ಬೆಂಗಳೂರು: ರಾಜ್ಯದ ಬೀದರ್ ಹಾಗೂ ಕೊಡಗು ಜಿಲ್ಲೆಗಳಲ್ಲಿ ಮಂಗಳವಾರ ಮಳೆಯಾಗಿದೆ. ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕು ಹೆಬ್ಬಾಳ ಬಳಿಯ ಬೆಣ್ಣೆತೊರಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಜಲಾಶಯ ದಿಂದ ಮಂಗಳವಾರ 2,330 ಕ್ಯುಸೆಕ್ ನೀರನ್ನು ನದಿಗೆ ಹರಿಬಿಡಲಾಗಿದೆ.
‘ಜಲಾಶಯದ ಸದ್ಯದ ಒಳಹರಿವು 6,016 ಕ್ಯುಸೆಕ್ ಇದ್ದು, ಹೊರಹರಿವು 2,330 ಕ್ಯುಸೆಕ್ ಇದೆ. ನೀರು ಬಿಡುಗಡೆಯಿಂದ ಹಳೆ ಹೆಬ್ಬಾಳ, ಚಿಂಚೋಳಿ (ಎಚ್) ಸೇರಿ ಹಲವು ಗ್ರಾಮಗಳು ಸಂಪರ್ಕ ಕಡೆದುಕೊಳ್ಳುವ ಭೀತಿಯಲ್ಲಿವೆ’ ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ಪ್ರೇಮಸಿಂಗ್ ತಿಳಿಸಿದ್ದಾರೆ.
ಬೀದರ್ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಧಾರಾಕಾರ ಮಳೆ ಸುರಿಯಿತು. 24 ಗಂಟೆಗಳ ಅವಧಿಯಲ್ಲಿ ಬೀದರ್ ತಾಲ್ಲೂಕಿನಲ್ಲಿ 128 ಮಿ.ಮೀ ಮಳೆ ಸುರಿದಿದೆ. ಮಾಂಜರಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರಲಾರಂಭಿಸಿದೆ.
ಸೋಮವಾರ ರಾತ್ರಿ ಸುರಿದ ಮಳೆಗೆ ಬೀದರ್ ನಗರದ ಕೆಲ ರಸ್ತೆಗಳು ಕೊಚ್ಚಿ ಹೋಗಿವೆ. ರಸ್ತೆ ಮಧ್ಯೆ ತಗ್ಗು ಬಿದ್ದು ಕೆಲ ಹೊತ್ತು ಸಂಚಾರ ಸ್ಥಗಿತಗೊಂಡಿತ್ತು.
ಉತ್ತಮ ಮಳೆ: ಕೊಡಗು ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದೆ. ಭಾಗಮಂಡಲ, ತಲಕಾವೇರಿ, ನಾಪೋಕ್ಲು, ಗೋಣಿಕೊಪ್ಪ ಬೆಟ್ಟಗೇರಿ, ಸಂಪಾಜೆ ಭಾಗದಲ್ಲಿ ಸಂಜೆಯ ವೇಳೆ ಬಿರುಸಾಗಿ ಮಳೆಯಾಗಿದೆ.