ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಲ ವೃದ್ಧಿಗೆ ಉದ್ಯೋಗ ಖಾತರಿ ನೆರವು

Last Updated 12 ಜೂನ್ 2017, 6:03 IST
ಅಕ್ಷರ ಗಾತ್ರ

ಹಳೇಬೀಡು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಂಡಿರುವ ವೇದಾವತಿ ನದಿ ಪುನಶ್ಚೇತನ ಯೋಜನೆ ಕೂಲಿ ಕಾರ್ಮಿಕರಿಗೆ ಉದ್ಯೋಗ ಒದಗಿಸುವ ಜೊತೆಗೆ ಅಂತರ್ಜಲ ಹೆಚ್ಚಳದ ಭರವಸೆಯನ್ನು ಮೂಡಿಸಿದೆ. ಬೇಲೂರು ತಾಲ್ಲೂಕಿನ 15 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಂಡಿ
ರುವ ಕಾಮಗಾರಿ ಹಳೇಬೀಡು ಗ್ರಾಮ ಪಂಚಾಯತಿಯಲ್ಲಿ ನಡೆಯುತ್ತಿದೆ.

ವೇದಾವತಿ ನದಿಗೆ ಜೀವನಾಧಾರವಾದ ಹಳ್ಳಗಳಲ್ಲಿ18 ಸ್ಥಳದಲ್ಲಿ ಕಲ್ಲುಗುಂಡುಗಳ ತಡೆ, 12 ಕಡೆ ಇಂಗುಬಾವಿ ನಿರ್ಮಿಸಲಾಗಿದೆ. ಕಳೆದ ತಿಂಗಳು ಮಳೆ ಬಂದಾಗ ಕಲ್ಲುಗುಂಡು ತಡೆ ಹಾಗೂ ಇಂಗು ಬಾವಿಗಳಲ್ಲಿ ನೀರು ತುಂಬಿಕೊಂಡಿತ್ತು.

ಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚಳವಾಗುತ್ತದೆ ಎಂದು ರೈತವರ್ಗ ಆಶಿಸಿತ್ತು. ಅಂದು ಬಿದ್ದ ಜೋರು ಮಳೆ ಮುಂದುವರೆಯದೆ ರೈತರನ್ನು ನಿರಾಸೆಗೆ ದೂಡಿದೆ.
‘2015–16ನೇ ಸಾಲಿನಲ್ಲಿ 27 ಕಾಮಗಾರಿ ಪೂರ್ಣಗೊಳಿಸಲಾಗಿದೆ. ₹ 58200 ವೆಚ್ಚದಲ್ಲಿ ಕಲ್ಲುಗುಂಡುಗಳ ತಡೆ ಕಾಮಗಾರಿ ನಿರ್ವಹಿಸಲಾಗಿದೆ. ₹ 59100 ವೆಚ್ಚದಲ್ಲಿ ಇಂಗುಬಾವಿ ಕಾಮಗಾರಿ ನಡೆದಿದೆ ಎಂದು ಗ್ರಾ.ಪಂ ಅಧ್ಯಕ್ಷೆ ಗೌರಮ್ಮ ಹೇಳಿದರು.

2016–17ರಲ್ಲಿಯೂ ವೇದಾವತಿ ನದಿ ಪುನಶ್ಚೇತನ ಕಾಮಗಾರಿ ಅನುಷ್ಟಾನಗೊಂಡಿದೆ. ಅಂತರ್ಜಲ ವೃದ್ದಿ ಹಾಗೂ ನದಿ ಪುನಶ್ಚೇತನಕ್ಕಾಗಿ ಸರ್ಕಾರ ಕೊಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದೆ. ಉದ್ಯೋಗ ಖಾತರಿ ಯೋಜನೆ ನಿಯಮದ ಪ್ರಕಾರ ಯಂತ್ರ ಬಳಕೆ ಇಲ್ಲದೆ ಮಾನವ ಶಕ್ತಿಯಿಂದ ಕಾಮಗಾರಿ ಕೈಗೊಳ್ಳಲಾಗಿದೆ.

