ಬೆಂಗಳೂರು: ಹೆಬ್ಬಾಳದ ನಿವಾಸಿ ಜ್ಯೋತಿ ಲಕ್ಷ್ಮಿ (49) ಎಂಬುವರ ಕಿವಿಯಿಂದ ಜೀವಂತ ಜೇಡರ ಹುಳುವನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ವೈದ್ಯರು ಹೊರಗೆ ತೆಗೆದಿದ್ದಾರೆ.
‘ಜ್ಯೋತಿ ಅವರು ಮನೆಯ ವರಾಂಡದಲ್ಲಿ ಮಧ್ಯಾಹ್ನ ಸ್ವಲ್ಪ ಸಮಯ ನಿದ್ದೆ ಮಾಡಿದ್ದಾರೆ. ನಿದ್ದೆಯಿಂದ ಎದ್ದ ಬಳಿಕ ಬಲ ಕಿವಿಯಲ್ಲಿ ಕಿರಿಕಿರಿ ಉಂಟಾಗಿದ್ದಲ್ಲದೆ, ತೀವ್ರವಾದ ನೋವು ಕಂಡುಬಂದಿದೆ. ಅವರು ಕೂಡಲೇ ಆಸ್ಪತ್ರೆಗೆ ಬಂದರು’ ಎಂದು ಆಸ್ಪತ್ರೆಯ ಕಿವಿ, ಮೂಗು, ಗಂಟಲು ವಿಭಾಗದ ಡಾ.ಎಸ್.ಸಂತೋಷ್ ತಿಳಿಸಿದರು.
‘ಸೂಕ್ಷ್ಮ ಸಲಕರಣೆಗಳನ್ನು ಬಳಸಿ ಕಿವಿಯೊಳಗೆ ಇದ್ದ ಜೇಡರ ಹುಳುವನ್ನು ಹೊರಗೆ ತೆಗೆದೆ. ಅವರಿಗೆ ಜೀವನಿರೋಧಕ ಔಷಧ ಮತ್ತು ಸೋಂಕು ಬರದಂತೆ ತಡೆಗಟ್ಟಲು ಕಿವಿಗೆ ಹಾಕುವ ಔಷಧ ನೀಡಿದ್ದೇನೆ’ ಎಂದರು.
‘ವೈದ್ಯಕೀಯ ನೆರವು, ಉಸ್ತುವಾರಿ ಇಲ್ಲದೆ ಕಿವಿಯಲ್ಲಿರುವ ಯಾವುದೇ ಜೀವಿಯನ್ನು ಹೊರ ತೆಗೆಯುವುದು ಅಪಾಯಕಾರಿ. ಕಿವಿಯ ತಮಟೆಗೆ ಘಾಸಿಯಾಗಿ ಕೇಳುವ ಶಕ್ತಿಯೇ ಹೋಗಿ ಬಿಡಬಹುದು. ಇಂತಹ ಸಂದರ್ಭದಲ್ಲಿ ವೈದ್ಯರ ಬಳಿ ಬರುವುದು ಒಳಿತು’ ಎಂದು ಹೇಳಿದರು.
‘ನನ್ನ ಕಿವಿಯೊಳಗೆ ಯಾವುದೋ ಜೀವಿಯ ಸರಿದಾಟದ ಅನುಭವವಾಗಿ ಭಯವಾಗಿತ್ತು. ಕಿವಿನೋವು ತೀವ್ರವಾಗಿ ಉಸಿರುಕಟ್ಟುವಂತಾಗಿತ್ತು. ವೈದ್ಯರು, ನಿಮ್ಮ ಕಿವಿಯೊಳಗೆ ಜೇಡರ ಹುಳುವಿದೆ ಎಂದಾಗ ನಾನು ಕಲ್ಲಾಗಿಬಿಟ್ಟಿದ್ದೆ’ ಎಂದು ಜ್ಯೋತಿ ಅನುಭವ ಹಂಚಿಕೊಂಡರು.