ಬೆಂಗಳೂರು: ನಗರದ ಕೆಂಗೇರಿ ನಿಲ್ದಾಣಕ್ಕೆ ಬಂದಿದ್ದ ‘ಸೈನ್ಸ್ ಎಕ್ಸ್ಪ್ರೆಸ್’ ಸಂಚಾರಿ ವಿಜ್ಞಾನ ವಸ್ತುಪ್ರದರ್ಶನವನ್ನು ನೋಡಲು ಜನರು ಮುಗಿಬಿದ್ದರು.
ಸಾವಿರಾರು ವಿದ್ಯಾರ್ಥಿಗಳು ಹಾಗೂ ಪೋಷಕರು ಹವಾಮಾನ, ಪರಿಸರಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಮಾಹಿತಿ ಪಡೆದರು.
ಜಾಗತಿಕ ತಾಪಮಾನ ಹೆಚ್ಚಳ, ಪರಿಸರ ರಕ್ಷಣೆ, ಇಂಧನ ಸಂಪನ್ಮೂಲಗಳ ಸದ್ಬಳಕೆ, ನೀರಿನ ಮಿತ ಬಳಕೆ, ಸೌರ ಶಕ್ತಿಯ ಬಳಕೆ, ಆರೋಗ್ಯ ರಕ್ಷಣೆ, ಸಮೂಹ ಸಾರಿಗೆಯ ಮಹತ್ವದ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಛಾಯಾಚಿತ್ರಗಳು ಹಾಗೂ ಪ್ರತಿಕೃತಿಗಳು ಪ್ರೇಕ್ಷಕರ ಗಮನ ಸೆಳೆಯಿತು.
ಇಂಗಾಲ ಹೆಚ್ಚಳದ ಪರಿಣಾಮ, ಅರಣ್ಯ ಪ್ರದೇಶ ಕಡಿಮೆ ಆಗುತ್ತಿರುವುದು, ಇಂಧನದ ಅಪರಿಮಿತ ಬಳಕೆ, ಅನೈರ್ಮಲ್ಯ, ಜೀವವೈವಿಧ್ಯದ ಮೇಲೆ ಉಂಟಾಗುತ್ತಿರುವ ಪರಿಣಾಮವನ್ನು ಬಿಂಬಿಸುವ ಪ್ರತಿಕೃತಿಗಳು ಇದ್ದವು.
ಜನಜಂಗುಳಿ: ನಿರೀಕ್ಷೆಗೂ ಮೀರಿ ಜನರು ವಸ್ತುಪ್ರದರ್ಶನಕ್ಕೆ ಬಂದಿದ್ದರಿಂದ ನೂಕುನುಗ್ಗಲು ಉಂಟಾಯಿತು. ಈ ವೇಳೆ ಪೊಲೀಸರು ಹಾಗೂ ಪ್ರೇಕ್ಷಕರ ನಡುವೆ ವಾಗ್ವಾದವೂ ನಡೆಯಿತು. ಮಕ್ಕಳಿಗಾಗಿ ಸಿದ್ಧಪಡಿಸಿದ್ದ ಬೋಗಿಯಲ್ಲಿ ನೂಕುನುಗ್ಗಲು ಉಂಟಾಗಿದ್ದರಿಂದ ಕೆಲ ಸಮಯ ಪ್ರವೇಶ ನಿರ್ಬಂಧಿಸಲಾಗಿತ್ತು.
‘ವಿಜ್ಞಾನ ವಸ್ತುಪ್ರದರ್ಶನದಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಪರಿಸರ ಹಾಗೂ ಅದರ ಮಹತ್ವದ ಬಗ್ಗೆ ತಿಳಿದುಕೊಳ್ಳುವಂತಾಯಿತು’ ಎಂದು ಪ್ರೇಕ್ಷಕ ನವೀನ್ ಹೇಳಿದರು.