ಒಬ್ಬ ವ್ಯಕ್ತಿಗೆ ವರ್ಷಕ್ಕೆ 100 ದಿನ ದಿನಗೂಲಿ ಉದ್ಯೋಗ ಕಲ್ಪಿಸಲಾಗುತ್ತಿದೆ. ಲಿಂಗತಾರತಮ್ಯ ವಿಲ್ಲದೆ ದಿನಕ್ಕೆ ₹ 236 ಕೂಲಿ ನೀಡಲಾಗುತ್ತಿದೆ. ಆದಾರ್‌ ಸಂಖ್ಯೆ ಜೋಡಣೆ
ಯಾದ ಕಾರ್ಮಿಕರ ಖಾತೆಗೆ ನೇರ ಹಣ ಜಮೆಯಾಗಲಿದೆ ಎನ್ನುತ್ತಾರೆ ಪಂಚಾಯತಿ ಅಭಿವೃದ್ದಿ ಅಧಿಕಾರಿ ಕೆ.ಹರೀಶ್‌.

ವೇದಾವತಿ ನದಿ ಯಾವುದು?: ವೇದಾವತಿ ನದಿ ಬಗ್ಗೆ ಜನಸಾಮಾನ್ಯರಲ್ಲಿ ಈ ನದಿ ಯಾವುದು? ಎಂಬ ಪ್ರಶ್ನೆ ಉದ್ಬವಿಸಿದೆ. ಇತ್ತಿಚೀನ ಪೀಳಿಗೆಗೆ ಈ  ನದಿಯ ಬಗ್ಗೆ ಮಾಹಿತಿ ಇಲ್ಲ. ಚಿತ್ರದುರ್ಗ ಜಿಲ್ಲೆಯ ಮಾರಿಕಣಿವೆ ಎಂಬ ಪರ್ವತದಲ್ಲಿ ಹರಿಯುತ್ತಿದ್ದ ವೇದಾವತಿ ನದಿ ಪುರಾತನವಾದದ್ದು. ಬೇಲೂರು ತಾಲ್ಲೂಕಿನ ಹಳೇಬೀಡು ಭಾಗದಲ್ಲಿ ಹರಿಯುವ ಹಳ್ಳದ ನೀರು ನದಿಗೆ ಸೇರಿ ಹರಿಯುತ್ತಿತ್ತು.

ಕಾಲಘಟ್ಟ ಸರಿದಂತೆ ಮಳೆಯ ಕೊರತೆಯಿಂದ ನದಿಗೆ ಆಧಾರವಾಗಿದ್ದ ಹಳ್ಳಗಳಲ್ಲಿ ನೀರು ಹರಿಯದಂತಾಯಿತು. ಹೀಗಾಗಿ ವೇದಾವತಿ ನದಿ ಬಹು ವರ್ಷ ಹೇಳ ಹೆಸರಿಲ್ಲದಂತಾಯಿತು. ಇದೀಗ ನೀರಾವರಿ ತಜ್ಞರು ನದಿಯ ಅವಶೇಷ ಪತ್ತೆಹಚ್ಚಿದರು. ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೊಜನೆ ಅಡಿಯಲ್ಲಿ ನದಿ ಪನಶ್ಚೇತನ ಕಾರ್ಯ ಕೈಗೊಂಡಿದೆ ಎನ್ನುತ್ತಾರೆ ಜನಪ್ರತಿನಿಧಿಗಳು.

* * 

ವೇದಾವತಿ ನದಿ ಪುನಶ್ಚೇತನ ಯೋಜನೆಯಿಂದ ಅಂತರ್ಜಲ ವೃದ್ಧಿಸಲಿದೆ. ಈ ವರ್ಷ ಉದ್ಯೋಗ ಖಾತರಿ ಯೋಜನೆ ನೆರವಿನಲ್ಲಿ ಕಾಮಗಾರಿ ಮುಂದುವರಿದಿದೆ
ಗೌರಮ್ಮ
ಗ್ರಾಮ ಪಂಚಾಯತಿ ಅಧ್ಯಕ್ಷೆ

* * 

ಬರ ಸ್ಥಿತಿಯ ಕಾರಣ  ಕೃಷಿ ಕೂಲಿ ಕಾರ್ಮಿಕರು ಗುಳೆ ಹೋಗಬಾರದು. ಉದ್ಯೋಗ ಖಾತರಿ ಕುರಿತು ಕಚೇರಿಗೆ ಭೇಟಿ ನೀಡಿ ಕಾಮಗಾರಿ ವಿವರ ಪಡೆಯಬಹುದು
ಕೆ.ಹರೀಶ್‌
ಪಂಚಾಯತಿ ಅಭಿವೃದ್ಧಿ ಅಧಿಕಾರಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT