ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರಿಯಾಗದ ಆದಿವಾಸಿ ಅರಣ್ಯ ಹಕ್ಕು ಕಾಯ್ದೆ

Last Updated 12 ಜೂನ್ 2017, 11:41 IST
ಅಕ್ಷರ ಗಾತ್ರ

ರಾಮನಗರ: ‘ಅರಣ್ಯವಾಸಿಗಳ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ಕೇಂದ್ರ ಸರ್ಕಾರ 2006ರಲ್ಲಿ ಜಾರಿಗೊಳಿಸಿರುವ ಆದಿವಾಸಿ ಅರಣ್ಯ ಹಕ್ಕು ಕಾಯ್ದೆ ಇಲ್ಲಿಯವರೆಗೂ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಇದರಿಂದ ಆದಿವಾಸಿಗಳು ತೀವ್ರ ಸಮಸ್ಯೆ ಎದುರಿಸು­ವಂತಾಗಿದೆ’ ಎಂದು ಸಿಪಿಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಆರೋಪಿಸಿದರು.

ಆದಿವಾಸಿ ಜನರಿಗೆ ಹಕ್ಕುಪತ್ರ ವಿತರಣೆಗೆ ಆಗ್ರಹಿಸಿ ನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ನಡೆಯುತ್ತಿರುವ ಧರಣಿಯ ಸ್ಥಳಕ್ಕೆ ಭಾನುವಾರ ಸಂಜೆ ಭೇಟಿ ನೀಡಿ ಅವರು ಮಾತನಾಡಿದರು.

‘ತಲತಲಾಂತರಗಳಿಂದ ಅನುಭವಿಸಿ-­ಕೊಂಡು ಬಂದಿರುವ ಅರಣ್ಯ ಭೂಮಿ­ಯನ್ನು ಅವರಿಗೇ ಬಿಟ್ಟುಕೊಡಬೇಕು ಎಂದು ಕೇಂದ್ರ ಸರ್ಕಾರ ಆದೇಶಿಸಿದೆ. ಆದರೆ ಅಧಿಕಾರಿ ವರ್ಗ ಹಾಗೂ ಚುನಾಯಿತ ಪ್ರತಿನಿಧಿಗಳು ಈ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಅರಣ್ಯ ಹಕ್ಕು ಕಾಯ್ದೆಯನ್ನು ಅನುಷ್ಠಾನಗೊಂಡು ಹತ್ತು ವರ್ಷಗಳಾಗುತ್ತಿದೆ. ಇಲ್ಲಿಯವರೆಗೂ ಆದಿವಾಸಿಗಳಿಗೆ ಹಕ್ಕು ಪತ್ರ ಸಿಕ್ಕಿಲ್ಲ. ಸಿಪಿಎಂ ಕೇಂದ್ರದ ಮೇಲೆ ಒತ್ತಡ ಹೇರಿ 2006ರಲ್ಲಿ  ಜಾರಿಗೊಳಿಸಿದ್ದ ಅರಣ್ಯ ಹಕ್ಕು ಕಾಯ್ದೆಯ ಸಮರ್ಪಕ ಬಳಕೆಗೆ ಆದಿವಾಸಿಗಳು ಮುಂದಾದರೂ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಅವರು ಹಕ್ಕುಪತ್ರಕ್ಕಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ’ ಎಂದು ತಿಳಿಸಿದರು.

ಇರುಳಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ ‘310 ಅರ್ಜಿಗಳನ್ನು ಇತ್ಯರ್ಥ ಮಾಡಲಾಗಿದೆ. ಉಳಿದ ಅರ್ಜಿಗಳ ಬಗ್ಗೆಯೂ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಡಳಿತ ಕೇವಲ ಬಾಯಿಮಾತಿನಲ್ಲಿ ಹೇಳುತ್ತಿದೆ. ಸರ್ವೆ ಕಾರ್ಯ ನಡೆದು ಆರೇಳು ತಿಂಗಳು ಕಳೆದರೂ ಹಕ್ಕುಪತ್ರ ವಿತರಿಸಿಲ್ಲ’ ಎಂದು ಅವರು ತಿಳಿಸಿದರು.

‘ತಲತಲಾಂತರಗಳಿಂದ ಅನುಭವಿಸಿ-­ಕೊಂಡು ಬಂದಿರುವ ಅರಣ್ಯ ಭೂಮಿ­ಯನ್ನು ಅವರಿಗೇ ಬಿಟ್ಟುಕೊಡಬೇಕು ಎಂದು ಕೇಂದ್ರ ಸರ್ಕಾರ ಆದೇಶಿಸಿದೆ. ಜಿಲ್ಲೆಯಲ್ಲಿ ಈ ಕಾಯ್ದೆ ಸಮರ್ಪಕವಾಗಿ ಜಾರಿಗೊಳಿಸಿ ವೈಯ­ಕ್ತಿಕ ಹಕ್ಕುಪತ್ರ ಮತ್ತು ಸಮುದಾಯಿಕ ಹಕ್ಕು ಪತ್ರ ಒದಗಿಸಬೇಕು. ಅರಣ್ಯ ಭೂಮಿಯಿಂದ ಹಾಗೂ ಮೂಲ ನೆಲೆಯಿಂದ ಅರಣ್ಯ­ವಾಸಿಗಳನ್ನು ಒಕ್ಕಲೆಬ್ಬಿ­ಸ­ಬಾರದು. ಈಗಾಗಲೇ ಒಕ್ಕಲೆ­ಬ್ಬಿಸಿ­­ರುವ ಅರಣ್ಯವಾಸಿಗಳಿಗೆ ಪುನರ್‌­ವಸತಿ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಕೆ.ಎನ್. ಉಮೇಶ್, ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಎನ್. ಪ್ರತಾಪ್‌ ಸಿಂಹ, ಅಖಿಲ ಭಾರತ ವಕೀಲರ ಸಂಘದ ಸದಸ್ಯ ವೆಂಕಟೇಶ್‌ ಗೌಡ, ಸಿಐಟಿಯು ರಾಜ್ಯ ಕಾರ್ಯದರ್ಶಿ ಬಿ.ವಿ. ರಾಘವೇಂದ್ರ. ಸಮುದಾಯದ ಮುಖಂಡರಾದ ಗೋವಿಂದರಾಜು, ಪುನೀತ್ ರಾಜ್‌, ಮಹದೇವಯ್ಯ, ಶಿವರಾಜು, ರಾಮಾಂಜನೇಯ ಇದ್ದರು.

ಮಾದರಿ ಹೋರಾಟ
ಆದಿವಾಸಿಗಳು ತಮಗೆ ನ್ಯಾಯಯುತವಾಗಿ ದೊರೆಯಬೇಕಾಗಿರುವ ಹಕ್ಕುಪತ್ರಕ್ಕಾಗಿ 19 ದಿನಗಳಿಂದ ರಸ್ತೆ ಬದಿಯಲ್ಲಿ ಹೋರಾಟ ಮಾಡುತ್ತಿದ್ದಾರೆ. ಆದರೆ, ಇಲ್ಲಿಯವರೆಗೆ ಚುನಾಯಿತ ಪ್ರತಿನಿಧಿಗಳು ಇವರ ಸಮಸ್ಯೆಯನ್ನು ಬಗೆಹರಿಸಲು ಯಾವುದೇ ರೀತಿಯ ಕ್ರಮ ತೆಗೆದುಕೊಂಡಿಲ್ಲ ಎಂದು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹಸಂಚಾಲಕ ಎಸ್.ವೈ. ಗುರುಶಾಂತ್ ಆಕ್ಷೇಪಿಸಿದರು. ಇಲ್ಲಿ ನಡೆಯುತ್ತಿರುವ ಹೋರಾಟ ಇಡೀ ರಾಜ್ಯಕ್ಕೆ ಮಾದರಿಯಾಗಿದೆ’ ಎಂದು ಅವರು

ಅಭಿಪ್ರಾಯಪಟ್ಟರು.

* * 

ಹಕ್ಕುಪತ್ರಗಾಗಿ ನಡೆಯುತ್ತಿರುವ ಧರಣಿ ಕುರಿತು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಾಗುವುದು. ರಾಜ್ಯ ಸರ್ಕಾರ ಕೂಡಲೇ ಹಕ್ಕುಪತ್ರ ವಿತರಿಸಬೇಕು
ಸೀತಾರಾಂ ಯೆಚೂರಿ
ಸಿಪಿಎಂ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT