ಬರ್ಮಿಂಗ್ಹ್ಯಾಂ: ಭಾರತ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ನನ್ನ ಬೌಲಿಂಗ್ ಪರಿಣಾಮಕಾರಿಯಾಗಿರಲಿದೆ ಎಂದು ಬಾಂಗ್ಲಾದೇಶ ತಂಡದ ವೇಗದ ಬೌಲರ್ ಮುಸ್ತಾಫಿಜುರ್ ರಹಮಾನ್ ಹೇಳಿಕೊಂಡಿದ್ದಾರೆ.
ಎರಡು ವರ್ಷಗಳ ಹಿಂದೆ ಭಾರತ ತಂಡ ಬಾಂಗ್ಲಾದೇಶ ಪ್ರವಾಸ ಕೈಗೊಂಡಿದ್ದ ವೇಳೆ ಆಡಿದ್ದ ಮುಸ್ತಾಫಿಜುರ್ ತಮ್ಮ ಆಫ್ಕಟರ್ ಶೈಲಿಯ ಬೌಲಿಂಗ್ ಮೂಲಕ ಭಾರತದ ಬ್ಯಾಟ್ಸ್ಮನ್ಗಳನ್ನು ಕಾಡಿದ್ದರು. ಹಾಗಾಗಿ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿನ ಅವರ ಪ್ರದರ್ಶನದ ಕುರಿತು ಅಭಿಮಾನಿಗಳಲ್ಲಿ ಸಹಜ ಕುತೂಹಲವಿದೆ.
ಉಭಯ ತಂಡಗಳು ಗುರುವಾರ ನಾಲ್ಕರ ಘಟ್ಟದ ಪಂದ್ಯದಲ್ಲಿ ಫೈನಲ್ ಪ್ರವೇಶಕ್ಕಾಗಿ ಸೆಣಸಲಿವೆ.
ಸದ್ಯ ಮುಸ್ತಾಫಿಜುರ್ ಪಂದ್ಯಾವಳಿಯಲ್ಲಿ ಆಡಿರುವ 3 ಪಂದ್ಯಗಳಿಂದ ಕೇವಲ ಒಂದು ವಿಕೆಟ್ ಪಡೆದಿದ್ದಾರೆ. ಉಪಖಂಡದ ಮೈದಾನಗಳಿಗೂ, ಇಂಗ್ಲೆಂಡ್ ಮೈದಾನಗಳಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಅವರ ಆಟ ಇಲ್ಲಿ ನಡೆಯುವುದಿಲ್ಲ ಎಂಬ ಮಾತುಗಳೂ ಕೇಳಿಬಂದಿವೆ.
ಈ ಬಗ್ಗೆ ಮಾತನಾಡಿರುವ ಮುಸ್ತಾಫಿಜುರ್, ‘ಕಲಿಯುವುದಕ್ಕೆ ಕೊನೆಯಿಲ್ಲ. ನನ್ನ ಬೌಲಿಂಗ್ ತವರು ಅಂಗಳಗಳಲ್ಲಿ ಪರಿಣಾಮಕಾರಿಯಾಗಿದೆ. ಇಲ್ಲಿ ನಿರೀಕ್ಷಿತ ಮಟ್ಟದಲ್ಲಿಲ್ಲ. ಆದರೆ ಉತ್ತಮವಾಗಿ ಆಡಲು ಪ್ರಯತ್ನಿಸುತ್ತೇನೆ’ ಎಂದು ಬಾಂಗ್ಲಾದೇಶ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
‘ನಾವು ಸೆಮಿಫೈನಲ್ ಪ್ರವೇಶಿಸಿದ್ದೇವೆ, ಭಾರತವನ್ನು ಎದುರಿದಲಿದ್ದೇವೆ. ಎಲ್ಲರೂ ಉತ್ಸುಕರಾಗಿದ್ದೇವೆ. ನಮ್ಮ ತಂಡ ಉತ್ತಮ ಫಲಿತಾಂಶ ಕಾಣಲಿದೆ ಎಂಬ ನಿರೀಕ್ಷೆಯಲ್ಲಿದ್ದೇನೆ’ ಎಂದು ಸಹ ಅವರು ಹೇಳಿದ್ದಾರೆ.
ಯಾವಾಗಲೂ ಅಂದುಕೊಂಡದ್ದನ್ನು ಮಾಡಲು ಯತ್ನಿಸುತ್ತೇನೆ. ನನ್ನಿಂದ ಸಾಧ್ಯವಾದಷ್ಟು ಉತ್ತಮವಾಗಿ ಆಡಲು ಬಯಸುತ್ತೇನೆ ಎಂದಿರುವ ಅವರು ಭಾರತದ ವಿರುದ್ಧ ನಾವು ಗೆಲ್ಲಬೇಕಾದರೆ ಉತ್ತಮವಾಗಿ ಆಡಬೇಕಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.