ನವದೆಹಲಿ: ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರನ್ನು ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ‘ಬೀದಿಯ ಗೂಂಡಾ’ನಿಗೆ (ಸಡಕ್ ಕಾ ಗೂಂಡಾ) ಹೋಲಿಸುವ ಮೂಲಕ ಹೊಸ ವಿವಾದ ಹುಟ್ಟು ಹಾಕಿದ್ದಾರೆ.
ದೀಕ್ಷಿತ್ ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಲೇ ಕಾಂಗ್ರೆಸ್ ಈ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ. ದೀಕ್ಷಿತ್ ಅವರನ್ನು ಕಾಂಗ್ರೆಸ್ನಿಂದ ಉಚ್ಚಾಟಿಸುವಂತೆ ಒತ್ತಾಯಿಸಿರುವ ಬಿಜೆಪಿ, ಸೋನಿಯಾ ಗಾಂಧಿ ಅವರು ಕ್ಷಮೆ ಯಾಚಿಸುವಂತೆ ಪಟ್ಟು ಹಿಡಿದಿದೆ.
ಸಂದೀಪ್ ಅವರು ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್ ಅವರ ಪುತ್ರ ಹಾಗೂ ಕಾಂಗ್ರೆಸ್ನ ಮಾಜಿ ಸಂಸದ.
‘ಪಾಕಿಸ್ತಾನದ ಸೇನೆಯಂತೆ ನಮ್ಮ ಸೇನೆ ಮಾಫಿಯಾ ಸೇನೆಯಲ್ಲ. ನಮ್ಮದು ಉತ್ತಮ ಸುಸಂಸ್ಕೃತ ಹಿನ್ನೆಲೆಯುಳ್ಳ ಸೇನೆ. ಆದರೆ, ಅಂತಹ ಹಿನ್ನೆಲೆಯುಳ್ಳ ಸೇನೆಯ ಮುಖ್ಯಸ್ಥರು ಪಾಕಿಸ್ತಾನದ ಸೇನೆಯ ರೀತಿಯಲ್ಲಿ ಬೀದಿಯ ಗೂಂಡಾನಂತೆ ಹೇಳಿಕೆ ನೀಡುತ್ತಿರುವುದು ನಿಜಕ್ಕೂ ವಿಷಾದನೀಯ’ ಎಂದು ಸಂದೀಪ್ ದೀಕ್ಷಿತ್ ಹೇಳಿದ್ದಾರೆ.
ತಾವು ಬಳಸಿರುವ ಗೂಂಡಾ ಪದವನ್ನು ಸಮರ್ಥಿಸಿಕೊಂಡು ಟ್ವೀಟ್ ಮಾಡಿರುವ ಅವರು, ಕ್ಷಮೆಯಾಚಿಸಿದ್ದಾರೆ.
*
ಸೇನೆಯ ಮುಖ್ಯಸ್ಥರಾದವರು ರಾಜಕೀಯ ಪ್ರೇರಿತ ಹೇಳಿಕೆ ನೀಡಬಾರದು. ಸಭ್ಯತೆಯ ಎಲ್ಲೆ ಮೀರಬಾರದು.
ಸಂದೀಪ್ ದೀಕ್ಷಿತ್
ಕಾಂಗ್ರೆಸ್ ನಾಯಕ