ನೆಲಮಂಗಲ: ‘ಗರೀಬಿ ಹಠಾವೊ ಘೋಷಣೆ ಮಾಡಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ತನ್ನ ಗರೀಬಿ ಹಠಾವೊ ಮಾಡಿಕೊಂಡಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಟೀಕಿಸಿದರು.
ಲೋಹಿತ್ ನಗರದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ‘ಜನಸಂಪರ್ಕ ಅಭಿಯಾನ’ ಹಾಗೂ ‘ನಮ್ಮ ನಡಿಗೆ ದೀನ ದಿಲಿತರ ಮನೆಯಡಿಗೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಭೀಕರ ಬರಗಾಲ ಎದುರಿಸಿದರೂ ಸಿದ್ದರಾಮಯ್ಯ ಸರ್ಕಾರ ಒಂದು ರೂಪಾಯಿಯೂ ಬೆಳೆ ಸಾಲದ ಪರಿಹಾರ ನೀಡಲಿಲ್ಲ. ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆದುಕೊಳ್ಳುತ್ತಿರುವ ಅನ್ನ ಭಾಗ್ಯ ಯೋಜನೆಯನ್ನು ತಮ್ಮ ಸಾಧನೆ ಎಂದು ಹೇಳಿಕೊಂಡು ಸಿದ್ದರಾಮಯ್ಯ ಬೀಗುತ್ತಿದ್ದಾರೆ’ ಎಂದು ಹೇಳಿದರು.
‘ಎಲ್ಲ ನ್ಯಾಯಬೆಲೆ ಅಂಗಡಿಗಳ ಮುಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀಡುತ್ತಿರುವ ಸೌಲಭ್ಯವನ್ನು ಪ್ರತ್ಯೇಕವಾಗಿ ವಿವರಿಸುವ ಫಲಕಗಳನ್ನು ಹಾಕಬೇಕು’ ಎಂದು ಕಾರ್ಯಕರ್ತರಿಗೆ ಸೂಚಿಸಿದರು.
ಮಾಜಿ ಶಾಸಕ ಎಂ.ವಿ.ನಾಗರಾಜ್, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಬಿ. ಹೊಂಬಯ್ಯ ಮಾತನಾಡಿದರು. ಇದಕ್ಕೂ ಮುನ್ನ ಯಡಿಯೂರಪ್ಪ ಅವರು ದಲಿತ ಎಚ್.ಬೈಲಪ್ಪ ಅವರ ಮನೆಯಲ್ಲಿ ಇಡ್ಲಿ , ಚಟ್ನಿ ಉಪಹಾರ ಸೇವಿಸಿದರು.