್ ಎಂಬುವರನ್ನು ಬಂಧಿಸಿದ ಅಧಿಕಾರಿಗಳು, ಅವರಿಂದ ಖೋಟಾ ನೋಟುಗಳನ್ನು ಜಪ್ತಿ ಮಾಡಿದ್ದಾರೆ.
ಪ್ರಯಾಣಕ್ಕೂ ಮುನ್ನ ಆರೋಪಿಯು ನಿಲ್ದಾಣದಲ್ಲಿರುವ ಬ್ಯಾಂಕ್ಗೆ ಹಣ ಜಮೆ ಮಾಡಲು ಹೋಗಿದ್ದರು. ಅಲ್ಲಿಯ ಸಿಬ್ಬಂದಿ ಪರಿಶೀಲಿಸಿದಾಗ ಅವು ನಕಲಿ ಎಂಬುದು ಗೊತ್ತಾಗಿತ್ತು. ಬಳಿಕ ಕಸ್ಟಮ್ಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
‘ಆರೋಪಿಯ ಬಳಿ ವಿವಿಧ ದೇಶಗಳ ₹1.14 ಕೋಟಿ ಹಾಗೂ ಭಾರತದ ₹24 ಸಾವಿರ ಮೌಲ್ಯದ (₹ 100 ಮುಖಬೆಲೆ) ಖೋಟಾ ನೋಟುಗಳು ಸಿಕ್ಕಿವೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.