ಬಾಗಲಕೋಟೆ: ಕೇಂದ್ರ ಸರ್ಕಾರ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಹೆಸ ರಿನ ಸಮ್ಮೇಳನವನ್ನು ಇದೇ 13ರಂದು ನವನಗರದ ಕಲಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದರು.
ಸಮಾರಂಭದಲ್ಲಿ ಕೇಂದ್ರ ಕುಡಿವ ನೀರು ಮತ್ತು ನೈರ್ಮಲ್ಯ ಖಾತೆ ರಾಜ್ಯ ಸಚಿವ ರಮೇಶ ಜಿಗಜಿಣಗಿ, ಜಿಲ್ಲಾ ಉಸ್ತು ವಾರಿ ಸಚಿವೆ ಉಮಾಶ್ರೀ, ಶಾಸಕರಾದ ಸಿದ್ದು ನ್ಯಾಮಗೌಡ, ಜೆ.ಟಿ.ಪಾಟೀಲ, ಎಚ್.ವೈ.ಮೇಟಿ, ಬಿ.ಬಿ.ಚಿಮ್ಮನಕಟ್ಟಿ, ವಿಜಯಾನಂದ ಕಾಶಪ್ಪನವರ, ಗೋವಿಂದ ಕಾರಜೋಳ, ವಿಧಾನ ಪರಿ ಷತ್ ಸದಸ್ಯರಾದ ಎಸ್. ಆರ್.ಪಾಟೀಲ, ಹನುಮಂತ ನಿರಾಣಿ, ಆರ್.ವಿ.ತಿಮ್ಮಾ ಪುರ, ಅರುಣ ಶಹಾಪುರ ಹಾಗೂ ಬಸನಗೌಡ ಪಾಟೀಲ ಯತ್ನಾಳ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ರಾಜ್ಯದಿಂದ ಅಸಹಕಾರ: ಕೇಂದ್ರ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಹಲವು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಆದರೆ, ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಶಾಸಕರ ನಿರ್ಲಕ್ಷ್ಯ ಧೋರಣೆಯಿಂದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎಂದು ದೂರಿದರು.
ಸ್ಥಳೀಯ ಅಸಹಕಾರದಿಂದ ಕೇಂದ್ರದ ಬಹಳಷ್ಟು ಯೋಜನಗಳು ಸರಿಯಾದ ಚಾಲನೆಗೊಳ್ಳುತ್ತಿಲ್ಲ. ಚಾಲನೆ ಸಿಕ್ಕರೂ ಪೂರ್ಣಗೊಳ್ಳುತ್ತಿಲ್ಲ. ಬಾಗಲ ಕೋಟೆ–ಕುಡಚಿ ರೈಲ್ವೆ ಕಾಮಗಾರಿ ವಿಳಂಬವಾಗಲು ಇನ್ನೂ ರಾಜ್ಯದಿಂದ ಭೂಮಿ ವಶಪಡಿಸಿಕೊಳ್ಳುವಿಕೆ ಕಾರ್ಯ ಪೂರ್ಣಗೊಳ್ಳದಿರುವುದೇ ಪ್ರಮುಖ ಕಾರಣ. ರೈತರಿಗೆ ನ್ಯಾಯಯುತ ಬೆಲೆ ನೀಡಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿದರೆ ಯೋಜನೆ ತಕ್ಷಣ ಕಾರ್ಯಾರಂಭಗೊಳ್ಳಲಿದೆ ಎಂದು ತಿಳಿಸಿದರು.
ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡಿ: ಮನವಿ
ಬಾಗಲಕೋಟೆ: ನಗರದ ಗೌಳಿ ಸಮಾ ಜದ ಮರಿಯಮ್ಮ ದೇವಸ್ಥಾನಕ್ಕೆ ಸಮು ದಾಯ ಭವನ ನಿರ್ಮಾಣ ಮಾಡಲು ಅನುದಾನ ನೀಡಬೇಕು ಎಂದು ಒತ್ತಾಯಿಸಿ ಸಂಸದ ಪಿ.ಸಿ.ಗದ್ದಿಗೌಡರ ಅವರಿಗೆ ಗೌಳಿ ಸಮಾಜದ ವತಿಯಿಂದ ಭಾನುವಾರ ಮನವಿ ಸಲ್ಲಿಸಲಾಯಿತು.
ಮುಖಂಡ ನಾಗೋಜಿ ಲಂಗೋಟೆ ಮಾತನಾಡಿ, ಸಮಾಜದ ಸಂಘಟನೆ, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯ ಕ್ರಮ ನಡೆಸಲು ಭವನದ ಕೊರತೆ ಇದೆ. ಕೂಡಲೇ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ರಾಜು ಗೌಳಿ, ಬಾಬು ಗೌಳಿ, ಸಿದ್ದು ಗೌಳಿ, ನಾಗೇಶ ಗೌಳಿ ಸೇರಿದಂತೆ ಅನೇಕರು ಇದ್ದರು.
ರಾಜ್ಯ ರಾಜಕೀಯಕ್ಕೆ ಬರೊಲ್ಲ
ಸಂಸದನಾಗಿಯೇ ನಾನು ಸಂತೃಪ್ತನಾಗಿದ್ದೇನೆ. ಹಾಗಾಗಿ ರಾಜ್ಯ ರಾಜಕಾರಣಕ್ಕೆ ಬರುವ ಪ್ರಶ್ನೆಯೇ ಇಲ್ಲ. ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಗದ್ದಿಗೌಡರ, ಸಂಸದನಾಗಿ ಕೇಂದ್ರದಿಂದ ಹೆಚ್ಚಿನ ಅನುದಾನ ತರುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವೆ ಎಂದರು.
ಅಭಿವೃದ್ಧಿ ಕಾರ್ಯಗಳಲ್ಲಿ ಜನರ ಸಹಕಾರ ಅಗತ್ಯವಾಗಿದೆ. ಪ್ರಾಮಾಣಿಕ ವಾಗಿ ಕೆಲಸ ಮಾಡಿದರೂ ಸಹಿತ ಕೆಲವೊಮ್ಮೆ ಜನರ ವಿರೋಧ ಎದುರಿಸ ಬೇಕಾಗುತ್ತದೆ. ಮಹಾದಾಯಿ ವಿಚಾರ ನ್ಯಾಯ ಮಂಡಳಿಯಲ್ಲಿ ಇದ್ದು, ಅದರ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಸಮಸ್ಯೆ ಬೇಗನೆ ಪರಿಹಾರವಾಗುವ ನಂಬಿಕೆ ಇದೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.