ಪಣಜಿ: ಕರ್ನಾಟಕದ ಅನೇಕರಿಗೆ ರಾಷ್ಟ್ರಗೀತೆ ಹಾಡಲು ಬರುವುದಿಲ್ಲ ಎಂದು ಶಿವಸೇನಾ ಗೋವಾ ಘಟಕದ ಅಧ್ಯಕ್ಷ ಶಿವಪ್ರಸಾದ್ ಜೋಶಿ ಟೀಕಿಸಿದರು.
‘ಗೋವಾದ ಜನರು ದೇಶಪ್ರೇಮಿಗಳು. ಅನೇಕ ವಿದ್ಯಾರ್ಥಿಗಳು ಸಂಪೂರ್ಣವಾಗಿ ವಂದೇ ಮಾತರಂ ಗೀತೆಯನ್ನು ಹಾಡುತ್ತಾರೆ. ನಮ್ಮ ನೆರೆ ರಾಜ್ಯ ಕರ್ನಾಟಕದ ಅನೇಕರಿಗೆ ರಾಷ್ಟ್ರಗೀತೆ ಹಾಡಲು ಬರುವುದಿಲ್ಲ. ಅವರಿಗೆ ನಮ್ಮ ರಾಷ್ಟ್ರಪಿತರ ಬಗ್ಗೆಯೂ ಗೊತ್ತಿಲ್ಲ’ ಎಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಹೇಳಿದರು.
ಶ್ರೀರಾಮ ಸೇವಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರನ್ನು ಹೊಗಳಿರುವ ಜೋಶಿ, ಮುತಾಲಿಕ್ ಅವರು ಕರ್ನಾಟಕದಲ್ಲಿ ಗಮನಾರ್ಹ ಕೆಲಸ ಮಾಡಿದ್ದಾರೆ. ಮುತಾಲಿಕ್ ಮಹಿಳೆಯರ ರಕ್ಷಕ ಎಂದರು.
ಶ್ರೀರಾಮ ಸೇನಾ ಕಾರ್ಯಕರ್ತರು 2009ರಲ್ಲಿ ಮಂಗಳೂರಿನಲ್ಲಿ ಪಬ್ಮೇಲೆ ದಾಳಿ ನಡೆಸುವ ಮೂಲಕ ‘ಪಬ್ ಸಂಸ್ಕೃತಿ ನಮ್ಮದಲ್ಲ’ ಎಂದು ನಮ್ಮ ಸಹೋದರಿಯರಿಗೆ ಮನವರಿಕೆ ಮಾಡಿದ್ದಾರೆ ಎಂದರು.
ಪಬ್ ಸಂಸ್ಕೃತಿಯನ್ನು ನಿಷೇಧಿಸಬೇಕು ಎಂದು ಶಿವಸೇನಾ ಒತ್ತಾಯಿಸುವುದಿಲ್ಲ. ಆದರೆ, ತಡ ರಾತ್ರಿಯಲ್ಲಿ ಪಬ್ಗಳಲ್ಲಿ ನಡೆಯುವ ಅಹಿತಕರ ಘಟನೆಗಳನ್ನು ವಿರೋಧಿಸುವುದಾಗಿ ಹೇಳಿದರು.
‘ನೀವು ರಾತ್ರಿ 12 ಗಂಟೆಗೆ ಪಬ್ಗೆ ಭೇಟಿ ನೀಡಿ. ಯುವಕರು ಮತ್ತು ಯುವತಿಯರು ಪಬ್ನ ಹೊರಗಡೆ ಕುಳಿತು ಕುಡಿಯುತ್ತಿರುತ್ತಾರೆ. ಅದು ಸರಿಯೇ? ಪ್ರವಾಸಿಗರು ಏನು ಮಾಡುತ್ತಾರೆ ಎಂಬ ಬಗ್ಗೆ ನಾವು ಚಿಂತಿಸುವುದಿಲ್ಲ. ಆದರೆ ನಮ್ಮ ಸ್ಥಳೀಯ ಯುವಜನತೆ ಹಾಗೆ ಮಾಡಿದಾಗ ಅವರಿಗೆ ಅರಿವು ಮೂಡಿಸುವುದು ನಮ್ಮ ಕರ್ತವ್ಯ’ ಎಂದರು.
ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಗೋವಾ ಪ್ರವೇಶಿಸದಂತೆ ನಿರ್ಬಂಧ ಹೇರಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಮುತಾಲಿಕ್ ಗೋವಾ ಪ್ರವೇಶಕ್ಕೆ ಶಿವಸೇನಾ ಬೆಂಬಲ ನೀಡುತ್ತದೆ ಎಂದಿದ್ದಾರೆ.